ಮೂಡುಬಿದಿರೆ: ದ.ಕ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ, ಶಿಕ್ಷಣಾಧಿಕಾರಿಯವರ ಕಛೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಹಾಗೂ ಸಮನ್ವಯ ಶಿಕ್ಷಣ ಸಂಪನ್ಮೂಲ ಕೇಂದ್ರ ಮೂಡುಬಿದಿರೆ ವಲಯ, ಕೆ. ಅಮರನಾಥ್ ಶೆಟ್ಟಿ ಮೆಮೊರಿಯಲ್ ಚಾರಿಟೇಬಲ್ ಟ್ರಸ್ಟ್, ಚೈಲ್ಡ್ ಕೇರ್ ಹಾಗೂ ಲಯನ್ಸ್ ಕ್ಲಬ್ ಮೂಡುಬಿದಿರೆ ಇದರ ಸಹಭಾಗಿತ್ವದಲ್ಲಿ ಸಹಭಾಗಿತ್ವದಲ್ಲಿ ಬುಧವಾರ ಸಮಾಜ ಮಂದಿರದಲ್ಲಿ ನಡೆದ ಸಮನ್ವಯ ಶಿಕ್ಷಣ ಚಟುವಟಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಪುರಸಭಾಧ್ಯಕ್ಷೆ ಜಯಶ್ರೀ ಮಾತನಾಡಿದರು.
ಪರಿಸರವನ್ನು ನಾವು ನಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾವಣೆ ಅಥವಾ ಬಳಕೆ ಮಾಡಿಕೊಳ್ಳುವುದರಿಂದ ಮುಂದಿನ ದಿನಗಳಲ್ಲಿ ಪ್ರಕೃತಿ ವಿನಾಶವಾಗುವುದು ಖಚಿತ ಆದ್ದರಿಂದ ನಮ್ಮ ಮನೆಯ ಮಕ್ಕಳಿಗೆ ಪರಿಸರದ ಬಗ್ಗೆ ಕಾಳಜಿಯನ್ನು ವಹಿಸುವಂತೆ ತಿಳಿ ಹೇಳುವುದು ಅತ್ಯಗತ್ಯ ಎಂದರು.
ತಾ.ಪಂ.ಕಾಯ೯ನಿವ೯ಹಣಾಧಿಕಾರಿ ಕುಸುಮಾಧರ ಕೆ. ಅಧ್ಯಕ್ಷತೆಯನ್ನು ವಹಿಸಿ ಶಿಕ್ಷಣ ಇಲಾಖೆಯ ಸಮಗ್ರ ಶಿಕ್ಷಣ ಕರ್ನಾಟಕ ಇದರ ಸಮನ್ವಯ ಶಿಕ್ಷಣ ಸಂಪನ್ಮೂಲ ಕೇಂದ್ರದ ವತಿಯಿಂದ ವಿಶೇಷ ಅಗತ್ಯವುಳ್ಳ ವಿದ್ಯಾರ್ಥಿಗಳಿಗೆ ಇರುವ ಸೌಲಭ್ಯಗಳ ಕರ ಪತ್ರಗಳನ್ನು ಬಿಡುಗಡೆ ಗೊಳಿಸಿ ಮಾತನಾಡಿ ವಿಶೇಷ ಚೇತನ ವಿದ್ಯಾರ್ಥಿಗಳನ್ನು ಸಾಮಾನ್ಯ ಶಾಲೆಗೆ ಸೇರಿಸಿ ಕಲಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಸಲಹೆ ನೀಡಿದರು.
ಸನ್ಮಾನ : ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದಿರುವ ವಿಶೇಷ ಚೇತನ ವಿದ್ಯಾರ್ಥಿ ಚಿನ್ಮಯ್ ಅವರನ್ನು ಸನ್ಮಾನಿಸಲಾಯಿತು.
ಬೋನವೆಂಚರ್ ಮಿನೇಜಸ್, ಡಾ. ಅಮರಶ್ರೀ ಅಮರನಾಥ ಶೆಟ್ಟಿ, ಅಚ೯ನಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕಿ ಸುಶೀಲಾ ಹೆಗ್ಡೆ, ಸಿ ಆರ್ ಪಿಗಳಾದ ನಾಗರತ್ನ,ದಿನಕರ ಮತ್ತು ರಾಬರ್ಟ್ ಡಿ'ಸೋಜ ಉಪಸ್ಥಿತರಿದ್ದರು.
ಕ್ಷೇತ್ರ ಸಮನ್ವಯಾಧಿಕಾರಿ ಸೌಮ್ಯ ಎನ್. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಿಆರ್ ಪಿ ಮಹೇಶ್ವರಿ ಕಾಯ೯ಕ್ರಮ ನಿರೂಪಿಸಿದರು. ಫ್ಲೇವಿ ಡಿ'ಸೋಜ ವಂದಿಸಿದರು.