ಉಡುಪಿ:  ಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ವಿಧೇಯಕ ಅನ್ವಯ ನಾಮಫಲಕದ ಮೇಲ್ಭಾಗದಲ್ಲಿ ಕನ್ನಡ ಭಾಷೆಯನ್ನು ಶೇ.60 ರಷ್ಟು ಪ್ರದರ್ಶಿಸುವುದನ್ನು ಕಡ್ಡಾಯವಾಗಿ ಜಾರಿಗೊಳಿಸಲು ಸೂಚಿಸಲಾಗಿರುತ್ತದೆ. 

ಜಿಲ್ಲೆಯಲ್ಲಿ ನಾಮಫಲಕದ ಮೇಲ್ಭಾಗದಲ್ಲಿ ಕನ್ನಡ ಭಾಷೆಯನ್ನು ಶೇ.60 ರಷ್ಟು ಪ್ರದರ್ಶಿಸದೇ ಇರುವುದು ಪರಿಶೀಲನೆ ವೇಳೆ ಕಂಡುಬಂದಿದ್ದು, ನಿಯಮವನ್ನು ಪಾಲಿಸದೇ ಇರುವ ಸಂಘ, ಸಂಸ್ಥೆ ಹಾಗೂ ಘಟಕಗಳಿಗೆ ಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ತಿದ್ದುಪಡಿ ವಿಧೇಯಕ ಅನ್ವಯ ಮೊದಲನೇಯ ಅಪರಾಧಕ್ಕಾಗಿ 5000 ರೂ. ರವರೆಗೆ ವಿಸ್ತರಿಸಬಹುದಾದ ಜುಲ್ಮಾನೆ, ಎರಡನೇಯ ಅಪರಾಧಕ್ಕಾಗಿ ರೂ. 10000 ರೂ. ರವರೆಗೆ ವಿಸ್ತರಿಸಬಹುದಾದ ಜುಲ್ಮಾನೆ ಹಾಗೂ ನಂತರದ ಪ್ರತಿಯೊಂದು ಅಪರಾಧಕ್ಕಾಗಿ 20000 ರೂ. ರವರೆಗೆ ವಿಸ್ತರಿಸಬಹುದಾದ ಜುಲ್ಮಾನೆ ವಿಧಿಸುವುದರೊಂದಿಗೆ ಪರವಾನಿಗೆಯನ್ನು ಸಹ ರದ್ದುಗೊಳಿಸಬಹುದಾಗಿರುತ್ತದೆ.

ಆದ್ದರಿಂದ ಜಿಲ್ಲೆಯಲ್ಲಿ ನಾಮಫಲಕಗಳಲ್ಲಿ ಸಂಘ, ಸಂಸ್ಥೆ ಹಾಗೂ ಘಟಕದ ಹೆಸರು ಮತ್ತು ವಿಳಾಸವನ್ನು ಕನ್ನಡ ಭಾಷೆಯಲ್ಲಿ ಫಲಕಗಳ ಮೇಲ್ಭಾಗದಲ್ಲಿ ಶೇ.60 ರಷ್ಟು ಪ್ರದರ್ಶಿಸುವ ಮೂಲಕ ಪರಿಷ್ಕ್ರತ  ಫಲಕವನ್ನು ಆಗಸ್ಟ್ 30 ರ ರೊಳಗಾಗಿ ಅಳವಡಿಸಬೇಕು. ನಂತರದ ದಿನಗಳಲ್ಲಿ ತಪಾಸಣೆ ಸಂದರ್ಭದಲ್ಲಿ ನಾಮಫಲಕದಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ಮೇಲೆ ವಿವರಿಸಿರುವ ದಂಡನೆಗೆ ಒಳಪಡಿಸಲಾಗುವುದು ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.