
ಲೇಖನ
ಹರೀಶ್ ಕೆ.ಆದೂರು ಪತ್ರಕರ್ತ
ಉಡುಪಿಯಿಂದ ನೆರೆಯ ಕಾಸರಗೋಡಿಗೆ ಅಂತರರಾಜ್ಯ 400ಕೆವಿ ಪವರ್ ಟ್ರಾನ್ಸ್ ಮಿಷನ್ ಲೈನ್ ಕಾಮಗಾರಿ ನಡೆಯುತ್ತಿದ್ದು, ಈ ಹಿನ್ನಲೆಯಲ್ಲಿ ಅನೇಕ ಕಡೆಗಳಲ್ಲಿ ಕೃಷಿ ಜಮೀನು ನಾಶವಾಗಿದೆ. ರೈತರಿಗೆ ಧೈರ್ಯ ತುಂಬುವ, ಅವರ ಕೃಷಿ ಚಟುವಟಿಕೆಗಳಿಗೆ ಪರ್ಯಾಯ ಮಾರ್ಗೋಪಾಯಗಳನ್ನು ತಿಳಿಸುವ ನಿಟ್ಟಿನಲ್ಲಿವರ್ಷ ಕ್ರಿಯೇಷನ್ಸ್ ಪ್ರಸ್ತುತಿಯ ಯಶ ಕರ್ನಾಟಕ’ ಮೂಡುಬಿದಿರೆಯ ಪತ್ರಕರ್ತರಿಗೆ ಜೋಗ ವ್ಯಾಪ್ತಿಯ ವಿದ್ಯುತ್ ಯೋಜನಾ ಪರಿಸರದ ಅಧ್ಯಯನಾತ್ಮಕ ಪ್ರವಾಸ ಏರ್ಪಡಿಸಿತ್ತು. ಇದೇ ಸಂದರ್ಭದಲ್ಲಿ ಮಾಧ್ಯಮ, ಹೋರಾಟ, ಪರಿಸರ, ಕೃಷಿ ಕ್ಷೇತ್ರಗಳಲ್ಲಿ ಅಪಾರ ಸಂಶೋಧನೆ, ಸಾಧನೆಗಳನ್ನು ಮಾಡಿದ ಪೂರ್ಣಪ್ರಜ್ಞ ಬೇಳೂರು ಜೊತೆಗೆ ಸಂವಾದ ಏರ್ಪಡಿಸಿತ್ತು. ಈ ಸಂದರ್ಭದಲ್ಲಿ ವ್ಯಕ್ತವಾದ ಮಾಹಿತಿಗಳ ಸಂಕ್ಷಿಪ್ತ ನೋಟ ಇಲ್ಲಿದೆ.
ಮೂಡುಬಿದಿರೆ: ಜೋಗದ ಜಲವಿದ್ಯುತ್ ಘಟಕದಲ್ಲಿ ಶರಾವತಿ ನದಿಯ ನೀರನ್ನು ಬಳಸಿ ವಿದ್ಯುತ್ ಉತ್ಪಾದಿಸಲಾಗುತ್ತದೆ. ಈ ವಿದ್ಯುತ್ ರಾಜ್ಯದ ವಿದ್ಯುತ್ ಜಾಲಕ್ಕೆ ಸೇರಿಸಿ ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ವಿತರಿಸಲಾಗುತ್ತದೆ. ಕೃಷಿ, ಕೈಗಾರಿಕೆ ಹಾಗೂ ಮನೆ ಬಳಕೆಗೆ ಇದು ಮಹತ್ವದ ಶಕ್ತಿಯಾಗಿದೆ. ರಾಜ್ಯದ ವಿದ್ಯುತ್ ಅವಶ್ಯಕತೆಯನ್ನು ಪೂರೈಸುವಲ್ಲಿ ಜೋಗ ಜಲವಿದ್ಯುತ್ ಯೋಜನೆ ಪ್ರಮುಖ ಪಾತ್ರವಹಿಸುತ್ತದೆ. ಜೋಗದಲ್ಲಿ ಉತ್ಪಾದನೆಯಾದ ವಿದ್ಯುತ್ ದೊಡ್ಡ ದೊಡ್ಡ ವಿದ್ಯುತ್ ಗೋಪುರಗಳಲ್ಲಿ ಅಳವಡಿಸಿರುವ ತಂತಿಗಳ ಮೂಲಕ ರಾಜ್ಯದ ವಿದ್ಯುತ್ ಜಾಲಕ್ಕೆ ಸೇರ್ಪಡೆಗೊಂಡು ವಿತರಣೆಯಾಗುತ್ತದೆ. ಈ ಯೋಜನೆಯಿಂದಾಗಿ ಸ್ಥಳೀಯರಿಗೆ ಸಮಸ್ಯೆಗಳಿವೆಯೇ? ಕೃಷಿಕರ ಕೃಷಿ ಚಟುವಟಿಕೆಗಳಿಗೆ ತೊಡಕಾಗಿವೆಯೇ? ಜೀವ ಹಾನಿ, ಅನಾರೋಗ್ಯ ಪರಿಸ್ಥಿತಿ ಉಂಟಾಗಿವೆಯೇ ಇತ್ಯಾದಿ ಮಾಹಿತಿಗಳ ಸಂಗ್ರಹ ಹಾಗೂ ಅಧ್ಯಯನಕ್ಕೆ ಯಶ ಕರ್ನಾಟಕ ಪತ್ರಿಕೆಯ ನೇತೃತ್ವದಲ್ಲಿ ಮೂಡುಬಿದಿರೆಯ ಪತ್ರಕರ್ತರ ನಿಯೋಗ ಎರಡು ದಿನಗಳ ಅಧ್ಯಯನ ಪ್ರವಾಸ ಕೈಗೊಂಡಿತು. ಅದರ ಒಂದು ವರದಿ ಇಲ್ಲಿದೆ.








ಜೋಗದಿಂದ ಹೊರಡುವ ವಿದ್ಯುತ್ ತಂತಿಗಳು ಕಳೆದ 60 ವರುಷಗಳಲ್ಲಿ ತುಂಡಾಗಿ ಬಿದ್ದು ಹಾನಿಯಾದ ಉದಾಹರಣೆಗಳು ಲಭ್ಯವಾಗುತ್ತಿಲ್ಲ. ಗೋಪುರ ಮುರಿದು ಬಿದ್ದಿಲ್ಲ. ಯಾವ ಅನಾಹುತವೂ ಆಗಿಲ್ಲ ಎಂಬುದು ಸ್ಥಳೀಯರ ಅಭಿಮತ.
ಸ್ಥಳೀಯ ರೈತರು, ಹೋರಾಟಗಾರರು, ತಜ್ಞರು ಹೀಗೆ ಹಲವು ವ್ಯಕ್ತಿಗಳನ್ನು ಪತ್ರಕರ್ತರು ಭೇಟಿ ಮಾಡಿ ಮಾಹಿತಿ ಕಲೆ ಹಾಕಿದರು. ಹಲವು ಸ್ಥಳಗಳಲ್ಲಿ ಓಡಾಡಿ ಮಾಹಿತಿ ಸಂಗ್ರಹಿಸಿದರು. ಅಧ್ಯಯನ ನಡೆಸಿದರು. ಟವರ್ ನಿರ್ಮಾಣಗೊಂಡ ಸ್ಥಳಗಳ ಪರಿಶೀಲನೆ ನಡೆಸಿದರು. ಗದ್ದೆಗಳಲ್ಲಿ, ಕೃಷಿ ಚಟುವಟಿಕೆಯಾಗುವ ಪರಿಸರದಲ್ಲಿ, ಕೆರೆಯ ನಡುವೆ ಹೀಗೆ ಹಲವು ಕಡೆಗಳಲ್ಲಿ ಸ್ಥಾಪನೆಗೊಂಡ ಗೋಪುರಗಳನ್ನು ಹತ್ತಿರದಿಂದ ವೀಕ್ಷಿಸಲಾಯಿತು. ವಿದ್ಯುತ್ ಕಾರಿಡಾರ್ಗಳನ್ನು ವೀಕ್ಷಿಸಿದರು. ಗೋಪುರದ ಪರಿಸರದಲ್ಲಿ ಸಹಜ ಚಟುವಟಿಕೆಗಳು ನಡೆಯುತ್ತಿರುವುದನ್ನು ನೋಡಲಾಯಿತು. ಅಲ್ಲೆಲ್ಲಾ ದನಕರುಗಳು ಮೇಯುತ್ತಿರುವುದನ್ನು ವೀಕ್ಷಿಸಲಾಯಿತು. ಗೋಪುರದ ನಡುವೆ ಇರುವ ಖಾಲಿ ಜಾಗದಲ್ಲಿ ಭತ್ತದ ಕೃಷಿ ಮಾಡಿರುವುದನ್ನು ಪತ್ರಕರ್ತರು ವೀಕ್ಷಿದರು.
