ಮಂಗಳೂರು, ಜೂನ್ 29: ಕಯ್ಯಾರ ಕಿಞ್ಞಣ್ಣ ರೈಯವರದು ಮೇರು ವ್ಯಕ್ತಿತ್ವ. ಅವರು ಏಕೀಕರಣ ಪ್ರಶಸ್ತಿ ವಿಜೇತರು. ಹಾಗಿರುವಾಗ ಅವರ ಹೆಸರು ತೆಗೆಯುವ ಅಗತ್ಯ ಏನಿತ್ತು? ಅಲ್ಲದೆ ಎ. ಬಿ. ಸರ್ಕಲ್ ಹೆಸರನ್ನು ಬದಲಿಸುತ್ತಿರುವುದಾಗಿ ತಿಳಿದು ಬಂದಿದೆ. ಇದು ಕೂಡ ಅಕ್ಷಮ್ಯ. ಒಂದು ಎಚ್ಚರಿಕೆಯನ್ನು ಈ ಮೂಲಕ ನೀಡುವುದಾಗಿ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷರಾದ ಮಾಲಾಡಿ ಅಜಿತ್ ಕುಮಾರ್ ರೈ ಅವರು ಹೇಳಿದರು.

ಕಯ್ಯಾರ ಕಿಞ್ಞಣ್ಣ ರೈ ಅವರಿಗೆ ಯಾವ ಪ್ರಶಸ್ತಿ ಹೊಸದಾಗಿ ಬರಬೇಕಾಗಿಲ್ಲ. ಆದರೆ ಅವರು ಹೆಸರನ್ನು ಪಠ್ಯದಲಿ ತೆಗೆದಿರುವುದು ನಮ್ಮ ಸಮಾಜಕ್ಕೆ ಮಾಡಿದ ಅವಮಾನವಾಗಿದೆ ಎಂದು ಮಾಲಾಡಿ ಅವರು  ಹೇಳಿದರು.

ಎ. ಬಿ. ಶೆಟ್ಟಿಯವರು ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿದವರು. ರಾಜಕೀಯದಲ್ಲಿ ಬಹಳಷ್ಟು ಸಾಧನೆ ಮಾಡಿದವರು. ಮಂತ್ರಿಯಾಗಿ ಸೇವೆ ಸಲ್ಲಿಸಿದವರು. ಬಂಟರ ಸಂಘದ ಸ್ಥಾಪನೆಯಲ್ಲೂ ಅವರ ಪಾತ್ರವಿದೆ. ಆ ಸುಂದರ ವೃತ್ತದ ಹೆಸರು ಬದಲಿಸುವುದು ಅವೈಜ್ಞಾನಿಕ ಹಾಗೂ ದುರುದ್ದೇಶದ್ದಾಗಿದೆ. ಬಿಲ್ಲವರಿಗೆ ಸಿಟ್ಟು ಬರುವಂತೆ ಮಾಡಿದ್ದಾರೆ. ಅವರು ನಾವು ಬೀದಿಗಿಳಿದು ಹೋರಾಡುವ ಸ್ಥಿತಿ ತಾರದಿರಲಿ ಎಂದು ಅಜಿತ್ ಕುಮಾರ್ ರೈ ಹೇಳಿದರು.

ನನ್ನ ಒಂದು ಲೇಔಟ್ ಹೆಸರು ಮಂಜೇಶ್ವರ ಗೋವಿಂದ ಪೈ ಹೆಸರು ಇಟ್ಟಿದ್ದೇನೆ. ನಾನು ಕಣ್ಣೂರಿನ ನಾರಾಯಣ ಗುರುಗಳು ಕಟ್ಟಿದ ದೇವಾಲಯದಲ್ಲಿ ಗುರುಗಳ ಪಾದ ಪೂಜೆಗೆ ಹೋಗುವವನು. ನಾನು ಜಾತಿಗಾಗಿ ಹೇಳುತ್ತಿಲ್ಲ.

