ಮಂಗಳೂರು ಸೆ.23: ವಿದ್ಯಾಭಾರತಿ ಕರ್ನಾಟಕ ದಕ್ಷಿಣಕನ್ನಡ ಜಿಲ್ಲೆಯ ವತಿಯಿಂದ ಎರಡು ದಿನಗಳ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಮಂಗಳೂರಿನ ಶಕ್ತಿ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರಾದ ಡಾ.ಕೆ.ಸಿ.ನಾೈಕ್‍ ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಕಲಿಕೆಯ ಜೊತೆಗೆ ಕ್ರೀಡೆಗೆ ನಾವೆಲ್ಲರು ಪ್ರೋತ್ಸಾಹವನ್ನು ನೀಡಬೇಕು. ನಾವು ಭಾರತದ ಮುಂದಿನ ಶಕ್ತಿ. ರಜೆಯಲ್ಲಿ ಬಹಳ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿರುವುದು ನೋಡಿದರೆ ನಮಗೆ ಕ್ರೀಡೆಯಲ್ಲಿರುವ ಆಸಕ್ತಿಯನ್ನು ಇದು ತೋರಿಸುತ್ತದೆ ಎಂದು ಅವರು ಹೇಳಿದರು. 

ಈ ಕ್ರೀಡೆಯಲ್ಲಿ ಎಲ್ಲರು ಗೆಲುವು ಸಾಧಿಸಲು ಸಾಧ್ಯವಿಲ್ಲ ಆದರೆ ಕೆಲವರು ಗೆಲುವು ಸಾಧಿಸುತ್ತಾರೆ. ಸೋತವರು ಮುಂದಿನ ದಿನಗಳಲ್ಲಿ ಗೆಲುವು ಸಾಧಿಸುತ್ತೇನೆಂಬ ಭರವಸೆಯಿಂದ ಪ್ರಯತ್ನವನ್ನು ಮುಂದುವರಿಸಬೇಕೆಂದು ಹೇಳಿದರು.  ಶಕ್ತಿ ಪಪೂ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ವೆಂಕಟೇಶಮೂರ್ತಿಯವರು ಮುಖ್ಯ ಅತಿಥಿಗಳಾಗಿ ಆಗಮಿಸಿ ದ್ವಜವಂದನೆಯನ್ನು ಸ್ವೀಕರಿಸಿ ನಂತರ ಕ್ರಿಡಾಪಟುಗಳಿಗೆ ಶುಭ ಹಾರೈಸಿದರು. ವಿದ್ಯಾಭಾರತಿ ಕರ್ನಾಟಕದ ಪ್ರಾಂತಉಪಾಧ್ಯಕ್ಷರಾದ ವಸಂತಮಾಧವ ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ ಕ್ರೀಡಾ ಪಟುಗಳು ಜಿಲ್ಲೆಯಿಂದ ರಾಜ್ಯಮಟ್ಟ ಕ್ಷೇತ್ರ,  ರಾಷ್ಟ್ರಮಟ್ಟ ಹಾಗೂ ಎಸ್‍ಜಿಎಫ್‍ಐ ಗೆ ಆಯ್ಕೆಯಾಗುವ ಅವಕಾಶವನ್ನು ವಿದ್ಯಾಭಾರತಿ ಕಲ್ಪಿಸಿಕೊಟ್ಟಿದೆ. ಈ ಕ್ರೀಡಾಕೂಟದಲ್ಲಿ ನಾವು ಪ್ರಾಮಾಣಿಕ ಮತ್ತು ಶ್ರದ್ದೆಯಿಂದ ಪಾಲ್ಗೊಳ್ಳಬೇಕೆಂದು ಹೇಳಿ ಶುಭ ಹಾರೈಸಿದರು. ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ ಸುಮಾರು 35 ಶಾಲೆಗಳ ಕ್ರೀಡಾ ಪಟುಗಳು ಆಕರ್ಷಕ ಪಥಸಂಚಲನ ನಡೆಸಿದರು. ರಾಜ್ಯಉಪಾಧ್ಯಕ್ಷರಾದ ವಸಂತಮಾಧವ ದ್ವಜಾರೋಹಣ ನಡೆಸಿದರು. ನಂತರ ದಕ್ಷಿಣಕನ್ನಡ ಜಿಲ್ಲೆಯನ್ನುಎಸ್ ಜಿ ಎಪ್ ಐ ನಲ್ಲಿ ಪ್ರತಿನಿಧಿಸಿದ ಕ್ರೀಡಾ ಪಟುಗಳು ಕ್ರೀಡಾಜ್ಯೋತಿಯನ್ನು ಕಾರ್ಯಕ್ರಮದ ಉದ್ಘಾಟಕರಿಗೆ ನೀಡಿದರು. ಕಾರ್ಯಕ್ರಮದ ಸ್ವಾಗತವನ್ನು ಜಿಲ್ಲಾ ಕಾರ್ಯದರ್ಶಿ ರಮೇಶ ಕೆ ಮಾಡಿದರು. ಜಿಲ್ಲಾ ಖೇಲ್‍ಖೂದು ಪ್ರಮುಖರಾದ ಕರುಣಾಕರ ಅವರು ನಿರೂಪಿಸಿದರು.