ಮಂಗಳೂರು: ಮಂಗಳೂರು ತಾಲೂಕಿನ ದಾಮಸ್‍ಕಟ್ಟೆ, ಬಳ್ಕುಂಜೆ ಜಿಲ್ಲಾ ಮುಖ್ಯ ರಸ್ತೆಯ 9.50 ಕಿ.ಮೀ ರಲ್ಲಿನ ಪಲಿಮಾರ್ ಗ್ರಾಮದ ಸಮುದ್ರದ ಹಿನ್ನೀರಿನ ಪ್ರದೇಶದ ಸೇತುವೆ ದುಸ್ಥಿತಿಯಲ್ಲಿದ್ದು, ವಾಹನ ಸಂಚಾರಕ್ಕೆ ಯೋಗ್ಯವಾಗಿಲ್ಲದಿರುವುದರಿಂದ ಮುಂದಿನ ಆದೇಶದವರೆಗೆ ಸೇತುವೆಯಲ್ಲಿ ಘನ ವಾಹನ ಸಂಚಾರವನ್ನು ನಿಬರ್ಂಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ಆದೇಶಿಸಿದ್ದಾರೆ.

ಬದಲಿ ಮಾರ್ಗ

ಪಲಿಮಾರ್ ಕಡೆಯಿಂದ ಮಂಗಳೂರು ಕಡೆಗೆ ಸಂಚರಿಸುವ ವಾಹನಗಳು ಪಲಿಮಾರ್ ಚರ್ಚ್ ರಸ್ತೆಯ ಮುಖಾಂತರ ಸಂಚರಿಸಿ, ಇನ್ನಾ, ಮುಂಡ್ಕೂರು ರಸ್ತೆಯ ಮೂಲಕ ಮುಂಡ್ಕೂರು ಎಂಬಲ್ಲಿ ಮಂಗಳೂರು - ಅತ್ರಾಡಿ ರಾಜ್ಯ ಹೆದ್ದಾರಿ 67 ಅನ್ನು ಸಂಪರ್ಕಿಸಿ, ಮಂಗಳೂರು - ಅತ್ರಾಡಿ ರಾಜ್ಯ ಹೆದ್ದಾರಿ 67 ರ ಮೂಲಕ ಮಂಗಳೂರಿಗೆ ಸಂಚರಿಸಬೇಕು.

ಪಲಿಮಾರ್ ಕಡೆಯಿಂದ ಬಳ್ಕುಂಜೆಗೆ ಸಂಚರಿಸುವ ವಾಹನಗಳು, ಪಲಿಮಾರ್ ಚರ್ಚ್ ರಸ್ತೆಯ ಮುಖಾಂತರ ಸಂಚರಿಸಿ, ಇನ್ನಾ, ಮುಂಡ್ಕೂರು ರಸ್ತೆಯ ಮೂಲಕ ಮುಂಡ್ಕೂರು ಎಂಬಲ್ಲಿ ಮಂಗಳೂರು- ಅತ್ರಾಡಿ ರಾಜ್ಯ ಹೆದ್ದಾರಿ 67 ಅನ್ನು ಸಂಪರ್ಕಿಸಿ, ಮಂಗಳೂರು - ಅತ್ರಾಡಿ ರಾಜ್ಯ ಹೆದ್ದಾರಿ 67ರಲ್ಲಿ ಪಟ್ಟೆ ಕ್ರಾಸ್ ಎಂಬಲ್ಲಿ ಬಲಕ್ಕೆ ತಿರುಗಿ, ಏಳಿಂಜೆ- ಉಳಿಪಾಡಿ- ಬಳ್ಕುಂಜೆ - ಪಟ್ಟಾ ಕ್ರಾಸ್ ಕುದ್ರಿಪದವು ಜಿಲ್ಲಾ ಮುಖ್ಯ ರಸ್ತೆಯ ಮೂಲಕ ಬಳ್ಕುಂಜೆಗೆ ಸಂಚರಿಸುವಂತೆ ಆದೇಶಿಸಿದ್ದಾರೆ.