ಉಜಿರೆ: ಭಾರತೀಯ ಜೀವವಿಮಾ ನಿಗಮವು ಕಳೆದ 17 ವರ್ಷಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಯೋಗದೊಂದಿಗೆ ಜನರ ಆರ್ಥಿಕ ಸ್ವಾವಲಂಬನೆಗಾಗಿ ಆರೋಗ್ಯ, ಶಿಕ್ಷಣ, ವೈದ್ಯಕೀಯ ಕ್ಷೇತ್ರಗಳಲ್ಲಿ ಉತ್ತಮ ಸೇವೆ ನೀಡುತ್ತಿದೆ. ದೇಶದೆಲ್ಲೆಡೆ 15 ಲಕ್ಷ ಬಿಮಾ ಸಖಿಯರು ಸೇವೆ ಸಲ್ಲಿಸುತ್ತಿದ್ದು, ಅವರಿಗೆ ಸಂಬಳದ ಜೊತೆ ಕಮೀಶನ್ ಕೂಡಾ ನೀಡಲಾಗುತ್ತದೆ ಎಂದು ಭಾರತೀಯ ಜೀವ ವಿಮಾ ನಿಗಮದ ಹೈದ್ರಾಬಾದ್ ವಲಯದ ಮುಖ್ಯಸ್ಥ ಪುನೀತ್ ಕುಮಾರ್ ಹೇಳಿದರು.

ಅವರು ಮಂಗಳವಾರ ಧರ್ಮಸ್ಥಳದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಯೋಗದಲ್ಲಿ ೧೭ ವರ್ಷಗಳ ಸೇವೆಯ ಸಾಧನೆಗಾಗಿ ಅಂಚೆ ಇಲಾಖೆ ವತಿಯಿಂದ ಧರ್ಮಸ್ಥಳದ ಬಗ್ಯೆ ವಿಶೇಷ ಅಂಚೆ ಚೀಟಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

ರೋಬಾಟ್ ಮೂಲಕ ವಿಶಿಷ್ಠ ರೀತಿಯಲ್ಲಿ ಅಂಚೆ ಚೀಟಿ ಬಿಡುಗಡೆಗೊಳಿಸಲಾಯಿತು.

ದೇಶದೆಲ್ಲೆಡೆ 26 ಕೋಟಿ ವಿಮಾ ಪಾಲಿಸಿದಾರರಿದ್ದು, ಹೆಚ್ಚಿನ ಜನರು ವಿಮಾ ಸೌಲಭ್ಯ ಪಡೆಯುತ್ತಿದ್ದಾರೆ ಎಂದರು. ಭಾರತೀಯ ಜೀವವಿಮಾ ನಿಗಮದ ವತಿಯಿಂದ ಹೆಗ್ಗಡೆಯವರಿಗೆ ಜನ್ಮದಿನದ ಶುಭಾಶಯಗಳೊಂದಿಗೆ ಗೌರವಿಸಲಾಯಿತು.

ಮರ್ಸಿಡಿಸ್ ಬೆಂಝ್ ಕಂಪೆನಿಯ ಮಹಾಪ್ರಬಂಧಕ ಸಂಜಯ್ ಕೊಚರ್ ಮಾತನಾಡಿ ಕಾರ್ ಮ್ಯೂಸಿಯಂನಲ್ಲಿ ಅಪೂರ್ವ ಕಾರುಗಳ ಸಂಗ್ರಹ ನೋಡಿ ಸಂತೋಷವಾಯಿತು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ರಾಮೇಶ್ವರಂನ ಎ.ಪಿ.ಜೆ. ಶೇಕ್ ಸಲೀಂ ಮಾತನಾಡಿ ಧರ್ಮಸ್ಥಳದ ಸೇವಾ ಕಾರ್ಯಗಳ ಬಗ್ಯೆ ಅಭಿನಂದಿಸಿದರು.

ತಮ್ಮಲ್ಲಿರುವ ಅಪೂರ್ವ ವಸ್ತುಗಳ ಸಂಗ್ರಹವನ್ನು ಮಂಜೂಷಾ ಮ್ಯೂಸಿಯಂ ಗೆ ಕೊಡುವುದಾಗಿ ತಿಳಿಸಿದರು.

ಹೇಮಾವತಿ ವೀ. ಹೆಗ್ಗಡೆಯವರು ಮಾತನಾಡಿ ಜೀವವಿಮೆಯು ನಮ್ಮ ಕಷ್ಟಕಾಲದಲ್ಲಿ ಯೋಗಕ್ಷೇಮ ಕಾಪಾಡಲು ಸಹಕಾರಿಯಾಗಿದೆ ಎಂದರು. ಸಂಕಷ್ಟ ಪರಿಹಾರದಲ್ಲಿ ಜೀವವಿಮೆ ಕಲ್ಪವೃಕ್ಷದಂತೆ ಸಹಕಾರಿಯಾಗಿದೆ ಎಂದರು.

ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಜೀವವಿಮಾ ಕಂಪೆನಿಯಿಂದಾಗಿ ಸಾರ್ವಜನಿಕರು ಇಂದು ಜಾಗೃತರಾಗಿದ್ದು, ತಾವಾಗಿಯೆ ವಿಮೆ ಮಾಡಿಸಿಕೊಳ್ಳಲು ಮುಂದೆ ಬರುತ್ತಿದ್ದಾರೆ. ಸಾಲಗಾರರಿಗೂ ವಿಮೆ ಮಾಡಿ ಭದ್ರತೆ ನೀಡುತ್ತಿರುವ ಬಗ್ಯೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಇಂದು ರಾಜ್ಯದ 254 ಕೇಂದ್ರಗಳಲ್ಲಿ ಕೂಡಾ ಸೇವಾದಿನವಾಗಿ ವಿಮಾ ಪ್ರತಿನಿಧಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.

ಉಡುಪಿ ಅಂಚೆ ವಿಭಾಗದ ಅಂಚೆ ಅಧೀಕ್ಷಕ ರಮೇಶ್ ಮತ್ತು ಪುತ್ತೂರು ಅಂಚೆ ವಿಭಾಗದ ಅಂಚೆ ಅಧೀಕ್ಷಕ ರವೀಂದ್ರನಾಯಕ್ ಉಪಸ್ಥಿತರಿದ್ದರು.

ಉಡುಪಿ ಜೀವವಿಮಾ ನಿಗಮದ ಅಧಿಕಾರಿ ಗಣಪತಿ ಭಟ್ ಸ್ವಾಗತಿಸಿದರು. ಉಡುಪಿಯ ದಿನೇಶ್ ಪ್ರಭು ಧನ್ಯವಾದವಿತ್ತರು.