ವಿದ್ಯಾಗಿರಿ: ಆಳ್ವಾಸ್ ಪದವಿ ಕಾಲೇಜಿನ ಆ್ಯಂಟಿ ರ್ಯಾಗಿಂಗ್ ಸೆಲ್, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಯೂತ್ ರೆಡ್‍ಕ್ರಾಸ್ ಘಟಕಗಳ ಜಂಟಿ ಆಶ್ರಯದಲ್ಲಿ ಮೂಡುಬಿದಿರೆ ಪೋಲೀಸ್ ಇಲಾಖೆಯ ಸಹಯೋಗದೊಂದಿಗೆ ಜಾಗೃತಿ ಕಾರ್ಯಕ್ರಮವನ್ನು ಕುವೆಂಪು ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಮೂಡುಬಿದಿರೆ ಆರಕ್ಷಕ ಠಾಣೆಯ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ, ಮಾತನಾಡಿ, ರ್ಯಾಗಿಂಗ್ ವಿದ್ಯಾರ್ಥಿಗಳ  ಸುರಕ್ಷತೆ ಹಾಗೂ ಗೌರವಕ್ಕೆ ದಕ್ಕೆ ತರುವ  ಗಂಭೀರ ಸಾಮಾಜಿಕ ಸಮಸ್ಯೆ. ಆ ಹಿನ್ನಲೆಯಲ್ಲಿ ದೇಶದಾದ್ಯಂತ  ಎಲ್ಲಾ ವಿಶ್ವವಿದ್ಯಾನಿಲಯ ಹಾಗೂ ಕಾಲೇಜುಗಳಲ್ಲಿ ರ್ಯಾಗಿಂಗ್ ತಡೆಗಟ್ಟಲು ನಿಯಮಾವಳಿಗಳನ್ನು ಜಾರಿಗೊಳಿಸಲಾಗಿದೆ. ಕಾನೂನು ಉಲ್ಲಂಘನೆ ಮಾಡಿದವರಿಗೆ ಕಠಿಣ ಶಿಕ್ಷೆ ನೀಡಲಾಗುತ್ತದೆ ಎಂದರು.    

ಒನ್ ಪೆಗ್, ಒನ್ ದಮ್‍ನಿಂದ ಆರಂಭ

ಕಾಲೇಜಿನಲ್ಲಿ ಓದುವ ವಯಸ್ಸಿನಲ್ಲಿ ಕುತೂಹಲಕ್ಕಾಗಿ ಸಿಗರೇಟ್‍ನಿಂದ ಆರಂಭವಾಗುವ ಚಟ, ನಿಧಾನವಾಗಿ ಮಾದಕವ್ಯಸನಗಳ ಜಾಲದಲ್ಲಿ ಬೀಳುವಂತೆ ಮಾಡುತ್ತದೆ. ಒನ್ ಪೆಗ್, ಒನ್ ದಮ್‍ನಿಂದ ಆರಂಭವಾಗುವ ವ್ಯಸನಗಳು ಮುಂದೆ ದುಶ್ಚಟಗಳ ದಾಸರಾಗುವಂತೆ ಮಾಡುತ್ತವೆ.   ವಿದ್ಯಾರ್ಥಿಗಳು ಇಂತಹ ದುಶ್ಚಟಗಳಿಂದ ದೂರವಿರಬೇಕು ಎಂದರು. 

ಎಫ್‍ಐಆರ್ ಧಾಖಲಾದರೆ ಬದುಕೇ ದುರ್ಭರ

ವಿದ್ಯಾರ್ಥಿಯ ನೆಲೆಯಲ್ಲಿ ಅಪರಾಧವೆಸಗಿ ಎಫ್‍ಐಆರ್ ದಾಖಲಾದರೆ ಬದುಕೇ ಹಾಳಾಗುತ್ತದೆ. ಸರಕಾರಿ ಕೆಲಸಗಳಿಗೆ ಮಾತ್ರವಲ್ಲದೆ ಖಾಸಗಿ ವಲಯದಲ್ಲಿ ಕೆಲಸಗಿಟ್ಟಿಸಿಕೊಳ್ಳುವುದು ಕಷ್ಟ ಸಾಧ್ಯ. ವಿದ್ಯಾರ್ಥಿ ಜೀವನದಲ್ಲಿ ನಿಮ್ಮ ಸ್ನೇಹಿತರ ಬಳಗ  ನಿಮ್ಮ ಭವಿಷ್ಯವನ್ನು ನಿರ್ಧಾರ ಮಾಡುತ್ತದೆ. 

