ಕಾರ್ಕಳ, ಜು 25: ಕಾರ್ಕಳ ತಾಲೂಕಿನ ಬೈಲೂರು-ಉಮಿಕ್ಕಳ ಬೆಟ್ಡದ ಮೇಲಿನ ಪರಶುರಾಮ ಥೀಂ ಪಾರ್ಕ್ ಯೋಜನೆ ಬಗ್ಗೆ ಅಪಪ್ರಚಾರ, ಸಾರ್ವಜನಿಕ ಆಸ್ತಿ-ಪಾಸ್ತಿ ಹಾನಿ ಹಾಗೂ ಕಾನೂನು ಉಲ್ಲಂಘನೆ ಮಾಡಿದವರ ಕುರಿತು ಅಗತ್ಯ ಕ್ರಮ ಕೈಗೊಳ್ಳುವಂತೆ ಬಿಜೆಪಿ ಕಾರ್ಕಳ ಮಂಡಲದಿಂದ  ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.

ಸದರಿ ಯೋಜನೆ ಸಂಬಂಧ ಒಂದು ವರುಷದ ಬಳಿಕ ಯೋಜನೆಯ ಅನುಷ್ಠಾನ ಅಧಿಕಾರಿ ಎಂದು ಉಡುಪಿ ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರನ್ನು ಅಮಾನತುಗೊಳಿಸಿರುವ ಜಿಲ್ಲಾಡಳಿತ ಕ್ರಮ ಸ್ವಾಗತಾರ್ಹವಾಗಿದೆ, ಮೊದಲ ದಿನದಿಂದಲು ಜಿಲ್ಲಾಡಳಿತ ಇಂತಹ ಸ್ಪಷ್ಟ ತೀರ್ಮಾನ ತೆಗೆದುಕೊಳ್ಳುತ್ತಿದ್ದರೆ ಪ್ರವಾಸಿ ಯೋಜನೆಯೊಂದರ ಕುರಿತು ಇಷ್ಟೊಂದು ಅಪಪ್ರಚಾರಗಳಿಗೆ ಒಳಗಾಗುತ್ತಿರಲಿಲ್ಲ, ತನಿಖೆ ನಡೆದು ಕಾಮಗಾರಿ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿತ್ತು, ತಡವಾಗಿ ಜಿಲ್ಲಾಡಳಿತ ಎಚ್ಚರಗೊಂಡಿದೆ.

ಜಿಲ್ಲಾಧಿಕಾರಿಗಳ ಈ ಕ್ರಮ ಇಷ್ಟಕ್ಕೆ ಸೀಮಿತವಾಗದೆ ಯೋಜನೆ ಕುರಿತು ಒಂದು ವರುಷದಿಂದ ಸಾಮಾಜಿಕ ಜಾಲತಾಣಗಳಲ್ಲಿ, ಸಭೆಗಳಲ್ಲಿ, ಮೀಡಿಯಾಗಳಲ್ಲಿ ಭ್ರಷ್ಟಾಚಾರ ನಡೆದಿದೆ, ನಕಲಿ ಮೂರ್ತಿ ಎಂದು ಸಾಕಷ್ಟು ಅಪಪ್ರಚಾರ ನಡೆಸಲಾಗಿತ್ತು. ಈ ಅಪಪ್ರಚಾರ ಯಾರೆಲ್ಲ ಮಾಡಿದ್ದಾರೆ, ಅವರ ವಿರುದ್ಧವೂ ತಾವು ತಕ್ಷಣ ಕ್ರಮಕೈಗೊಳ್ಳಬೇಕು. ಥೀಮ್ ಪಾರ್ಕ್ಗೆ ಸಾರ್ವಜನಿಕ ಪ್ರವೇಶ ನಿಷೇಧ ಇದ್ದರೂ, ನಿಷೇಧವನ್ನು ಉಲ್ಲಂಘಿಸಿ ಒಳ ಪ್ರವೇಶ ಮಾಡಿ ಸಾರ್ವಜನಿಕ ಸ್ವತ್ತನ್ನು ಹಾನಿ ಮಾಡಿ, ಕಾನೂನನ್ನು ಕೈಗೆತ್ತಿಕೊಂಡವರ ವಿರುದ್ಧವೂ ತಾವು ಕ್ರಮ ಕೈಗೊಳ್ಳಬೇಕು.

