ಬೆಂಗಳೂರು: 'ಹಲವು ಅತ್ಯುತ್ತಮ ಕೃತಿಗಳನ್ನು ಕನ್ನಡ ನಾಡಿಗೆ ನೀಡಿದ ನಾಡೋಜ ಹಂ.ಪ.ನಾಗರಾಜಯ್ಯರವರು ನಮ್ಮ ನಡುವಿನ ಒಬ್ಬ ಶ್ರೇಷ್ಠ ಸಾಹಿತಿ. ಹದಿನಾಲ್ಕು ಭಾಗಿಗಳಿಗೆ ಅನುವಾದಗೊಂಡಿರುವ ಅವರ ಪ್ರಸಿದ್ಧ ಕೃತಿಯಾಗಿರುವ ಚಾರುವಸಂತ ದೇಸೀ ಕಾವ್ಯವನ್ನು ರಂಗಕ್ಕೆತರಲು ನಮ್ಮ ಸಂಸ್ಥೆಗೆ ಬಹಳ ಹೆಮ್ಮೆ ಅನಿಸಿದೆ' ಎಂದು ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹೇಳಿದರು. 

ಅವರು ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ನಡೆಯಲಿರುವ ಚಾರುವಸಂತ ನಾಟಕದ ತಾಲೀಮನ್ನು ಬೆಂಗಳೂರಿನ ವುಡ್ ಲ್ಯಾಂಡ್ಸ್ ಹೋಟೇಲ್ ನಲ್ಲಿ ನಾಟಕದ ಪೋಸ್ಟರ್ ಬಿಡುಗಡೆಗೊಳಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿದ್ದ ಹಿರಿಯ ಪತ್ರಕರ್ತ ಲಕ್ಷ್ಮಣಕೊಡಸೆ ಮಾತನಾಡಿ ' ನನ್ನ ಗುರುಗಳ ಕೃತಿಯೊಂದು ರಂಗಕೃತಿಯಾಗುತ್ತಿರುವುದಕ್ಕೆ ಬಹಳ ಸಂತಸವಾಗುತ್ತಿದೆ. ಹಲವು ಮಹತ್ವದರಂಗ ಪ್ರಯೋಗಗಳನ್ನು ರಂಗಕ್ಕೆ ತಂದಿರುವ ಡಾ. ಜೀವನ್‍ರಾಂ ಸುಳ್ಯರ ನಿರ್ದೇಶನದಲ್ಲಿ ಈ ಚಾರುವಸಂತವು ಕನ್ನಡ ರಂಗಭೂಮಿಯಲ್ಲಿ ಹೊಸ ಸಂಚಲನ ಮೂಡಿಸಲಿ' ಎಂದು ಶುಭ ಹಾರೈಸಿದರು.

ಕೃತಿಕಾರ ನಾಡೋಜ ಹಂ.ಪ.ನಾಗರಾಜಯ್ಯ ಚಾರುವಸಂತದ ರಂಗರೂಪವನ್ನು ಸಿದ್ಧ ಪಡಿಸಿದ ಸಾಹಿತಿ, ರಂಗಕರ್ಮಿ ಡಾ.ನಾ.ದಾ.ಶೆಟ್ಟಿ ಅವರ ಶ್ರಮವನ್ನು ಶ್ಲಾಘಿಸಿದರು. ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಕಲಾವಿದರ ಜೊತೆ ನೀನಾಸಂ ರಂಗಾಯಣಗಳಲ್ಲಿ ಅನುಭವ ಪಡೆದ ಕೆಲವು ಕಲಾವಿದರೂ ಪಾತ್ರವಹಿಸಲಿದ್ದು ಅಕ್ಟೋಬರ್ ಕೊನೆಯ  ವಾರದಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ನಾಟಕದ ನಿರ್ದೇಶಕ ಜೀವನ್‍ರಾಂ ಸುಳ್ಯ ತಿಳಿಸಿದರು.