ಮೂಡುಬಿದಿರೆ ಕೋ ಆಪರೇಟಿವ್ ಸರ್ವಿಸ್ ಸೊಸೈಟಿಯ ಸಹಕಾರ ಸಪ್ತಾಹ ಸಂಭ್ರಮ 2024 ಹಾಗೂ ಕಲ್ಪವೃಕ್ಷ ಪ್ರಶಸ್ತಿ ಪ್ರಧಾನ ಸಮಾರಂಭ ನವೆಂಬರ್ 14ರಂದು ಸೊಸೈಟಿಯ ಕಲ್ಪವೃಕ್ಷ ಸಭಾಭವನದಲ್ಲಿ ಪ್ರಾರಂಭವಾಗಲಿದೆ. ಪ್ರತಿಷ್ಠಿತ ಜನರ ಪರಸ್ಪರ ಸಹಕಾರದೊಂದಿಗೆ ಮುನ್ನಡೆಯುತ್ತಿರುವ ಎಂಸಿಎಸ್ ಸೊಸೈಟಿಯು ಈ ಬಾರಿಯ ಸಹಕಾರ ಕಲ್ಪವೃಕ್ಷ ಪ್ರಶಸ್ತಿಯನ್ನು 53 ವರ್ಷದಿಂದ ನಿರ್ದೇಶಕರಾಗಿ, ಅಧ್ಯಕ್ಷರಾಗಿ, ಟಿಎಪಿಎಂಎಸ್, ಎಪಿಎಂಸಿ, ಇತ್ಯಾದಿಗಳ ನಿರ್ದೇಶಕರಾಗಿದ್ದ ಎಂ ಗಣೇಶ್ ನಾಯಕ್ ಅವರಿಗೆ ನೀಡಲು ನಿರ್ಧರಿಸಿದೆ. ಈ ಪ್ರಶಸ್ತಿಯು 10 ಗ್ರಾಂ ಚಿನ್ನದ ಪದಕ, 25,000 ನಗದು ಹಾಗೂ ಬೆಳ್ಳಿಯ ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ. ರಾಜ್ಯಮಟ್ಟದ ಪ್ರಶಸ್ತಿಗಿಂತಲೂ ಮಿಗಿಲಾದ ಗೌರವದೊಂದಿಗೆ ಸನ್ಮಾನ ನಡೆಯುತ್ತದೆ. ಸುತ್ತಮುತ್ತಲಿನ ನಾಲ್ಕು ದೇವಸ್ಥಾನಗಳಿಗೂ ಆರ್ಥಿಕ ನೆರವನ್ನು ಒದಗಿಸಲಾಗುವುದು. 

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ಸಚಿವ ಎಂ. ವೀರಪ್ಪ ಮೊಯ್ಲಿ ಉದ್ಘಾಟಿಸಲಿದ್ದಾರೆ.

ನೂರಾರು ಜನರಿಗೆ ಬದುಕಿನ ಮಾರ್ಗಸೂಚಿಯಾದ, ಹಲವಾರು ಜನರ ಜೀವನದ ಮಾರ್ಗದರ್ಶಕರಾದ ನಿಶ್ಮಿತಾ ಸಮೂಹ ಸಂಸ್ಥೆಯ ಮಾಲಕ ನಾರಾಯಣ ಪಿ ಎಂ ರವರಿಗೆ ಸಮಗ್ರ ಸಾಧಕ ಪ್ರಶಸ್ತಿಯನ್ನು ನವೆಂಬರ್ 15ರಂದು ನೀಡಲಾಗುತ್ತದೆ. ಮೂಡುಬಿದಿರೆ ಶಾಸಕರು ವಿವಿಧ ಯೋಜನೆಗಳ ಉದ್ಘಾಟನೆಯನ್ನು ಅಂದು ನೆರವೇರಿಸಲಿದ್ದಾರೆ. ಹಾಗೆಯೇ 10 ವಿವಿಧ ಸಂಘ-ಸಂಸ್ಥೆಗಳಿಗೆ ಆರ್ಥಿಕ ನೆರವನ್ನು ನೀಡುವ ಕಾರ್ಯಕ್ರಮವೂ ನಡೆಯಲಿದೆ. 

ನವೆಂಬರ್ 16 ರಂದು ಸಹಕಾರ ಮತ್ತು ಸಂಸ್ಕೃತಿ ಕಾರ್ಯಕ್ರಮದಲ್ಲಿ ಈ ವ್ಯಾಪ್ತಿಯ 30 ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಿಗೆ ಆರ್ಥಿಕ ನೆರವು ನೀಡಿ, ವಿವಿಧ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸಿದ 20 ಗಣ್ಯರಿಗೆ ಅಭಿನಂದನೆ ಸಲ್ಲಿಸಲಾಗುವುದು.

ನವೆಂಬರ್ 17 ರಂದು ಕೃಷಿ -ಋಷಿ ರೈತ ಸಮಾಲೋಚನೆ ಕಾರ್ಯಕ್ರಮದ ಸಂದರ್ಭ ವಿವಿಧ ಕಾಲೇಜುಗಳಿಗೆ ಆರ್ಥಿಕ ನೆರವು ನೀಡಲಾಗುವುದು. 