ಉಚ್ಛ ನ್ಯಾಯಾಲಯದ ಆದೇಶದಂತೆ ಜಿಲ್ಲಾಡಳಿತ ಕಾಮಗಾರಿ ಮುಂದುವರೆಸಲು ಅನುವು ಮಾಡಿಕೊಟ್ಟಾಗ ದಿನಾಂಕ 02.05.2024ರಂದು ರಾತ್ರಿ ಪರಶುರಾಮ ಥೀಂ ಪಾರ್ಕ್ ಬೆಟ್ಟಕ್ಕೆ ಸಂಪರ್ಕಿಸುವ ರಸ್ತೆಗೆ ಅಡ್ಡಲಾಗಿ ಮಣ್ಣು ಹಾಕಿ ರಸ್ತೆ ತಡೆ ಮಾಡಿ, ಕಾಮಗಾರಿಗೆ ಅಡ್ಡಿ ಪಡಿಸಿದವರ ವಿರುದ್ಧವೂ ಜಿಲ್ಲಾಡಳಿತ ಇದುವರೆಗೆ ಕ್ರಮ ಕೈಗೊಂಡಿರುವುದಿಲ್ಲ. ಪರಶುರಾಮ ಥೀಂ ಪಾರ್ಕ್ ಕಾಮಗಾರಿಗೆ ಸಂಬಂಧಿಸಿದಂತೆ ಸುಳ್ಳು ಅಪಪ್ರಚಾರ, ಕಾಮಗಾರಿಗೆ ಅಡ್ಡಿಪಡಿಸಿದ, ಕಾನೂನು ಬಾಹಿರವಾಗಿ ಪ್ರವೇಶ ಮಾಡಿ ಸಾರ್ವಜನಿಕ ಆಸ್ತಿಯನ್ನು ಹಾನಿ ಮಾಡಿದವರ ವಿರುದ್ಧ ಅಗತ್ಯ ಕಾನೂನು ಕ್ರಮವನ್ನು ಜಿಲ್ಲಾಡಳಿತ ಈ ಕೂಡಲೆ ತೆಗೆದುಕೊಳ್ಳಬೇಕು ಎಂದು ಹಾಗೂ ಪರಶುರಾಮ ಥೀಮ್ ಪಾರ್ಕ್ ಯೋಜನೆಯ ಕಾಮಗಾರಿಯನ್ನು ಅತೀ ಶೀಘ್ರವಾಗಿ ಪೂರ್ಣಗೊಳಿಸಿ, ಸಾರ್ವಜನಿಕ ಪ್ರವೇಶಕ್ಕೆ ಅನುವು ಮಾಡಿಕೊಡುವಂತೆ ಬಿಜೆಪಿ ನಿಯೋಗದಿಂದ ಇಂದು ಜಿಲ್ಲಾಧಿಕಾರಿಗಳ ಕಛೇರಿಗೆ ತೆರಳಿ ಮಾನ್ಯ ಜಿಲ್ಲಾಧಿಕಾರಿಗಳಿಗೆ ಖುದ್ದಾಗಿ ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು. 

ಈ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿ ಕಾರ್ಕಳದ ಪ್ರಧಾನ ಕಾರ್ಯದರ್ಶಿ ಸುರೇಶ್ ಶೆಟ್ಟಿ ಶಿವಪುರ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರೇಶ್ಮಾ ಉದಯ್ ಶೆಟ್ಟಿ, ಉಪಾಧ್ಯಕ್ಷರಾದ  ಕಿರಣ್ ಕುಮಾರ್ ಉಡುಪಿ, ಬೋಳ ಜಯರಾಮ್ ಸಾಲ್ಯಾನ್, ಉದಯ್ ಎಸ್ ಕೋಟ್ಯಾನ್, ಕಾರ್ಕಳ ಬಿಜೆಪಿ ವಕ್ತಾರರಾದ  ರವೀಂದ್ರ ಮೊಯ್ಲಿ, ಕಾರ್ಕಳ ನಗರಾಧ್ಯಕ್ಷರಾದ  ನಿರಂಜನ್ ಜೈನ್, ಪ್ರಧಾನ ಕಾರ್ಯದರ್ಶಿಯಾದ  ಸುರೇಶ್ ಕಾಬೆಟ್ಟು, ವಿಘ್ನೇಶ್ ರಾವ್ ಬಂಗ್ಲೆಗುಡ್ಡೆ, ಬಿಜೆಪಿ ಪ್ರಮುಖರಾದ ರವೀಂದ್ರ ಕುಮಾರ್,  ಸೂರ್ಯಕಾಂತ ಶೆಟ್ಟಿ ಕೆದಿಂಜೆ, ದೇವೇಂದ್ರ ಶೆಟ್ಟಿ ಬೆಳ್ಮಣ್, ಶಂಕರ್ ಕುಂದರ್ ಸೂಡ, ಯುವ ಮೋರ್ಚಾದ  ರಜತ್ರಾಮ್ ಮೋಹನ್, ರೈತ ಮೋರ್ಚಾದ ಮೋಹನ್ ಶೆಟ್ಟಿ ಬೋಳ,  ಸುನಿಲ್ ಪೂಜಾರಿ ಚಾರಾ, ಹೆಬ್ರಿ ತಾಲೂಕು ರಿಕ್ಷಾ ಚಾಲಕ-ಮಾಲಕ ಸಂಘದ ಅಧ್ಯಕ್ಷರಾದ  ಪ್ರಭಾಕರ್ ಪೂಜಾರಿ ಉಪಸ್ಥಿತರಿದ್ದರು.