✍️ಗೀತಾ ಲಕ್ಷ್ಮೀಶ್
ಅತಿಯಾದರೆ ಅಮೃತವು ವಿಷವಾಗುವುದೆಂದು ಹಿರಿಯರು ಹೇಳುತ್ತಲೇ ಬಂದಿದ್ದಾರೆ. ನಿನ್ನೆ ಬೆಂಗಳೂರಿನಲ್ಲಿ ನಡೆದ ದಾರುಣ ಘಟನೆ ಹೃದಯ ವಿದ್ರಾವಕ. ಅತಿರೇಕದ ಅಭಿಮಾನ ಹನ್ನೊಂದು ಯುವಕ, ಯುವತಿಯರನ್ನು ಸಾವಿನ ಮನೆಗೆ ದೂಡಿತ್ತೆಂದರೆ ನಂಬಲು ಸಾಧ್ಯವೇ ಆಗುತ್ತಿಲ್ಲ. ಈ ಘಟನೆಯಲ್ಲಿ ತಪ್ಪಿತಸ್ಥರು ಅನೇಕರಿರಬಹುದು ಆದರೆ ಇಂತಹ ಒಂದು ಹುಚ್ಚು ಅಭಿಮಾನ ಅವಶ್ಯಕವೇ ಎನ್ನುವ ಪ್ರಶ್ನೆ.
ನಮ್ಮ ದೇಶದಲ್ಲಿ ಕ್ರಿಕೆಟಿಗರನ್ನು ಮತ್ತು ಸಿನಿಮಾ ನಾಯಕ ನಾಯಕಿಯನ್ನು ಹುಚ್ಚರಂತೆ ಪ್ರೀತಿಸುವ ಅನೇಕ ಮಂದಿಯನ್ನು ನಾವು ಕಾಣಬಹುದು. ಅಭಿಮಾನದ ಪರಾಕಾಷ್ಠೆಯಲ್ಲಿ ಅವ ಕೊಲೆ ಮಾಡಿದರು ಏನೂ ಮಾಡಿಲ್ಲ ಅನ್ನುವಂತೆ ಒಪ್ಪಿ ಅಪ್ಪುವವರನ್ನು ನಾವು ಕಾಣುತ್ತೇವೆ. ಅವರಿಗಾಗಿ ಏನನ್ನು ಮಾಡಲು ಹೇಸದ ಹುಚ್ಚರನ್ನು ಕಾಣುತ್ತೇವೆ. ತನ್ನ ತಂದೆ ತಾಯಿಗಾಗಿ ಒಂದು ದಿನವೂ ಹರಕೆ ಹೊತ್ತುಕೊಳ್ಳದ ಮಕ್ಕಳು ತನ್ನ ನೆಚ್ಚಿನ ತಂಡ ವಿಜಯಿಯಾಗಳೆಂದು ಹರಕೆ ಹೊತ್ತು ಕೊಳ್ಳುತ್ತಾರೆ. ಅವರ ಪೋಸ್ಟರ್ಗ್ ಆರತಿ ಬೆಳಗಿ, ಹಾಲು ಹೂವಿನ ಅಭಿಷೇಕ ಮಾಡುತ್ತಾರೆ. ಇದೊಂದು ಅಭಿಮಾನವೇ...? ಇದು ಹುಚ್ಚು ಅದೂ ಅರ್ಥವಿಲ್ಲದ ಹುಚ್ಚು. ಇಂತಹ ಒಂದು ಪ್ರಚಂಡ ಅಭಿಮಾನ ದೇಶದ ಮೇಲಿದ್ದರೆ ಅದೆಷ್ಟು ಸುಂದರವಾಗಿರುತಿತ್ತು. ದೇಶಕ್ಕಾಗಿ ಮಡಿದಿದ್ದರೆ ಬಲಿದಾನ ಅನಿಸಿಕೊಳ್ಳುತ್ತಿತ್ತು ಅವರು ಹುತಾತ್ಮರೆನಿಸಿಕೊಳ್ಳುತ್ತಿದ್ದರು. ಆದರೆ ಇಂತಹ ಸಾವು ನ್ಯಾಯವೇ....? ಇನ್ನೂ ಬಾಳಿ ಬದುಕಬೇಕಾಗಿದ್ದ ಎಳೆಯ ಜೀವಗಳು, ಅದೆಷ್ಟು ಕನಸುಗಳನ್ನು ಕಟ್ಟಿಕೊಂಡಿದ್ದರೋ...ಅರೆ ಕ್ಷಣದಲ್ಲಿ ಎಲ್ಲವೂ ಕೊನೆಯಾಯಿತು.
