ಮಂಗಳೂರು: ಜಿಲ್ಲೆಯಲ್ಲಿರುವ ಬಂಟರ ಸಂಘಗಳು ಜಾಗತಿಕ ಬಂಟರ ಸಂಘಗಳ ಒಕ್ಕೂಟಕ್ಕೆ ಶಕ್ತಿ ತುಂಬುವ ಕೆಲಸ ಮಾಡಿದಾಗ ಸಮಾಜದಲ್ಲಿ ಬಡತನದಲ್ಲಿರುವ ಕುಟುಂಬಗಳಿಗೆ ಮತ್ತಷ್ಟು ಸಹಾಯ ಮಾಡಲು ಸಾಧ್ಯವಾಗುತ್ತದೆ. ಜೀವನದಲ್ಲಿ ಕಷ್ಟ, ಖಾಯಿಲೆ ಸಹಜ. ಇದ್ಯಾವುದಕ್ಕೂ ಎದೆಗುಂದದೆ ಜೀವನ ನಡೆಸಿ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ನುಡಿದರು.

ಬಂಟ್ಸ್ ಹಾಸ್ಟೇಲ್‌ನಲ್ಲಿರುವ ಅಮೃತೋತ್ಸವ ಕಟ್ಟಡದ ಸಭಾಂಗಣದಲ್ಲಿ ಜರಗಿದ  ಸಮಾಜ ಕಲ್ಯಾಣ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಫಲಾನುಭವಿಗಳಿಗೆ ಚೆಕ್ ವಿತರಿಸಿ ಮಾತನಾಡಿದರು. ಏನೇ ಕಷ್ಟವಿದ್ದರೂ ಜಾಗತಿಕ ಬಂಟರ ಸಂಘಗಳ ಒಕ್ಕೂಟಕ್ಕೆ ತಿಳಿಸಿ. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ಒಕ್ಕೂಟದ ಪ್ರಮುಖ ಧ್ಯೇಯವಾಗಿದೆ ಎಂದು ಅವರು ಹೇಳಿದರು. ಇಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟವು ಪ್ರತಿ ತಿಂಗಳು ಆರ್ಥಿಕ ಕಷ್ಟದಲ್ಲಿರುವ ಫಲಾನುಭವಿಗಳಿಗೆ ಸಹಾಯಧನ ವಿತರಿಸುತ್ತಿದೆ. ಕೊರೊನಾದಂತಹ ಲಾಕ್ಡೌನ್ ಸಂದರ್ಭದಲ್ಲೂ 1.5 ಕೋಟಿ ರೂ ಗಳಷ್ಟು ಹಣವನ್ನು ದಾನಿಗಳಿಂದ ಸಂಗ್ರಹಿಸಿ ಕಷ್ಟದಲ್ಲಿದವರಿಗೆ ನೀಡಿದ್ದೇವೆ. ಉಳ್ಳವರಿಂದ ಸಂಗ್ರಹಿಸಿ ಇಲ್ಲದವರಿಗೆ ನೀಡುವುದು ಒಕ್ಕೂಟದ ಕಾರ್ಯ, ನಮ್ಮ ಶಕ್ತಿಯಾನುಸಾರ ಮುಂದೆಯೂ ಸಹಾಯ ಮಾಡಲಿದ್ದೇವೆ ಎಂದರು.

