ಮಂಗಳೂರು, ಜು 26: ನಿನ್ನೆ ಬಲ್ಮಠದ ಒಂದು ಪಬ್‌ಗೆ ಬಜರಂಗ ದಳದವರು ನುಗ್ಗಿ ಗಲಾಟೆ ಮಾಡಿದ್ದು ಖಂಡನೀಯ. ಅವರ ವಿರುದ್ಧ ಪೋಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ ಪತ್ರಿಕಾಗೋಷ್ಠಿ ನಡೆಸಿ ಖಂಡಿಸಿದರು.

2009ರಲ್ಲಿ ಕೂಡ ಅದೇ ಸ್ಥಳದಲ್ಲಿ ಪಬ್ ದಾಳಿ ಆಗಿತ್ತು. ಆಗಲೂ ಮತ್ತು ಈಗಲೂ ಬಿಜೆಪಿ ಆಡಳಿತ ಇತ್ತು. ಅವರ ಕುಮ್ಮಕ್ಕಿನಿಂದ ಈ ದಾಳಿ ನಡೆದಿದೆಯೇ. ಇಂತಹ ದೂರ್ತ ಸಂಘಟನೆಗಳನ್ನು ಕೂಡಲೆ ನಿಷೇಧಿಸಬೇಕು ಎಂದು ಅಕ್ಷಿತ್ ಹೇಳಿದರು.

ಮಂಗಳೂರಿನಲ್ಲಿ ಇಂತಹ ಬಜರಂಗಿ ಗಲಾಟೆಯಿಂದ ಉದ್ಯಮಗಳಿಗೆ, ಶಾಲಾ ಕಾಲೇಜುಗಳಿಗೆ ತೊಂದರೆ ಆಗಿದೆ. ಇಂತಹ ಊರಿನ ಹೆಸರು ಕೆಡಿಸುವವರ ವಿರುದ್ಧ ಪಕ್ಷಾತೀತ ವಿದ್ಯಾರ್ಥಿಗಳ ಪ್ರತಿಭಟನೆ ನಡೆಸುವುದಾಗಿ ಅಕ್ಷಿತ್ ಹೇಳಿದರು.

ಇವರು ಗಲಾಟೆ ಮಾಡಲು ಬಂದದ್ದರಿಂದ ಎಲ್ಲ ಕಡೆ ಜಿಲ್ಲೆಯ ಹೆಸರು ಹಾಳಾಗುತ್ತಿದೆ. ಇವರು ವೀಡಿಯೋದವರನ್ನೂ ಕರೆದುಕೊಂಡು ಬರುವುದು ಏಕೆ, ಇಂತಹ ಅಪರಾಧಿ ಪ್ರವೃತ್ತಿಯು ಯುವ ಜನಾಂಗಕ್ಕೆ ಅವಮಾನಕರ ಎಂದು ಅವರು ಹೇಳಿದರು.

ಇವರಿಗೆ ದಾಳಿಯ ಅನೈತಿಕ ಪೋಲೀಸುಗಿರಿ ಹಕ್ಕು ನೀಡಿದವರು ಯಾರು? ಜಿಲ್ಲೆಯ ಐಟಿ, ಬಿಟಿ, ಹೋಟೆಲ್ ಇತ್ಯಾದಿ ಕ್ಷೇತ್ರ ಇವರಿಂದ ಬಾಧಿತವಾಗಿದೆ. ಜನ ನಡೆಯ ದುರುಪಯೋಗ ಅಕ್ಷಮ್ಯ. ಇಂತವರಿಂದಾಗಿ ಹೊಸ ಕಂಪನಿಗಳು ಬರಲು ಹೆದರುತ್ತಿವೆ, ಯುವಕರಿಗೆ ಕೆಲಸ ನಷ್ಟ ಎಂದು ಅಕ್ಷಿತ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಫೈಜಲ್, ಹಿತೇಶ್ ರೈ, ಸುಮಿತ್ ಸುವರ್ಣ, ಲತೀಶ್ ಮೊದಲಾದ ಜೆಡಿಎಸ್ ಯುವ ನಾಯಕರು ಉಪಸ್ಥಿತರಿದ್ದರು.