ಉಳ್ಳಾಲದ ಮಾಸ್ತಿಕಟ್ಟೆಯಲ್ಲಿ ಗಂಡ ಮಡಿದ ಎರಡು ಗಂಟೆಯಲ್ಲಿ ಹೆಂಡತಿ ಕೂಡ ಕುಸಿದು ಸತ್ತ ದಾರುಣ ಸಂಗತಿ‌ ವರದಿಯಾಗಿದೆ.

ನಜೀರ್ ಅಹ್ಮದ್ 62ರ ಪ್ರಾಯದವರು. ಕಾಂಗ್ರೆಸ್ ಮುಖಂಡರಾದ ಅವರು ಇತ್ತೀಚೆಗೆ ನ್ಯುಮೋನಿಯಾ ಬಾಧೆಗೆ ಒಳಗಾಗಿದ್ದರು. ಬುಧವಾರ ಮಧ್ಯ ರಾತ್ರಿ ಉಸಿರಾಟದ ತೊಂದರೆ ಹೆಚ್ಚಾದುದರಿಂದ ಅವರನ್ನು ಸ್ಥಳೀಯ ನರ್ಸಿಂಗ್ ಹೋಂ ಒಂದಕ್ಕೆ ಕರೆದೊಯ್ಯುವ ಏರ್ಪಾಟಾಯಿತು. ಆದರೆ ದಾರಿ ಮಧ್ಯೆ ನಟ್ಟಿರುಳು 12.30ಕ್ಕೆ ಅವರು ದಾರಿಯಲ್ಲಿಯೇ ತೀರಿಕೊಂಡರು. ಮನೆಗೆ‌ ಶವವನ್ನು ತಂದು ಎದುರು ಹಾಲ್‌ನಲ್ಲಿ ಇಟ್ಟು ಮುಂದಿನ ಕಾರ್ಯದತ್ತ ಎಲ್ಲರೂ ತಯಾರಿ ನಡೆಸಿದ್ದರು. ಸುಮಾರು 2.30 ಗಂಟೆ. ಪತಿಯ ಪಾರ್ಥಿವ ಶರೀರದೆದುರು ಕುಸಿದು ಬಿದ್ದ  54ರ ಪ್ರಾಯದ ಜಮೀಲಾ ಮೇಲೇಳಲೇ ಇಲ್ಲ. ಪತಿಯ ‌ಬೆನ್ನು ಹಿಡಿದು ಕಾಣದ ಲೋಕಕ್ಕೆ ನಡೆದುಬಿಟ್ಟರು.