ಪೂರ್ಣ ಕಣ್ಣನ್ನು ತೆಗೆದು ಕಸಿ ಮಾಡುವುದು ಸಾಧ್ಯವಿಲ್ಲ. ಕಣ್ಣಿನ ಮೇಲು ಪದರವಾದ ಕಾರ್ನಿಯಾವನ್ನು ಮಾತ್ರ ತೆಗೆದು ಕಾರ್ನಿಯಾ ಹೋದವರಿಗೆ ಕಸಿ ಮಾಡುತ್ತಾರೆ.

ಕಾರ್ನಿಯಾ ಕಣ್ಣಿನ ಮೇಲ್ಭಾಗದ ಪಾರದರ್ಶಕ ಪಟಲವಾಗಿದ್ದು, ಬೆಳಕನ್ನು ಪಡೆದು ದೃಶ್ಯ ವೀಕ್ಷಿಸಲು ಈಗಿನ ಕನ್ನಡಕದಂತೆ ಸಹಾಯ ಮಾಡುತ್ತದೆ. ಸಾಮಾನ್ಯವಾಗಿ ಒಬ್ಬರ ಎರಡು ಕಣ್ಣಿನ ಎರಡು ಕಾರ್ನಿಯಾವನ್ನು ಇಬ್ಬರಿಗೆ ಕಸಿ ಮಾಡಲಾಗುತ್ತದೆ.

ಪುನೀತ್ ರಾಜ್‍ಕುಮಾರ್ ಸತ್ತಾಗ ಅವರ  ಕಾರ್ನಿಯಾವನ್ನು ನಾಲ್ವರಿಗೆ ಹೊಂದಿಸಲಾಗಿದ್ದು, ಇದು ಭಾರತಕ್ಕೆ ಬಂದ ಹೊಸ ತಂತ್ರಜ್ಞಾನ. 1994ರಲ್ಲಿ ವರನಟ ರಾಜ್ ಕುಮಾರ್ ಅವರು ಕಣ್ಣಿನ ಬ್ಯಾಂಕ್ ಉದ್ಘಾಟಿಸುವಾಗ ತನ್ನ ಕುಟುಂಬದ ಎಲ್ಲರ ಕಣ್ಣು ದಾನ ಘೋಷಿಸಿದ್ದರು.

ವ್ಯಕ್ತಿ ಸತ್ತ ನಾಲ್ಕರಿಂದ ಆರು ಗಂಟೆಯೊಳಗೆ ಕಾರ್ನಿಯಾವನ್ನು ತಜ್ಞರು ತೆಗೆಯುತ್ತಾರೆ. ಪುನೀತ್ ರಾಜ್‍ಕುಮಾರ್ ಅವರ ಕಾರ್ನಿಯಾವನ್ನು ಎರಡು ಪದರಗಳಲ್ಲಿ ಸೀಳಿ ಬೇರ್ಪಡಿಸಲಾಗಿತ್ತು. ಅವನ್ನು ನಾಲ್ವರು ಕಾರ್ನಿಯಾ ಕುರುಡು ಇರುವವರಿಗೆ ಕಸಿ ಮಾಡಲಾಗಿದೆ. ಇವನ್ನು ಎದುರಿನ ಸೂಪರ್‌ಫಿಸಿಯಲ್ ಮತ್ತು ಹಿಂದಿನ ಎಂಡೋತೆಲಿಯಲ್ ಆಧಾರದಲ್ಲಿ ಕಸಿ ಮಾಡಿದ್ದಾಗಿ ತಜ್ಞರು ಹೇಳಿದ್ದರು.