ಸತ್ಪ್ರಜೆಗಳಾಗಿ ಬಾಳಿ

ಸಜ್ಜನರ ಸಹವಾಸ ಸದಾ ಒಳಿತು. ಕೆಟ್ಟ ಚಟಗಳ ದಾಸರಾಗಬೇಡಿ. ನಿಮ್ಮ ಅಮೂಲ್ಯ ಸಮಯವನ್ನು ಒಳ್ಳೆಯ ಕೆಲಸಗಳಿಗೆ ವಿನಿಯೋಗಿಸಿ. ಆಧುನಿಕ ತಂತ್ರಜ್ಞಾನಗಳನ್ನು ಜ್ಞಾನಾರ್ಜನೆ ಉಪಯೋಗಿಸಿಕೊಳ್ಳಿ.  ಸ್ಪರ್ಧಾತ್ಮಕ ಪರೀಕ್ಷೆಗಳೆಡೆಗೆ ಪದವಿ ಹಂತದಿಂದಲೇ ಆಸಕ್ತಿವಹಿಸಿ ಯಶಸ್ಸನ್ನು ಪಡೆಯಿರಿ.  ನಿಮ್ಮನ್ನು ನೀವು ಸದಾ ಕಾರ್ಯಚಟುಚಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಆ ಮೂಲಕ ಹೆತ್ತ ತಂದೆತಾಯಿಗೆ, ಶಿಕ್ಷಕರಿಗೆ ಸಮಾಜಕ್ಕೆ ಅಮೂಲ್ಯ ಕೊಡುಗೆ ನೀಡುವವರಾಗಿ ಎಂದು ಸಲಹೆ ನೀಡಿದರು. 

ಅಪರಾಧಿಗಳೊಂದಿಗೆ ಪೋಲೀಸರ ವರ್ತನೆ ವಿಭಿನ್ನ

ಇಂತಹ ಜಾಗೃತಿ ಕಾರ್ಯಕ್ರಮಗಳಲ್ಲಿ ಪೋಲಿಸರು ಬಹಳ ಮೃದು ಸ್ವಭಾವದವರಾಗಿ ಕಂಡು ಬಂದರೂ,  ಅಪರಾಧಿಯಾಗಿ ಪೋಲೀಸ್ ಠಾಣೆಗೆ ಆಗಮಿಸಿದರೆ, ಆ ಸಂಧರ್ಭದಲ್ಲಿ ಪೋಲಿಸರ ವರ್ತನೆ ಬಹಳ ವಿಭಿನ್ನವಾಗಿರುತ್ತದೆ. ಆತಿಥ್ಯವು ವಿಶೇಷವಾಗಿರುತ್ತದೆ ಎಂದರು.  

ನವಮಾಧ್ಯಮಗಳ ಬಳಕೆಯಿಂದ

ಮೊದಲ ಬಾರಿ ಡ್ರಗ್ಸ್ ಸೇವನೆ ಮಾಡಿದವರಿಗೆ ರೂ 10,000 ದಂಡ ಅಥವಾ 6 ತಿಂಗಳು ಅಥವಾ 1 ವರ್ಷ ಜೈಲು ಶಿಕ್ಷೆ, ಮತ್ತೆ ಅದು ಪುನರಾವರ್ತನೆಯಾದರೆ 5 ವರ್ಷ ಜೈಲು 1 ಲಕ್ಷ ದಂಡವನ್ನು ವಿಧಿಸಲಾಗುತ್ತದೆ.  ಕರ್ನಾಟಕ ಪೊಲೀಸ್ ಇಂದು  ನವಮಾಧ್ಯಮವನ್ನು ಬಳಸಿ ಅಪರಾಧಿಗಳನ್ನು ಸುಲಭದಲ್ಲಿ  ಪತ್ತೆಹಚ್ಚಬಲ್ಲದು ಎಂದು ತಿಳಿಸಿದರು.  

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಆಳ್ವಾಸ ಕಾಲೇಜಿನ ಪ್ರಾಚಾರ್ಯ ಡಾ ಕುರಿಯನ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ಆ್ಯಂಟಿ ರ್ಯಾಗಿಂಗ್ ಸೆಲ್‍ನ ಸಂಯೋಜಕರ ಮನು, ರಾಷ್ಟ್ರೀಯ ಸೇವಾ ಯೋಜನೆಯ ಸುದೀಪ್, ವೈಆರ್‍ಸಿಯ ಸುಹಾಸ್ ಶೆಟ್ಟಿ  ಇದ್ದರು. ಸಾಧನಾ ವಂದಿಸಿ, ಫ್ರಾನ್ಸಿಲ್  ಸ್ವಾಗತಿಸಿದರು.