ಮಂಗಳೂರು: "ಕಾಂಗ್ರೆಸ್ ಪಕ್ಷ ಘೋಷಣೆ ಮಾಡಿರುವ ಗ್ಯಾರಂಟಿಗಳಿಗೆ ಜನರನ್ನು ನೋಂದಾಯಿಸಲು ವಿನೂತನ ಮತ್ತು ವಿಶೇಷ ಅಭಿಯಾನವನ್ನು ಇಂದಿನಿಂದಲೇ ಆರಂಭಿಸಲಾಗುವುದು" ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

"ಸಾಮಾನ್ಯ ಜನರ ಬದುಕನ್ನು ಸುಗಮಗೊಳಿಸಲು ನಾನು ಮತ್ತು ನಮ್ಮತಂಡ ಮಂಗಳೂರು ಉತ್ತರ ಕ್ಷೇತ್ರದ ಪ್ರತಿ ಮನೆ ಬಾಗಿಲಿಗೆ ತೆರಳಿ ಕಾಂಗ್ರೆಸ್ ಪಕ್ಷ ನೀಡಿರುವ ಗ್ಯಾರಂಟಿಗಳನ್ನು ಜನರಿಗೆ ತಲುಪಿಸುತ್ತೇವೆ. ನಮ್ಮತಂಡ ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿದ ಗ್ಯಾರಂಟಿಗಳ ಬಗ್ಗೆ ಜನರಿಗೆ ತಿಳಿಸುವ ಮೊಬೈಲ್ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿದೆ. ಕ್ಷೇತ್ರದ ಭೇಟಿಯ ವೇಳೆ ಹೆಸರು, ವಯಸ್ಸು, ಮೊಬೈಲ್ ಸಂಖ್ಯೆ, ವಿಳಾಸದಂತಹ ಮೂಲ ಮಾಹಿತಿಯನ್ನು ಪಡೆದು ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳಿಗೆ ನೋಂದಾಯಿಸಿಕೊಳ್ಳುತ್ತೇವೆ"  ಎಂದು ಹೇಳಿದರು.

"ನಮ್ಮೊಂದಿಗೆ ನೋಂದಾಯಿಸಿದ ಜನರು ಆದ್ಯತೆಯ ಮೇಲೆ ಕಾಂಗ್ರೆಸ್ ಗ್ಯಾರಂಟಿಗಳ ಪ್ರಯೋಜನ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು "IAM" ಫೌಂಡೇಶನ್ ನೀಡಿದ ಆದ್ಯತೆಯ ಕಾರ್ಡ್‌ನೊಂದಿಗೆ ನಾವು ಕಾಂಗ್ರೆಸ್ ಪಕ್ಷ ನೀಡಿದ ಗ್ಯಾರಂಟಿ ಕಾರ್ಡ್‌ಗಳನ್ನು ಜನರಿಗೆ ಒದಗಿಸುತ್ತೇವೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದ್ದು ನಾವೇ ಸರ್ಕಾರ ರಚಿಸುತ್ತೇವೆ. ಅದೇ ಸಮಯದಲ್ಲಿ, ನಮ್ಮ ಜನರು ಹಿಂದುಳಿಯುವುದನ್ನು ನಾವು ಬಯಸುವುದಿಲ್ಲ, ಅದಕ್ಕಾಗಿಯೇ ನಾವು ಈ ವಿಶೇಷವಾದ ಮನೆ-ಮನೆ ಅಭಿಯಾನವನ್ನು ಪ್ರಾರಂಭಿಸಿದ್ದೇವೆ",   ಎಂದು ಇನಾಯತ್ ಅಲಿ ಅವರು ನೋಂದಣಿ ಅಭಿಯಾನದಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಭಾಗವಹಿಸುವಂತೆ ಜನರಿಗೆ ಮನವಿ ಮಾಡಿದರು.

ಕಾಂಗ್ರೆಸ್ ಪಕ್ಷ ಘೋಷಿಸಿರುವ ಗೃಹಜ್ಯೋತಿ ಗ್ಯಾರಂಟಿ ಮೂಲಕ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್  ಅನ್ನು ಉಚಿತವಾಗಿ ನೀಡಲಾಗುತ್ತದೆ. ಅಲ್ಲದೆ ಕಾಂಗ್ರೆಸ್ ಪಕ್ಷದ ಗೃಹಲಕ್ಷಿ ಗ್ಯಾರಂಟಿಯಡಿ ಪ್ರತಿ ಮಹಿಳಾ ಕುಟುಂಬದ ಯಜಮಾನಿಗೆ ಮಾಸಿಕ 2000 ರೂ. ನೀಡಲಾಗುತ್ತದೆ.

ಬೆಲೆ ಏರಿಕೆಯಿಂದ ಜನ ಸಾಮಾನ್ಯರ ಬದುಕು ಹೈರಾಣಾಗಿದೆ ಎಂದು ಇನಾಯತ್ ಅಲಿ ಅವರು ಹೇಳಿದ್ದು, ಕಾಂಗ್ರೆಸ್ ಪಕ್ಷ ಸಮಾಜದ ಕಲ್ಯಾಣ ಮತ್ತು ಪ್ರಗತಿಪರ ಬೆಳವಣಿಗೆಯ ರಾಜಕೀಯವನ್ನು ನಂಬುತ್ತದೆ ಹಾಗೂ ಸಾಮಾನ್ಯ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದಿಂದ ಗ್ಯಾರಂಟಿಗಳನ್ನು  ಘೋಷಿಸಲಾಗಿದೆ" ಎಂದವರು ಹೇಳಿದರು.