ತರಕಾರಿ ಬೆಳೆ ಬೆಳೆಯಿರಿ ರೈತರ ಕಿವಿಮಾತು: ವಿದ್ಯುತ್ ತಂತಿ ಹಾದುಹೋದ ಪ್ರದೇಶದಲ್ಲಿ ತರಕಾರಿ ಬೆಳೆ ಬೆಳೆಯಬಹದು. ಅಥವಾ ಭತ್ತದ ಕೃಷಿ ಮಾಡಬಹುದು. ತಂತಿ ಹಾದುಹೋಗುವ ಕೆಳಭಾಗದಲ್ಲಿ ಅಂತಹ ಸಮಸ್ಯೆಗಳೇನೂ ನಮ್ಮೂರಲ್ಲಿ ದಾಖಲಾಗಿಲ್ಲ. ಮಳೆಗಾಲದಲ್ಲಿ ನಮಗೆ ಹೆದರಿಕೆಯಾಗುತ್ತಿತ್ತು. ಈಗ 60ವರುಷಗಳು ಕಳೆದಿವೆ. ಯಾವೊಂದು ಅನಾಹುತಗಳೂ ಸಂಭವಿಸಿಲ್ಲ. ಹಾಗಾಗಿ ತೊಂದರೆಯೇನಿಲ್ಲ ಎನ್ನುತ್ತಾರೆ ಈ ಭಾಗದ ಸ್ಥಳೀಯ ಕೃಷಿಕ 75 ವರುಷ ಪ್ರಾಯದ ದುರ್ಗಪ್ಪನವರು.

ಕರಾವಳಿ ಭಾಗದಲ್ಲಿ ನಾಮದ ಸೌತೆಗೆ ಉತ್ತಮ ಬೇಡಿಕೆಯಿದೆ. ವಿದ್ಯುತ್ ತಂತಿ ಹಾದುಹೋಗುವ ಪ್ರದೇಶದ ಕೆಳಭಾಗದಲ್ಲಿ ರೈತರು ಈ ತರಕಾರಿ ಬೆಳೆ ಬೆಳೆಯಬಹುದು. ಕಾಳುಮೆಣಸು ಸಹ ಬೆಳೆಯಬಹುದು. ಬುಷ್ ಪೆಪ್ಪರ್ ಚೆನ್ನಾಗಿ ಬರುತ್ತದೆ. ಇದರ ಬಗ್ಗೆ ಗಮನ ಹರಿಸಬಹುದು. ಗಡ್ಡೆ ಗೆಣಸುಗಳು, ತರಕಾರಿಗಳನ್ನು ಯತೇಚ್ಛವಾಗಿ ಮಾಡಬಹುದು. ಕಬ್ಬು ಅಥವಾ ಜೋಳ, ಮೇವಿನ ಹುಲ್ಲು ಹೀಗೆ ಹಲವು ರೀತಿಯಲ್ಲಿ ಯೋಜನೆ ಮಾಡಬಹುದು ಎನ್ನುತ್ತಾರೆ ತಾಳಗುಪ್ಪ ಪ್ರದೇಶದ ಕೃಷಿಕ ಗಣೇಶ್ ಅವರು.


