ಮಂಗಳೂರು: ಕಲ್ಕೂರ ಪ್ರತಿಷ್ಠಾನದಿಂದ ರಾಷ್ಟ್ರೀಯ ಮಕ್ಕಳ ಉತ್ಸವ ಶ್ರೀಕೃಷ್ಣ ವೇಷ ಸ್ಪರ್ಧೆಯು ಶ್ರೀ ಕ್ಷೇತ್ರ ಕದ್ರಿಯಲ್ಲಿ ಆಗಸ್ಟ್ 26, ಸೋಮವಾರದಂದು ನಡೆಯಲಿದೆ ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.

“ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಬೆಳೆಸುವ ಪ್ರಯತ್ನವಾಗಿ ಮತ್ತು ಅವರಲ್ಲಿನ ಪ್ರತಿಭೆಯನ್ನು ಗುರುತಿಸಿ ಬೆಳೆಸುವ ಸದುದ್ದೇಶದಿಂದ ಕಳೆದ ನಾಲ್ಕು ದಶಕಗಳಂದ (42ವರ್ಷ) ಕಲ್ಕೂರ ಪ್ರತಿಷ್ಠಾನವು ನಡೆಸಿಕೊಂಡು ಬಂದಿರುವ ರಾಷ್ಟ್ರಮಟ್ಟದ ಮಕ್ಕಳ ಉತ್ಸವ–“ಶ್ರೀ ಕೃಷ್ಣ ವೇಷ ಸ್ಪರ್ಧೆಯನ್ನು 42 ವಿಭಾಗಗಳಲ್ಲಿ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಏರ್ಪಡಿಸಲಾಗಿದೆ. ಕೃಷ್ಣಾಷ್ಟಮಿಯಂದು ಬೆಳಗ್ಗೆ 9.00ರಿಂದ ಶ್ರೀ ಕೃಷ್ಣ ವರ್ಣ ವೈಭವ, ಮಧ್ಯಾಹ್ನ 12 ರಿಂದ ಸಾಂಸ್ಕೃತಿಕ ಕಾರ್ಯಕ್ರಮ, 1 ಗಂಟೆಗೆ ಸರಿಯಾಗಿ ಶ್ರೀ ಕೃಷ್ಣ ಜನ್ಮ ಮಹೋತ್ಸವ ನಂದಗೋಕುಲ ವೇದಿಕೆಯಲ್ಲಿ ಗಣ್ಯಾತಿಗಣ್ಯರು ಮತ್ತು ಪುಟಾಣಿ ಕೃಷ್ಣರು ಮತ್ತು ಮಾತೆಯರ ಸಮ್ಮುಖದಲ್ಲಿ ದೀಪ ಪ್ರಜ್ವಲನೆದೊಂದಿಗೆ ಶ್ರೀ ಕೃಷ್ಣ ವೇಷ ಸ್ಪರ್ಧೆ ಉದ್ಘಾಟನೆಗೊಳ್ಳಲಿದೆ. ರಾತ್ರಿ12.00ರ ತನಕ ವಿವಿಧ ಸ್ಪರ್ಧೆಗಳನ್ನು ಒಟ್ಟು 42 ವಿಭಾಗಗಳಲ್ಲಿ, 9 ವೇದಿಕೆಗಳಲ್ಲಿ ಏಕ ಕಾಲದಲ್ಲಿ ಆಯೋಜಿಸಲಾಗಿದೆ ಮತ್ತು ಮಧ್ಯಾಹ್ನ 12 ರಿಂದ ರಾತ್ರಿ 12ರವರೆಗೆ ವಿವಿಧ ಸಾಹಿತ್ಯಕ-ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಈ ರಾಷ್ಟ್ರೀಯ ಮಕ್ಕಳ ಉತ್ಸವದಲ್ಲಿ ಜೋಡಿಸಲಾಗಿದೆ.

ರಾತ್ರಿ 12 ಗಂಟೆಗೆ ಅರ್ಘ್ಯ ಪ್ರದಾನ - ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ“ ಎಂದರು. 

ರಾಷ್ಟ್ರವ್ಯಾಪಿ ಮಾನ್ಯತೆಗೊಂಡ ಶ್ರೀ ಕೃಷ್ಣವೇಷ ಸ್ಪರ್ಧೆಗಳು ಒಟ್ಟು 42 ವಿಭಾಗಗಳಲ್ಲಿ ಕದ್ರಿ ದೇವಳದ ಒಟ್ಟು ಆವರಣದಲ್ಲಿ ಶ್ರೀ ಮಹಾಗಣಪತಿ ದೇವಸ್ಥಾನ, ಅಭಿಷೇಕ ಮಂದಿರ,ಕದ್ರಿಕೆರೆ ಅಶ್ವತಕಟ್ಟೆ ಬಳಿ, ಶ್ರೀ ಕೃಷ್ಣ ಜನ್ಮ ಮಹೋತ್ಸವ ಸಮಿತಿ ವೇದಿಕೆ, ಅಭಿಷೇಕ ಮಂದಿರ 1ನೇ ಮಹಡಿ, ಕಲ್ಯಾಣ ಮಂಟಪ, ಮಂಜುಶ್ರೀ, ಅಭಿಷೇಕ ಮಂದಿರ, ಪ್ರಧಾನ ವೇದಿಕೆ ಸೇರಿದಂತೆ ಎಲ್ಲೆಡೆ ಏಕಕಾಲದಲ್ಲಿ ನಡೆಯಲಿದೆ“ ಎಂದರು.

