ಮುಂಬಯಿ: ಬಿ.ಎಸ್. ಕೆ.ಬಿ. ಎಸೋಸಿಯೇಶನ್, ಗೋಕುಲ ಶತಮಾನೋತ್ಸವ ಆಚರಣೆಯ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ, ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಶುಕ್ರವಾರ (ಜು.11) ರಿಂದ ಶನಿವಾರ (ಜು.19)ರವರೆಗೆ ಹಮ್ಮಿಕೊಂಡ ಋಕ್ ಸಂಹಿತಾ ಯಾಗವು ಕಳೆದ ಶುಕ್ರವಾರದಂದು ಶುಭಾರಂಭಗೊಂಡಿತು.
ಚೆನ್ನೈ ಹಾಗೂ ಉಡುಪಿಯಿಂದ ಆಗಮಿಸಿದ ವೇದಮೂರ್ತಿಗಳಾದ ನಾರಾಯಣ ಆಚಾರ್ಯ, ಶ್ರೀನಿವಾಸ ಆಚಾರ್, ವಿಠ್ಠಲ ಆಚಾರ್, ವಾಮನ ಆಚಾರ್, ರಾಘವೇಂದ್ರ ಆಚಾರ್, ಮನೋಹರ ಆಚಾರ್, ವೇದವ್ಯಾಸ ಆಚಾರ್, ದರೆಗುಡ್ಡೆ ಶ್ರೀನಿವಾಸ್ ಭಟ್ ಅವರಿಂದ ದೇವತಾ ಪ್ರಾರ್ಥನೆ, ಕೃಚ್ಚಾಚರಣೆ, ವಿಪ್ರ ಸ್ವಾಗತ, ಪುಣ್ಯಾಹ ವಾಚನ, ನಾಂದಿ ಸಮಾರಾಧನೆ, ಆಚಾರ್ಯ ವರಣೆ, ವಾಸ್ತು ಪೂಜೆ, ಮಂಡಪ ಸಂಸ್ಕಾರ, ಕುಂಡ ಸಂಸ್ಕಾರ, ಅಗ್ನಿ ಜನನ, ಕೂಷ್ಮಾಂಡ ಹೋಮ ಅಂಕುರಾರ್ಪಣೆ. ಕೌತುಕ ಬಂಧನ, ಸರ್ವತೋಭದ್ರ ಮಂಡಲ, ಚಕ್ರಾಬ್ಜ ಮಂಡಲ ಪೂಜೆ ಇತ್ಯಾದಿ ಧಾರ್ಮಿಕ ವಿಧಿಗಳೊಂದಿಗೆ ಉಪಾಧ್ಯಕ್ಷರಾದ ವಾಮನ್ ಹೊಳ್ಳ, ಜಯಲಕ್ಷ್ಮಿ ಹೊಳ್ಳ ದಂಪತಿ, ಗೌ.ಕಾರ್ಯದರ್ಶಿ ಅನಂತಪದ್ಮನಾಭ ಪೋತಿ, ಸಹನಾ ಪೋತಿ ದಂಪತಿ, ಯಜಮಾನತ್ವದಲ್ಲಿ ವಿಧಿವತ್ತಾಗಿ ನೆರವೇರಿತು.
ಯಾಗದ ಪೂರಕವಾಗಿ ಜರಗಿದ ಪವಮಾನ ಹೋಮವು ವೇದಮೂರ್ತಿ ವಾಸುದೇವ ಭಟ್ ನೇತೃತ್ವದಲ್ಲಿ ಜೊತೆ ಕೋಶಾಧಿಕಾರಿ ಗಣೇಶ್ ಭಟ್, ಶುಭಾ ಭಟ್ ದಂಪತಿ ಪ್ರಾಯೋಜಕತ್ವ ಹಾಗೂ ಯಜಮಾನತ್ವದಲ್ಲಿ ನೆರವೇರಿತು.
ಈ ಸಂದರ್ಭದಲ್ಲಿ ಕೋಶಾಧಿಕಾರಿ ಹರಿದಾಸ್ ಭಟ್, ಧಾರ್ಮಿಕ ಸಮಿತಿ ಸದಸ್ಯರು, ಬಿ.ಎಸ್. ಕೆ. ಬಿ. ಎಸೋಸಿಯೇಶನ್ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು. ತೀರ್ಥ ಪ್ರಸಾದ ವಿತರಣೆ ಹಾಗೂ ಅನ್ನ ಪ್ರಸಾದ ವಿತರಣೆ ನೆರವೇರಿತು. ಮುಂದಿನ ಏಳು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಗಳೊಂದಿಗೆ ಯಾಗ, ಸಂಜೆ ಐದು ಗಂಟೆಯಿಂದ ಭಕ್ತಿಗೀತೆ. ಭಜನೆ, ಧಾರ್ಮಿಕ ಪ್ರವಚನ, ಅಷ್ಠಾವಧಾನ ಸೇವೆಗಳು ನಡೆಯಲಿವೆ. ಕೊನೆಯ ದಿನವಾದ ಶನಿವಾರ (ಜು.19)ರಂದು ಪೂರ್ಣಾಆಹುತಿಯೊಂದಿಗೆ ಯಾಗವು ಸಂಪನ್ನಗೊಳ್ಳಲಿದೆ. ಭಕ್ತಾದಿಗಳಿಗೆಲ್ಲಾ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಈ ಮೂಲಕ ತಿಳಿಸುತ್ತೇವೆ.