ಮೂಡುಬಿದಿರೆ: ಮಕ್ಕಳ ಬಾಲ್ಯ ಎಂದರೆ ಕುತೂಹಲದ ಜಗತ್ತು. ಏಕೆ? ಹೇಗೆ? ಸಾಧ್ಯವೇ? ಎಂಬ ಅನೇಕ ಪ್ರಶ್ನೆಗಳೆ ಅವರ ಮನದಲ್ಲಿ ಮೂಡುತ್ತಿರುತ್ತವೆ.  ಹೊಸದನ್ನು ಮಾಡಬೇಕು, ಕಂಡುಹಿಡಿಯಬೇಕು ಎನ್ನುವ ಕಾತರ. ಆದರೆ ತರಗತಿಗಳು ಮೇಲಕ್ಕೆ ಏರಿದಂತೆ ಈ ಗುಣಗಳು ನಿಧಾನವಾಗಿ ಕ್ಷೀಣಿಸುತ್ತಾ ಸಾಗುತ್ತವೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ನುಡಿದರು.  

ಅವರು ಆಳ್ವಾಸ್ ಸೆಂಟ್ರಲ್ ಸ್ಕೂಲ್‍ನ ಎಂಟನೇ ವರ್ಷದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯ ನೆಲೆಯಲ್ಲಿ ಮಾತನಾಡಿದರು.   

ಈ ಪರಿವರ್ತನೆಗೆ ನಮ್ಮ ಶಿಕ್ಷಣ ಪದ್ಧತಿ, ಶಿಕ್ಷಕರು ಹಾಗೂ ಪೋಷಕರು ಮುಖ್ಯ ಕಾರಣವಾಗಿದ್ದಾರೆ. ಮಕ್ಕಳ ಕುತೂಹಲ ಬೆಳೆಯುವುದು ಅವರ ಪ್ರಶ್ನೆಯನ್ನು ಜೀವಂತವಾಗಿಡುವ ಮೂಲಕ. ಶಿಕ್ಷಕರು ಎಲ್ಲವನ್ನೂ ಬೋಧಿಸಬೇಕಾಗಿಲ್ಲ, ಬದಲಿಗೆ ತಿಳಿಯುವ ಆಸೆ ಉಳಿಯುವಂತೆ ಬೆಂಬಲಿಸಬೇಕು. ಪೋಷಕರು ಪಾಠವನ್ನು ಕೇವಲ ಪುಸ್ತಕದಲ್ಲಿ ಅಲ್ಲ, ಜೀವನದಲ್ಲೂ ಕಂಡುಕೊಳ್ಳುವಂತೆ ಮಾರ್ಗದರ್ಶನ ನೀಡಬೇಕು. ಪೋಷಕರು ಪ್ರೊತ್ಸಾಹಿಸಿದರೆ ಕುತೂಹಲದಿಂದ ಕಲಿಯುವ ಮಗು ನಾಳೆ ಸಮಾಜಕ್ಕೆ ಜವಾಬ್ದಾರಿಯುತ, ವಿಚಾರಶೀಲ, ಮೌಲ್ಯಯುತ ನಾಗರಿಕನಾಗುತ್ತಾನೆ. ಇದೇ ನಿಜವಾದ ಶಿಕ್ಷಣದ ಗುರಿ ಮತ್ತು ಅದನ್ನು ಸಾಧಿಸುವ ಮೊದಲ ಹೆಜ್ಜೆ ಮನೆಯಿಂದಲೇ ಆರಂಭವಾಗಬೇಕಿದೆ.

 ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಪ್ರತೀ ಸಂಸ್ಥೆಯ ವಿದ್ಯಾರ್ಥಿ ಸಮೂಹದಲ್ಲಿ ವೈವಿಧ್ಯತೆಯನ್ನು ಕಾಣಬಹುದು. ಇಲ್ಲಿ ಕಲಿಯುವ ಸಾವಿರಾರು ವಿದ್ಯಾರ್ಥಿಗಳ ನಡುವೆ ಕಂಡುಬರುವ ಸಂಸ್ಕೃತಿ, ಭಾಷೆ, ಪರಂಪರೆ, ಕಲಿಕಾ ಶೈಲಿ ಮತ್ತು ವೈಯಕ್ತಿಕ ಸಾಮಥ್ರ್ಯಗಳ ವೈವಿಧ್ಯತೆಯೇ  ಇಲ್ಲಿನ ನಿಜವಾದ ಬಲ. ಈ ಸಂಗಮ, ಈ ಒಂದಾಗುವಿಕೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅನನ್ಯತೆಗೆ ಹಿಡಿದ ಕೈಗನ್ನಡಿ ಎಂದರು.  

ದೇಶಿಯ ಮಟ್ಟದಲ್ಲಿ ನಡೆದ ಸಂಶೋಧನಾ ಚಟುವಟಿಕೆಯಲ್ಲಿ ಪಾಲ್ಗೊಂಡು, ಟಾಪ್ 50ರಲ್ಲಿ ಆಯ್ಕೆಗೊಂಡಿರುವ ವಿದ್ಯಾರ್ಥಿನಿ ಗ್ಲೋರಿ ಪ್ರಕಾಶ್‍ಳನ್ನು  ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಸಂಸ್ಥೆಯ  ಟ್ರಸ್ಟಿ ವಿವೇಕ್ ಆಳ್ವ , ಆಳ್ವಾಸ್ ಶಾಲೆಯ ಆಡಳಿತಾಧಿಕಾರಿ ವಿ.ಪ್ರೀತಮ್ ಕುಂದರ್, ಪ್ರಾಚಾರ್ಯ ಮೊಹಮ್ಮದ್ ಶಫಿ ಸೇರಿದಂತೆ ಇನ್ನಿತರ ಗಣ್ಯರು ಇದ್ದರು.   ನಂತರ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮವನ್ನು ದಿಶಾ,  ವಿಷ್ಣು ಪ್ರಿಯಾ ನಿರೂಪಿಸಿ, ವರ್ಷಾ ವಂದಿಸಿದರು.