ಬೆಳ್ತಂಗಡಿ ತಾಲೂಕಿನ ಕೊಕ್ರಾಡಿ ಸಮೀಪದ ಸವ್ಯದಲ್ಲಿರುವ ಉನ್ನತೀಕರಿಸಿದ ಸರಕಾರಿ ವಿದ್ಯಾಲಯದಲ್ಲಿ ಜನವರಿ 17ರಂದು ಪ್ಲಾಸ್ಟಿಕ್ ನಿಷೇಧ, ಪರಿಸರ ಮಾಹಿತಿ ಕಾರ್ಯಕ್ರಮವನ್ನು ನಡೆಸಲಾಯಿತು. ಬೆಂಗಳೂರಿನ ಸ್ಪಾರ್ಕ್ ಅಕಾಡೆಮಿಯ ತರಬೇತುದಾರ, ಸಂಪನ್ಮೂಲ ವ್ಯಕ್ತಿ, ಕಾರ್ಯನಿರತ ಪತ್ರಕರ್ತ ರಾಯಿ ರಾಜಕುಮಾರ ಉಪನ್ಯಾಸ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಅವರು ತಮ್ಮ ಉಪನ್ಯಾಸದಲ್ಲಿ ಜಾಗತಿಕ ತಾಪಮಾನಕ್ಕೆ ಕಾರಣವಾಗುವ ಅಂಶಗಳನ್ನು ವಿವರಿಸಿದರು. ತಾಪಮಾನವನ್ನು ಕಡಿಮೆ ಮಾಡಲು ಅಗತ್ಯವಿರುವ ಅಂಶಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು.

ಪ್ಲಾಸ್ಟಿಕ್ ನಿಷೇಧವನ್ನು ಮಾಡುವ ಅಗತ್ಯದ ಬಗ್ಗೆ ತಿಳಿಸಿ, ಪುನರ್ ಬಳಕೆಗಾಗಿ ಹೇಗೆ ಸಂಗ್ರಹಿಸಬೇಕು ಎನ್ನುವ ಮಾಹಿತಿಯನ್ನು ಕೂಡ ವಿದ್ಯಾರ್ಥಿಗಳಿಗೆ ಒದಗಿಸಿದರು. ಪ್ರಪಂಚದಲ್ಲಿರುವ ಜೀವ ವೈವಿಧ್ಯತೆಯಲ್ಲಿ ಮನುಷ್ಯನ ಸ್ಥಾನವನ್ನು ತಿಳಿಸಿಕೊಟ್ಟು ಶಕ್ತಿಯ ಉಳಿತಾಯಕ್ಕಾಗಿ ಮಾಡಬಹುದಾದ ಕ್ರಮಗಳನ್ನು ತಿಳಿಸಿದರು. ಪರಿಸರವನ್ನು ಉಳಿಸುವುದಕ್ಕಾಗಿ ಜೀವನ ಶೈಲಿಯಲ್ಲಿ ಮಾಡಬೇಕಾಗಿರುವ ಬದಲಾವಣೆಗಳ ಬಗ್ಗೆಯೂ ಕೂಡ ಸಂಪೂರ್ಣ ವಿವರಣೆಯನ್ನು ಮಾಹಿತಿಗಳೊಂದಿಗೆ ಉದಾಹರಣೆಯುಕ್ತವಾಗಿ ನೀಡಿದರು.


ವಿದ್ಯಾಲಯದ ಮುಖ್ಯಸ್ಥ ಸಂತೋಷ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರುಗಳಾದ ರೆನ್ನಿ ಫೆರ್ನಾಂಡಿಸ್ ಸ್ವಾಗತಿಸಿದರು. ಸುಮಿತ್ರ ಎನ್ ಕಾರ್ಯಕ್ರಮ ನಿರ್ವಹಿಸಿದರು. ಶರ್ಮಿಳಾ ಎಂ, ದೀಪಾ ಶೆಟ್ಟಿ, ಮಂಜುನಾಥ ಶೆಟ್ಟಿಗಾರ್ ಕಾರ್ಯಕ್ರಮ ಸಂಘಟಿಸಿದರು. ಪಂಜು ವಂದಿಸಿದರು.