ಎ. ಬಿ. ಶೆಟ್ಟಿ, ಕಯ್ಯಾರರಿಗೆ ಆದ ಅನ್ಯಾಯಕ್ಕೆ ಇದು ಪ್ರತಿಭಟನೆ. ಈಗ ತಿದ್ದೋಲೆ ಎಂಬಲ್ಲೂ ಕಯ್ಯಾರರ ಹೆಸರು ಕಾಣಿಸುತ್ತಿಲ್ಲ. ಹಾಲಿ ಸರಿಯಾಗಿ ಇರುವುದನ್ನು ಯಾರೋ ಒಬ್ಬ ತಿರುಚಿ ಕರ್ನಾಟಕದ ಇಷ್ಟೆಲ್ಲ ಜಾತಿ ಜನಾಂಗಗಳವರು ಭಾವಾವೇಶಕ್ಕೆ ಒಳಗಾಗುವಂತೆ ಮಾಡಲು ಅವಕಾಶ ನೀಡಿದ್ದೇಕೆ? ಇದರಲ್ಲಿ ರಾಜಕೀಯ ಮಾಡುವವರು ಉಪ್ಪು ತಿಂದವ ನೀರು ಕುಡಿಯುತ್ತಾನೆ ಎಂಬಂತಾದರೆ ಅದು ನನಗೆ ಸಂಬಂಧಿಸಿದ ವಿಚಾರವಲ್ಲ ಎಂದು ಮಾಲಾಡಿ ಅಜಿತ್ ಕುಮಾರ್ ರೈ ಹೇಳಿದರು.

ಸ್ಮಾರ್ಟ್ ಸಿಟಿ ಹೆಸರಿನಲ್ಲಿ ಬಿಲ್ ಮಾಡಲು ವೃತ್ತದ ಹೆಸರು ಬದಲಿಸಬೇಕೆ? ಕಂಡಲ್ಲಿ ಒಡೆದು  ಅಧ್ವಾನ ಮಾಡಬೇಕೆ ಎಂದೂ ಅವರು ತಿಳಿಸಿದರು.

ಕಯ್ಯಾರ ಕಿಞ್ಞಣ್ಣರ ಸುಪುತ್ರರಾದ ಡಾ. ಪ್ರಸಾದ್ ರೈ ಅವರು ಮಾತನಾಡಿ ಕಯ್ಯಾರರ ವ್ಯಕ್ತಿತ್ವವು ಸಂಶೋಧಕರಾಗಿ, ಸಾಹಿತಿಯಾಗಿ, ಹೋರಾಟಗಾರರಾಗಿ ಚಿರಪರಿಚಿತ. ಈಗಿನ ಘಟನೆಯು ಇಡೀ ಕಾಸರಗೋಡು ಪ್ರದೇಶಕ್ಕೆ ಮಾಡಿದ ಅವಮಾನ ಆಗಿದೆ ಎಂದು ಹೇಳಿದರು.

ಎ. ಬಿ. ಶೆಟ್ಟಿಯವರ ನಾಲ್ಕನೆ ತಲೆಮಾರಿನ ಲಕ್ಷ್ಮೀ ಎಸ್. ಶೆಟ್ಟಿಯವರು ಮಾತನಾಡಿ ನಮ್ಮ ಮುತ್ತಾತ ಇಡೀ ರಾಜ್ಯದಲ್ಲಿ ಹಾಗೂ ದೇಶ ಮಟ್ಟದಲ್ಲಿಯೂ ಸೇವೆ ಸಲ್ಲಿಸಿದವರು. ಅವರ ವೃತ್ತ ತೆಗೆಯುವುದು ನಮಗೆಲ್ಲ ನಮಗೆ ನೋವು ತಂದಿದೆ ಎಂದರು. 

ಪತ್ರಿಕಾಗೋಷ್ಠಿಯಲ್ಲಿ ಟ್ರೆಶರರ್ ಕೃಷ್ಣ ಪ್ರಸಾದ ರೈ, ವಸಂತ ಶೆಟ್ಟಿ, ರವೀಂದ್ರನಾಥ ಶೆಟ್ಟಿ, ಸಿದ್ಧಾರ್ಥ ಮೊದಲಾದವರು ಉಪಸ್ಥಿತರಿದ್ದರು.