ಈ ಬಾರಿಯ ವಿಶೇಷತೆ:

ಒಟ್ಟು 42 ವಿಭಾಗದಲ್ಲಿ ಏಕ ಕಾಲದಲ್ಲಿ ಕದ್ರಿ ದೇವಳದ ಒಟ್ಟು 9 ವೇದಿಕೆಗಳಲ್ಲಿ ಸ್ಪರ್ಧೆಗಳು ಜರಗಲಿವೆ.

ಶ್ರೀ ಕೃಷ್ಣ ರಸಪ್ರಶ್ನೆ-ಬಾಲಕೃಷ್ಣ ರಸಪ್ರಶ್ನೆ ಸ್ಪರ್ಧಾಳುಗಳಿಗೆ ಬಹುಮಾನಾರ್ಥವಾಗಿ ಸುಮಾರು 150ಕ್ಕೂ ಮಿಕ್ಕಿ ನಿತ್ಯ ಪೂಜಾ ಅಥವಾ ಸಾಂಸ್ಕೃತಿಕ ಪರಿಕರಗಳನ್ನು (ಶಂಖ, ಜಾಗಟೆ, ಬೆಳ್ಳಿ ತುಳಸಿ ಮಣಿ ಸರ, ಬೆಳ್ಳಕಟ್ಟದ ಅಭಿಷೇಕ ಶಂಖ, ಮುದ್ರೆ, ತಾಳ, ಆರತಿ, ದೀಪ ಇತ್ಯಾದಿ ನೀಡಲಾಗುವುದು.) ರಾತ್ರಿ 12 ಗಂಟೆಗೆ ಶ್ರೀ ಕೃಷ್ಣ ದೇವರಿಗೆ 12 ಬಗೆಯ ಉಂಡೆಗಳು, ಚಕ್ಕುಲಿ, ಕಡುಬು ಇನ್ನಿತರ ಖಾದ್ಯಗಳನ್ನು ನೈವೇದ್ಯ ಮಾಡಿ ನೆರೆದ ಮಕ್ಕಳಗೆ ಪ್ರಸಾದರೂಪವಾಗಿ ಉಂಡೆ ಚಕ್ಕುಲಿಗಳನ್ನು ವಿತರಿಸಲಾಗುವುದು. ಸಾರ್ವಜನಿಕರಿಗೂ ಅರ್ಘ್ಯ ಪ್ರದಾನ ಮಾಡಲು ಅವಕಾಶ ಕಲ್ಪಸಲಾಗಿದೆ.

ಪಾಲಕರು ತಮ್ಮ ಮಕ್ಕಳಗೆ ಅವರವರ ಮನೆಗಳಲ್ಲೇ ಅಥವಾ ಇತರ ಕಡೆಗಳಲ್ಲಿ ವೇಷ ಭೂಷಣವನ್ನು ಹಾಕಿಸಿ ತರಬಹುದು ಅಥವಾ ಸ್ಥಳದಲ್ಲೇ ಅವರವರ ವೆಚ್ಚದಲ್ಲಿ ವೇಷವನ್ನು ಹಾಕಿಸ ಬಹುದಾಗಿದೆ. ವೇಷಭೂಷಣಗಳಲ್ಲಿ ಆಡಂಬರಕ್ಕೆ ಹೆಚ್ಚಿನ ಪ್ರಾಶಸ್ತ್ರ ನೀಡದೆ ಮಕ್ಕಳ ಮುಗ್ಧ ಸೌಂದಯ್ಯದ ನೈಜತೆಯನ್ನು ಹೊರಸೂಸುವ ವೇಷಗಳನ್ನು ಧರಿಸಿಕೊಂಡಿರಲಿ ಎಂದು ಸಂಘಟಕರು ವಿನಂತಿಸಿಕೊಂಡಿದ್ದಾರೆ.

ಖ್ಯಾತ ಛಾಯಾಗ್ರಾಹಕರು ಸ್ಥಳದಲ್ಲಿ ಹಾಜರಿದ್ದು ಆಸಕ್ತರು ತಮ್ಮ ಮಕ್ಕಳ ವೈಯಕ್ತಿಕ ಛಾಯಾಚಿತ್ರವನ್ನು ಅವರವರ ಸ್ವಂತ ವೆಚ್ಚದಲ್ಲಿ ತೆಗೆಯುವ ಬಗ್ಗೆ ವ್ಯವಸ್ಥೆ ಮಾಡಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಎಂ.ಬಿ. ಪುರಾಣಿಕ್, ಕದ್ರಿ ನವನೀತ್ ಶೆಟ್ಟಿ, ವಿಜಯಲಕ್ಷ್ಮಿ ಶೆಟ್ಟಿ, ಮಂಜುಳ ಶೆಟ್ಟಿ, ತಾರಾನಾಥ್ ಬೋಳಾರ್,  ದಯಾನಂದ ಕಟೀಲ್,  ತಮ್ಮ ಲಕ್ಷ್ಮಣ ಮತ್ತಿತರರು ಉಪಸ್ಥಿತರಿದ್ದರು.