ಜನರ ರಕ್ಷಣೆಯ ಜವಾಬ್ದಾರಿ ಇರುವುದು ಗೃಹ ಸಚಿವರದು. ಗೃಹ ಮಂತ್ರಿಗಳಾದ ಅರಗ ಜ್ಞಾನೇಂದ್ರ ಅವರು ಪೋಲೀಸು ಇಲಾಖೆಯನ್ನು ನಾಯಿಗೆ ಹೋಲಿಸಿದ್ದಾರೆ ಎಂದರೆ ರಾಜ್ಯದ ಕಾನೂನು ಸುವ್ಯವಸ್ಥೆ ಬಿದ್ದು ಹೋಗಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ ಎಂದು ಮಾಜೀ ಮಂತ್ರಿ ರಮಾನಾಥ ರೈ ಹೇಳಿದರು.

ಒಂದು ಇಲಾಖೆಯ ಮಂತ್ರಿ ತನ್ನ ಇಡೀ ಇಲಾಖೆಯನ್ನು ಇಷ್ಟು ಹೀನಾಯವಾಗಿ ಮಾತನಾಡುತ್ತಾರೆ ಎಂದರೆ ಅವರು ಸಚಿವರಾಗಿರಲು ಅಸಮರ್ಥರು. ಅಲ್ಲದೇ ಬಿಜೆಪಿ ಸರಕಾರಕ್ಕೆ ಅಧಿಕಾರಿಗಳ ಮೇಲೆ  ನಿಯಂತ್ರಣ ಇಲ್ಲ ಎಂಬುದನ್ನು ಇದು ಪುಷ್ಟಿಕರಿಸುತ್ತದೆ ಎಂದು ರೈ ಹೇಳಿದರು.

ಬಿಜೆಪಿಯವರು ಆಳಲು ಬಾರದಿದ್ದಾಗ ಅಧಿಕಾರಿಗಳನ್ನು ದೂರುತ್ತಾರೆ. ಪೋಲೀಸು ಇಲಾಖೆ ಸಹಿತ ಎಲ್ಲ ಇಲಾಖೆಗಳಲ್ಲೂ ಒಳ್ಳೆಯ ಅಧಿಕಾರಿಗಳೂ ಇದ್ದಾರೆ. ಗುತ್ತಿಗೆದಾರರ ಸಂಘವೇ ಇವರು  40% ಲಂಚ ಹೊಡೆಯುತ್ತಾರೆ ಎಂದಿದ್ದಾರೆ. ಇವರಿಗೆ ಆಳುವ ಯೋಗ್ಯತೆಯೇ ಇಲ್ಲ ಎಂದು ರೈ ತಿಳಿಸಿದರು.

ಪಂಚಾಯತ್ ರಾಜ್ ಬೀಳಿಸಿದವರು, ದುರ್ಬಲ ಗೊಳಿಸಿದವರು ಬಿಜೆಪಿಯವರು. ಇವರ ಆಡಳಿತದಲ್ಲಿ ಒಬ್ಬ ಬಡವರಿಗೆ ಒಂದು ಮನೆ ನೀಡಿದ್ದು ತೋರಿಸಿ. ಬಿಜೆಪಿ ಕಾಲದಲ್ಲಿ ಕಾಂಗ್ರೆಸ್ ಕಾಲದ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಮತ್ತು ಆಹಾರ ಯೋಜನೆ ಮಾತ್ರ ಸರಿಯಾಗಿದೆ. ಪಂಚಾಯತ್ ರಾಜ್ ಗಟ್ಟಿ ಮಾಡಿದ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವ ಜವಾಬ್ದಾರಿ ಪಂಚಾಯತ್ ಜನರದು ಎಂದು ರಮಾನಾಥ ರೈ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಹರೀಶ್ ಕುಮಾರ್ ಶಾಲೆಟ್ ಪಿಂಟೋ, ಚಿತ್ತರಂಜನ್, ಹರಿನಾಥ್, ಪದ್ಮನಾಭ ನರಿಂಗಾಣ ಮೊದಲಾದವರು ಉಪಸ್ಥಿತರಿದ್ದರು.