ಉಜಿರೆ: ಪಜಿರಡ್ಕದಲ್ಲಿ ಶ್ರೀ ಸದಾಶಿವೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ನೂತನ ಶಿಲಾಮಯ ಧ್ವಜಸ್ತಂಭ ಗುರುವಾರ ಸಂಜೆ ಧರ್ಮಸ್ಥಳಕ್ಕೆ ಆಗಮಿಸಿದಾಗ ಭವ್ಯ ಮೆರವಣಿಗೆಯಲ್ಲಿ ಸ್ವಾಗತಿಸಿ, ಅಣ್ಣಪ್ಪಸ್ವಾಮಿ ಬೆಟ್ಟದ ಬಳಿ ತರಲಾಯಿತು.

ಮುಖ್ಯ ಪ್ರವೇಶದ್ವಾರದ ಬಳಿ ದೇವಸ್ಥಾನದ ಪಾರುಪತ್ಯಗಾರರಾದ ಲಕ್ಷ್ಮೀ ನಾರಾಯಣ ರಾವ್, ಹೆಗ್ಗಡೆಯವರ ಆಪ್ತಕಾರ್ಯದರ್ಶಿ ಎ.ವಿ. ಶೆಟ್ಟಿ, ಲೆಕ್ಕಪತ್ರವಿಭಾಗದ ಮುಖ್ಯಸ್ಥ ಪುರಂದರ ಭಟ್, ಜಮಾ ಉಗ್ರಾಣದ ನಿವೃತ್ತ ಮುತ್ಸದ್ಧಿ ಭಜಬಲಿ ಧರ್ಮಸ್ಥಳ, ದೇವಳ ನೌಕರರು ಹಾಗೂ ಊರಿನ ನಾಗರಿಕರು ಭವ್ಯ ಸ್ವಾಗತ ಕೋರಿದರು.
ಶಾಸಕ ಹರೀಶ್ ಪೂಂಜ ಮತ್ತು ರಕ್ಷಿತ್ ಶಿವರಾಂ ಉಪಸ್ಥಿತರಿದ್ದರು.
ಅಣ್ಣಪ್ಪಸ್ವಾಮಿ ಬೆಟ್ಟದ ಬಳಿ, ದೇವಸ್ಥಾನದ ಪ್ರಧಾನ ಅರ್ಚಕರುಗಳು ವಿಶೇಷ ಪ್ರಾರ್ಥನೆ ಮಾಡಿ, ಫಲಪುಷ್ಪ ಹಾಗೂ ಹಾರವನ್ನು ಸಮರ್ಪಿಸಿದರು.
ಶ್ರೀ ಮಂಜುನಾಥ ಸ್ವಾಮಿ, ಧರ್ಮದೇವತೆಗಳು ಹಾಗೂ ಅಣ್ಣಪ್ಪಸ್ವಾಮಿ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ಮಾಡಿ ಶಿಲಾಮಯ ಧ್ವಜಸ್ತಂಭದ ಪ್ರತಿಷ್ಠಾಪನಾ ಕಾರ್ಯ ಯಶಸ್ವಿಯಾಗಲಿ ಎಂದು ಪೂಜ್ಯ ಹೆಗ್ಗಡೆಯವರ ಸಂದೇಶದೊಂದಿಗೆ ಮುಂದೆ ಪಜಿರಡ್ಕ ಕ್ಷೇತ್ರವು ಅತಿಶಯ ಕ್ಷೇತ್ರವಾಗಿ ಬೆಳೆಯಲಿ ಹಾಗೂ ಬೆಳಗಲಿ ಎಂದು ಪ್ರಾರ್ಥನೆ ಸಲ್ಲಿಸಿದರು.
ಬಳಿಕ ಭಕ್ತರೆಲ್ಲರೂ ಸೇರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.
ನಂತರ ಶಿಲಾಮಯ ಧ್ವಜಸ್ತಂಭ ಪಜಿರಡ್ಕ ದೇವಸ್ಥಾನದ ಕಡೆಗೆ ಯಾನ ಮುಂದುವರಿಸಿತು.