ಲೇಖನ ರಾಯಿ ರಾಜಕುಮಾರ ಮೂಡುಬಿದಿರೆ

ದೇವರ್ಷಿ ನಾರದರು ಜ್ಙಾನ, ಬುದ್ಧಿ ಯಲ್ಲಿ ಅಪ್ರತಿಮ ರಾಗಿದ್ದು ವಿಷ್ಣುವಿನ ಪರಮ ಭಕ್ತರಾಗಿದ್ದರು. ಆ ಪ್ರಕಾರದಲ್ಲಿ ಸದಾ "ನಾರಾಯಣ, ನಾರಾಯಣ" ಸ್ಮರಣೆ ಮಾಡುತ್ತಾ ತ್ರಿಲೋಕ ಸಂಚಾರಿಯಾಗಿದ್ದ ನಾರದರು 'ಕಲಹ ಪ್ರಿಯ' ರೆಂದೇ ಪ್ರಖ್ಯಾತರು. ಆದರೆ ಮೂರೂ ಲೋಕದ ಮಂದಿಗೆ ಎಲ್ಲರ ವಿಷಯ, ವಿಚಾರ, ಒಳ ನೋಟದ ವಿವರಗಳನ್ನು ಅರುಹುವ ಮಹಾ ಗೂಢಚಾರ ನಾರದರು. ಕೆಲವಾರು ಬಾರಿ ಸಶರೀರರಾಗಿ, ಹಲವಾರು ಬಾರಿ ಅಶರೀರರಾಗಿ ಗೂಢಚಾರಿಕೆ ಮಾಡುತ್ತಿದ್ದ ಕಾರಣ ಗೂಢಚಾರಿಕೆಯ ಪ್ರಾರಂಭ, ಕಲಹ ಪ್ರಾರಂಭಿಸಿ ಚಂದ ನೋಡುವ ವಿಧಾನ, ಸಂಧಾನ ಪ್ರಕ್ರಿಯೆಯ ಕೆಲಸಗಳೆಲ್ಲದರಲ್ಲಿಯೂ ನಾರದರು ನಿಸ್ಸೀಮರೆಂದು ಜನಜನಿತ. ಯಾವುದೇ ಪೌರಾಣಿಕ ಪ್ರಸಂಗಗಳಿದ್ದರೂ ನಾರದರೇ ಸುದ್ದಿ ಮಾಧ್ಯಮದ ಜೀವಾಳವಾಗಿದ್ದವರು. ಆದುದರಿಂದ ಇಂದಿನ ಸುದ್ದಿ ಬಿತ್ತರದ ಮಂದಿ ನಾರದರನ್ನೇ ಮೂಲ ಕರ್ತೃ ಎಂದು ಒಪ್ಪಿಕೊಳ್ಳಬೇಕಾಗುತ್ತದೆ. 

ಈ ವರ್ಷ ಜ್ಯೇಷ್ಠ ಮಾಸ ಪ್ರತಿಪದೆ ಕೃಷ್ಣ ಪಕ್ಷ ಪಾಡ್ಯ ದಂದು ಎಂದರೆ ಮೇ 13 ರಂದು ನಾರದ ಜಯಂತಿ ಆಚರಿಸಲಾಗುತ್ತದೆ. ಬ್ರಹ್ಮ ಮಾನಸ ಪುತ್ರ ನಾರದ ಮುನಿ ತ್ರಿಲೋಕ ಸಂಚಾರದಲ್ಲಿ ವೀಣೆಯೊಂದಿಗೆ ಸದಾ ಇರುವುದರಿಂದ "ನಾದ ಬ್ರಹ್ಮ" ನೆಂದೂ ಪ್ರಸಿದ್ಧನು. ಸಂಗೀತದ ಪಿತಾಮಹ ನೆಂದೂ ಈತನನ್ನು ಪೂಜಿಸುತ್ತಾರೆ. ಸ್ಮರಿಸಿದವರಿಗೆ ಸದಾ ಕಾಣಿಸಿಕೊಳ್ಳುವ ನಾರದ ಮುನಿ ದೇವ, ಮಾನವ, ಪಾತಾಳ ಲೋಕದ ನಿರಂತರ ಸಂಚಾರಿ.