400ಕೆವಿ ವಿದ್ಯುತ್ ತಂತಿಗಳ ಕೆಳಗೆ ಕಳೆದ 60ವರುಷಗಳಿಂದ ನಿರಂತರವಾಗಿ ಕೃಷಿ ಚಟುವಟಿಕೆಗಳು ನಡೆಯುತ್ತಲೇ ಇವೆ. ಭತ್ತದ ಗದ್ದೆಗಳಲ್ಲಿ ವಿದ್ಯುತ್ ತಂತಿಯ ಅಡಿಭಾಗದಲ್ಲಿಯೇ ಕೃಷಿ ಚಟುವಟಿಕೆಗಳನ್ನು ಮುಂದುವರಿಸಲಾಗುತ್ತಿದೆ. ಎತ್ತರೆತ್ತರ ಬೆಳೆಯುವ ತೆಂಗು ಕಂಗುಗಳನ್ನು ಹೊರತುಪಡಿಸಿ, ಉಳಿದೆಲ್ಲಾ ಕೃಷಿಗಳಿಗೆ ಅವಕಾಶವಿದೆ. ಕೃಷಿಯ ಮೌಲ್ಯವರ್ಧನೆಯ ಬಗ್ಗೆ ಕೃಷಿಕರು ಚಿತ್ತ ಹರಿಸಬೇಕಾಗಿದೆ. ಇದಾದಲ್ಲಿ ಮಾತ್ರ ಕೃಷಿಕ ತನ್ನ ಜಮೀನಿನಲ್ಲಿ ಹೊನ್ನು ಬೆಳೆಯಲು ಸಾಧ್ಯ ಹೀಗೆನ್ನುತ್ತಾರೆ ಪೂರ್ಣಪ್ರಜ್ಞ ಬೇಳೂರು.
ಯೋಜನೆಗಳು ಹಲವು ಬರುತ್ತದೆ. ಹಾಗಾದ ಮಾತ್ರಕ್ಕೆ ಎಲ್ಲಾ ಯೋಜನೆಗಳಿಂದ ನಾವು ಭೂಮಿ ಕಳೆದುಕೊಂಡೆವು ಅಥವಾ ಇನ್ನೇನೋ ಸಮಸ್ಯೆ ಆಯಿತು ಎಂದು ಕೈಕಟ್ಟಿ ಕೂರುವುದಲ್ಲ. ಬದಲಾಗಿ ಕೃಷಿಯಲ್ಲಿ ಏನು ಹೊಸತನ ಮಾಡಬಹುದು. ಸಂಘಟಿತವಾಗಿ ಹೇಗೆ ಆದಾಯದ ಮೂಲಕ ಹೆಚ್ಚಿಸಬಹುದು ಎಂಬುದರ ಬಗ್ಗೆ ಕೃಷಿಕರು ಚಿಂತಿಸಬೇಕಾಗಿದೆ ಎಂಬುದು ಅವರ ಅಭಿಮತ.
1943ರಲ್ಲಿ ಮೈಸೂರು ಸರ್ಕಾರದಿಂದ ಪ್ರಾರಂಭವಾಯಿತು. ವಿದ್ಯುತ್ ಉತ್ಪಾದನಾ ಘಟಕ 1948 ಕಾರ್ಯಾರಂಭ ಮಾಡಿತು. ಆರಂಭಿಕ ಸಾಮರ್ಥ್ಯ ಸುಮಾರು 120 ಮೆಗಾವಾಟ್ ಮಾತ್ರವಾಗಿತ್ತು. ಈಗ ಅತಿ ಹೆಚ್ಚಿನ ಸಾಮರ್ಥ್ಯದ ವಿದ್ಯುತ್ ಉತ್ಪಾದನೆಗಳಾಗುತ್ತಿವೆ. ಇಲ್ಲಿ ಉತ್ಪಾದನೆಯಾದ ವಿದ್ಯುತ್ ಕರ್ನಾಟಕದ ವಿವಿಧ ಭಾಗಗಳಿಗೆ ರಾಜ್ಯ ವಿದ್ಯುತ್ ಜಾಲದ ಮೂಲಕ ಹಂಚಿಕೆಯಾಗುತ್ತದೆ. 110 ಕೆ.ವಿ. ಸಾಮರ್ಥ್ಯದ ವಿದ್ಯುತ್ ಲೈನ್, 220 ಕೆವಿ ಹಾಗೂ 400ಕೆವಿ ಸಾಮರ್ಥ್ಯದ ವಿದ್ಯುತ್ನ್ನು ತಂತಿಗಳ ಮೂಲಕ ಹರಿಸಲಾಗುತ್ತಿದೆ. ಈ ವಿದ್ಯುತ್ ಉತ್ಪದಾನಾ ವಿಧಾನ, ಹಂಚಿಕೆಗಳು ಹಾಗೂ ಪ್ರಸರಣದ ವ್ಯವಸ್ಥೆಯನ್ನು ಸಮರ್ಪಕವಾಗಿ ಅಧ್ಯಯನ ತಂಡ ಅಧ್ಯಯನ ಮಾಡಿತು.