ಇಂದು ರಾಜಕೀಯದಲ್ಲಿ ಉನ್ನತ ಮಟ್ಟದಲ್ಲಿರುವವರು ಯಾವುದೇ  ಸಹಾಯವನ್ನು ಒಕ್ಕೂಟಕ್ಕೆ ಮಾಡಿಲ್ಲ. ಬೇರೆ ಸಮಾಜದ ರಾಜಕೀಯ ಮುಖಂಡರಿಗೆ ಅವರ ಸಮಾಜದ ಮೇಲಿರುವಷ್ಟು ಪ್ರೀತಿ, ಅಭಿಮಾನ ನಮ್ಮವರಿಗಿಲ್ಲ. ಕಾಲೇಜು, ಆಸ್ಪತ್ರೆಗಳಲ್ಲೂ ಕಷ್ಟದಲ್ಲಿ ಇರುವವರಿಗೆ ವಿನಾಯಿತಿ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ದಾನಿಗಳಿಲ್ಲದೆ ನಾವು ಎನೂ ಮಾಡಲು ಸಾಧ್ಯವಿಲ್ಲ, ದಾನಿಗಳು ನೀಡಿದ ಹಣವನ್ನು ಒಕ್ಕೂಟಕ್ಕೆ ಬಂದ ಅರ್ಜಿಗಳನ್ನು ಪರಿಶೀಲಿಸಿ ಸಹಾಯಧನ ನೀಡುತ್ತಿದ್ದೇವೆ ಎಂದರು.ಈ ಸಂದರ್ಭ ಬೆಂಗಳೂರು ಬಂಟರ ಸಂಘದ ದಿ. ಮುಲ್ಕಿ ಸುಂದರರಾಮ್ ಶೆಟ್ಟಿ ಸ್ಮಾರಕ ಪ್ರಶಸ್ತಿ ಪುರಸ್ಕೃತ ಐಕಳ ಹರೀಶ್ ಶೆಟ್ಟಿ ಅವರನ್ನು ಒಕ್ಕೂಟದ ಪದಾಧಿಕಾರಿಗಳು, ವಿವಿಧ ಬಂಟರ ಸಂಘಗಳ ಪ್ರಮುಖರು ತಮ್ಮ ಅಭಿಮಾನ ದ್ಯೋತಕವಾಗಿ ಸನ್ಮಾನಿಸಿ ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದ ಅಂತರಾಷ್ಟ್ರೀಯ ಕ್ರೀಡಾಪಟು ರೋಹಿತ್ ಕಟೀಲ್, ಪತ್ರಕರ್ತರಾದ ವಿದ್ಯಾಧರ ಶೆಟ್ಟಿ ಹಾಗೂ ಅಶೋಕ ಶೆಟ್ಟಿ, ಬ್ರಹ್ಮರಕೂಟ್ಲು ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ರೋಹಿತ್ ಕಟೀಲ್ ಅವರು, ಜಾಗತಿಕ ಬಂಟರ ಸಂಘಗಳ ಒಕ್ಕೂಟವು ಇಂದು ಮನೆ ಮಾತಾಗಿದೆ. ಹಿಂದೆ ಬಂಟರ ಸಂಘವನ್ನು ಕೇಳುವವರಿಲ್ಲ, ಆದರೆ ಐಕಳ ಹರೀಶ್ ಶೆಟ್ಟಿ ಅವರು ಒಕ್ಕೂಟದ ಅಧ್ಯಕ್ಷರಾದ ನಂತರ ಮೂರ್ನಾಲ್ಕು ವರ್ಷದಲ್ಲಿ ಸಮಾಜದ ಎಲ್ಲಾ ವರ್ಗದ ಕಷ್ಟದಲ್ಲಿರುವ ಧ್ವನಿಯಾಗಿದ್ದಾರೆ. ಒಕ್ಕೂಟದ ಸಮಾಜ ಸೇವೆಯು ವಿಶ್ವದೆಲ್ಲೆಡೆ ಪ್ರಸಿದ್ಧಿ ಪಡೆಯಲಿ ಎಂದು ಹಾರೈಸಿದರು. ಪತ್ರಕರ್ತ ವಿದ್ಯಾಧರ ಶೆಟ್ಟಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟ ಇದೆ ಎಂದು ಗೊತ್ತಾಗಿದ್ದೆ ಐಕಳ ಅವರು ಅಧ್ಯಕ್ಷರಾದಾಗ. ಬಡವರ ಕಣ್ಣೀರೊರೆಸುವ ಹರೀಶ್ ಶೆಟ್ಟಿ ಹಾಗೂ ಅವರ ಜೊತೆಗಾರರಿಗೆ ದೇವರ ಮತ್ತಷ್ಟು ಶಕ್ತಿ ನೀಡಲೆಂದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಪತ್ರಕರ್ತ ಅಶೋಕ ಶೆಟ್ಟಿ ಬ್ರಹ್ಮರಕೂಟ್ಲು , ಹೊರಗಿನ ಸನ್ಮಾನಕ್ಕಿಂತ  ಸಮಾಜದ ಸನ್ಮಾನ ಮುಖ್ಯ, ಇದು ದೇವರ ಪ್ರಸಾದದಂತೆ. ಅಂತರರಾಷ್ಟ್ರೀಯ ಮಟ್ಟ ಸಂಸ್ಥೆಯಾಗಿರುವ ಒಕ್ಕೂಟ ಗುರುತಿಸಿ ಸನ್ಮಾನಿಸಿರುವುದಕ್ಕೆ ಚಿರಋಣಿಯಾಗಿರತ್ತೇವೆ  ಎಂದರು. ಒಕ್ಕೂಟದ ಪೋಷಕರು, ಥಾಣೆ ಬಂಟರ ಸಂಘದ ಅಧ್ಯಕ್ಷ ವೇಣುಗೋಪಾಲ್ ಶೆಟ್ಟಿ ಅವರನ್ನು ಮತ್ತು ಕಾರ್ಪೋರೇಟರ್ ಪ್ರವೀಣ್ ಚಂದ್ರ ಆಳ್ವಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ವೇಣುಗೋಪಾಲ್ ಶೆಟ್ಟಿ ಮಾತನಾಡಿ, ಶೃದ್ಧೆ, ಕ್ಷಮತೆ, ಗೌರವವಿದ್ದಲ್ಲಿ ತನ್ನೆಡೆಗೆ ಪುರಸ್ಕಾರ, ಸನ್ಮಾನಗಳು ನಮ್ಮನ್ನು ಹುಡುಕಿ ಬರುತ್ತದೆ. ಐಕಳ ಅವರು ತನ್ನ ವ್ಯವಹಾರ ಬಿಟ್ಟು ತನ್ನ ಜೀವನವನ್ನೇ ಸೇವೆಯಾಗಿ ಮುಡಿಪಾಗಿಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಒಕ್ಕೂಟದ ಕಾರ್ಯಗಳಿಗೆ ತನ್ನಿಂದಾಗುವ ಸಹಾಯ ಮಾಡುವ ಭರವಸೆ ನೀಡಿದರು.

ಫಲಾನುಭವಿಗಳಿಗೆ ಸಹಾಯಧನ ವಿತರಣೆ :

ಒಕ್ಕೂಟದ ಸಮಾಜದ ಕಲ್ಯಾಣ ಯೋಜನೆಯಡಿಯಲ್ಲಿ ವೈದ್ಯಕೀಯ, ಹೆಣ್ಮಕ್ಕಳ ವಿವಾಹ ಸಹಾಯ, ವಸತಿ ಸಹಾಯಹಸ್ತ ಹಾಗೂ ಇನ್ನಿತರ ಆರ್ಥಿಕ ಕಷ್ಟದಲ್ಲಿರುವ ಸುಮಾರು 30 ಫಲಾನುಭವಿಗಳಿಗೆ 5 ಲಕ್ಷ ರೂಪಾಯಿಗೂ ಮಿಕ್ಕಿದ ಸಹಾಯಧನದ ಚೆಕ್ ವಿತರಿಸಲಾಯಿತು. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಅವರು ಸ್ವಾಗತಿಸಿದರು. ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಇಂದ್ರಾಳಿ ಜಯಕಾರ ಶೆಟ್ಟಿ ಪ್ರಸ್ತಾವಿಕ ಮಾತುಗಳ್ನಾಡಿದರು. ಶರತ್ ಶೆಟ್ಟಿ ನಿರೂಪಿಸಿದರು. ಸಿಂಧ್ಯಾ ಶೆಟ್ಟಿ ಪ್ರಾರ್ಥಿಸಿದರು. ಒಕ್ಕೂಟದ ಜೊತೆ ಕಾರ್ಯದರ್ಶಿ ಸಂಕಬೈಲ್ ಸತೀಶ್ ಅಡಪ ವಂದಿಸಿದರು. ಕಾರ್ಯಕ್ರಮದಲ್ಲಿ ಒಕ್ಕೂಟದ ಆಡಳಿತಾಧಿಕಾರಿ ಸಚ್ಚಿದಾನಂದ ಹೆಗ್ಡೆ ಕೊಳ್ಕೆಬೈಲ್, ಸುರತ್ಕಲ್, ಇರಾ, ಸಾಲೆತ್ತೂರು, ಕಂಕನಾಡಿ ಮತ್ತಿತರ ಬಂಟರ ಸಂಘಗಳ ಪ್ರಮುಖರು, ಸಹಾಯಧನ ಪಡೆಯಲು ಬಂದ ಫಲಾನುಭವಿಗಳು, ಒಕ್ಕೂಟದ ಸಿಬ್ಬಂದಿಗಳು ಉಪಸ್ಥಿತರಿದ್ದರು.