ನವೆಂಬರ್ 18 ರಂದು ಸಹಕಾರ ಮತ್ತು ಕಾನೂನು ಕಾರ್ಯಕ್ರಮದಲ್ಲಿ ರಾಂಕ್ ವಿಜೇತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ನವೆಂಬರ್ 19ರಂದು ಸಹಕಾರ ಮತ್ತು ಜೀವನ ಪದ್ಧತಿ ಕಾರ್ಯಕ್ರಮದಲ್ಲಿ ಹಿರಿಯ ಸಕ್ರಿಯ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. 

ನವೆಂಬರ್ 20 ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಹಿರಿಯ ಸಕ್ರಿಯ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ ಮುಂದುವರಿಯಲಿದೆ. 

ಇದೇ ಸಂದರ್ಭದಲ್ಲಿ ನವೆಂಬರ್ 17 ರಂದು ಉಚಿತ ವೈದ್ಯಕೀಯ ತಪಾಸಣೆ ಕಾರ್ಯಕ್ರಮ ಸಭಾಭವನದಲ್ಲಿ ನಡೆಯಲಿದ್ದು ಹೃದಯ ತಪಾಸಣೆ, ಮಧುಮೇಹದ ರಕ್ತಪರೀಕ್ಷೆ, ಕಿವಿ ಮೂಗು ಗಂಟಲು ತಪಾಸಣೆ ನಡೆಯಲಿದೆ. 

108 ವರ್ಷದ ಇತಿಹಾಸ ಹೊಂದಿರುವ ಮೂಡುಬಿದಿರೆ ಕೋಪರೇಟಿವ್ ಸರ್ವಿಸ್ ಸೊಸೈಟಿಯು ಕಳೆದ 15 ವರ್ಷದಿಂದ ನಿರಂತರವಾಗಿ ಸಹಕಾರಿ ಚಿಂತನ ಸರಣಿ ಮತ್ತು ಸಾಂಸ್ಕೃತಿಕ ವೈಭವವನ್ನು ನಡೆಸಿಕೊಂಡು ಬರುತ್ತಿದೆ. ಪ್ರಸ್ತುತ ಎರಡು ಕೋಟಿ ಸದಸ್ಯರ ನಿಧಿಯಿಂದ 1,000 ರೂ. ಕಟ್ಟಿದ ಯಶಸ್ವಿನಿಗೆ ಪೂರಕವಾದ ಕಲ್ಪವೃಕ್ಷ ಆರೋಗ್ಯ ಕಾರ್ಡಿನ ಮೂಲಕ ಪ್ರತಿ ವರ್ಷ 25 ಫಲಾನುಭವಿಗಳಿಗೆ ಸುಮಾರು ಎರಡು ಲಕ್ಷದ ತನಕ ಆರ್ಥಿಕ ನೆರವನ್ನು ಆರೋಗ್ಯ ವಿಮೆಯ ರೀತಿಯಲ್ಲಿ ನೀಡಲಾಗುತ್ತಿದೆ. ಈ ನಿಧಿಯನ್ನು 5 ಕೋಟಿಗೆ ಹೆಚ್ಚಿಸಿ ಯಾರ ಸಹಾಯವೂ ಇಲ್ಲದೆ ಪ್ರತಿಯೊಬ್ಬರಿಗೂ ಆರೋಗ್ಯ ವಿಮೆಯ ಸೌಲಭ್ಯ ನೀಡುವ ಆಲೋಚನೆ ಇದೆ ಎಂದು ಎಂ ಸಿ ಎಸ್ ಸೊಸೈಟಿಯ ವಿಶೇಷ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಎಂ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸೊಸೈಟಿಯ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್, ಉಪಾಧ್ಯಕ್ಷ ಎಂ ಗಣೇಶ್ ನಾಯಕ್, ನಿರ್ದೇಶಕರುಗಳಾದ ಕೆ ಅಭಯಚಂದ್ರ ಜೈನ್, ಎಂ ಜಾರ್ಜ್ ಮೋನಿಸ್, ಮನೋಜ್ ಕುಮಾರ್ ಶೆಟ್ಟಿ, ಎಮ್ ಪದ್ಮನಾಭ, ಸಿಎಚ್ ಅಬ್ದುಲ್ ಗಪೂರ್, ಜಯರಾಮ್ ಕೋಟ್ಯಾನ್, ಎಂಪಿ ಅಶೋಕ್ ಕಾಮತ್, ಎಂ ಜ್ಞಾನೇಶ್ವರ ಕಾಳಿಂಗ ಪೈ, ದಯಾನಂದ ನಾಯ್ಕ್, ಪ್ರೇಮ ಎಸ್. ಸಾಲಿಯಾನ್, ಅನಿತಾ ಶೆಟ್ಟಿ, ಹಾಜರಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ ರಘುವೀರ್ ಕಾಮತ್ ವಂದಿಸಿದರು.