ಪ್ರತಿ ಪಂದ್ಯಗಳಲ್ಲಿ ತುಂಬಿ ತುಳುಕುವ ಸ್ಟೇಡಿಯಂ, ಅದು ಕೂಡ ಹಣ ಪಾವತಿ ಬರುವವರು ತನ್ನ ನೆಚ್ಚಿನ ಆಟಗಾರ ಅಥವಾ ತಂಡದ ಮೇಲಿನ ಅಭಿಮಾನಕ್ಕಾಗಿ ..ಇನ್ನೂ ಉಚಿತವಾಗಿ ಹತ್ತಿರದಲ್ಲಿ ನೋಡಲು ಸಿಗುತ್ತಾರೆ ಎಂದರೆ ಬಿಡುತ್ತಾರೆಯೇ...? ಮೊದಲೇ ಕರ್ನಾಟಕದ ಜನತೆಗೆ ಉಚಿತ ಭಾಗ್ಯದ ಚಟ ಹಿಡಿದಿದೆ. ನಮ್ಮ ಇಂದಿನ ಯೋಚನೆಗಳು ಕೆಲವು ಸಲ ಆಶ್ಚರ್ಯ ತರುತ್ತದೆ ಇದೇ ಯುವಜನತೆ ಜಾತ್ರೆ ಸಮಯದಲ್ಲಿ ದೇವಸ್ಥಾನಕ್ಕೆ ಬಾ ಎಂದು ಕರೆದರೆ "ಹೋಗಮ್ಮ ನೀನು.. ಅಲ್ಲಿ ತುಂಬಾ ರಷ್, ಯಾರು ಬರ್ತಾರೆ" ಎಂದು ಪ್ರಶ್ನಿಸುತ್ತಾರೆ ಅದೇ ಕ್ರಿಕೆಟಿಗರಿಗಾಗಿ, ಸಿನಿಮಾ ತಾರೆಗಳಿಗಾಗಿ ತಾಮುಂದು ನಾಮುಂದು ಅಂತ ದುಂಬಾಲು ಬೀಳುತ್ತಾರೆ. ಅವರಲ್ಲಿ ಅದೆಂತಹ ಜಾದೂ ಇದೆ ನಾಕಾಣೆ...
ಈ ಹುಚ್ಚು ಅಭಿಮಾನವೇ ಕೆಲವು ಜಾಹಿರಾತು ಕಂಪೆನಿಗಳಿಗೆ ಬಹುಮಾನ. ಈ ಸೆಲೆಬ್ರಿಟಿಗಳನ್ನು ಇಟ್ಟುಕೊಂಡು ಗುಟ್ಕಾ, ಸಾರಾಯಿ ಮಾರಾಟ ಮಾಡುತ್ತಾರೆ, ಮೊಬೈಲ್ ಗೇಮ್ ಆಡಿಸ್ತಾರೆ ಯುವ ಜನರನ್ನು ದಾರಿ ತಪ್ಪಿಸುವ ಎಲ್ಲಾ ಕೆಲಸವನ್ನು ಜಾಹೀರಾತಿನ ಹೆಸರಲ್ಲಿ ಅಚ್ಚುಕಟ್ಟಾಗಿ ಮಾಡುತ್ತಾರೆ. ಹಣಕ್ಕಾಗಿ ಮೂರೂ ಬಿಟ್ಟ ಸೆಲೆಬ್ರಿಟಿಗಳು ಖುಷಿ ಖುಷಿಯಾಗಿ ನಟಿಸಿ ಕಂತೆ ಕಂತೆ ಹಣವನ್ನು ಗಳಿಸುತ್ತಾರೆ. ಇವರನ್ನು ನೋಡಿ ಅನುಕರಿಸಿದವ ಕ್ಯಾನ್ಸರ್ ಪೀಡಿತನಾಗುತ್ತಾನೆ, ಸಾಲ ಬಾಧೆಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ನಷ್ಟ ಯಾರಿಗೆ...? ಆ ಮಕ್ಕಳನ್ನು ಹೆತ್ತು, ಹೊತ್ತು, ವಿದ್ಯಾಭ್ಯಾಸ ಕೊಟ್ಟು ಉನ್ನತ ಮಟ್ಟಕ್ಕೆ ಏರಿಸಲು ಪ್ರಯತ್ನ ಪಡುವ ಹೆತ್ತವರಿಗೆ. ನಾವೆಂದೂ ಯೋಚಿಸುವ ಗೋಜಿಗೆ ಹೋಗುವುದಿಲ್ಲ ಇಷ್ಟೊಂದು ಅಭಿಮಾನ ಬೇರೆಯವರಿಗೆ ತೋರಿಸುವುದರ ಬದಲು ನಮಗೆ ನಾವೇ ಅಭಿಮಾನಿಯಾಗಿರುತ್ತಿದ್ದರೆ ನಾವೆಷ್ಟು ಚೆನ್ನಾಗಿ ನಮ್ಮ ವ್ಯಕ್ತಿತ್ವವನ್ನು ರೂಪಿಸಕೊಳ್ಳಬಹುದಿತ್ತು. ಇನ್ನೊಬ್ಬರ ಮೇಲೆ ಪ್ರೀತಿ ಅಭಿಮಾನ ಎಲ್ಲವೂ ಸರಿಯೇ ಆದರೆ ಅದು ನಮ್ಮ ಜೀವ ,ಜೀವನಕ್ಕಿಂತ ಮೇಲಾಗದೆ ಮಿತಿಯಲ್ಲಿದ್ದರೆ ಚೆಂದ.
ದೇಶದ ಅತೀ ದೊಡ್ಡ ಸಂಪತ್ತು ಎಂದರೆ ಅದು ನಮ್ಮ ಯುವಶಕ್ತಿ ಆದರೆ ವಾಸ್ತವದಲ್ಲಿ ಆ ಸಂಪತ್ತು ದುರ್ಬಲವಾಗುತ್ತಿದೆ, ನೈತಿಕವಾಗಿ ಕುಗ್ಗುತ್ತಿದೆ. ಯುವ ಜನತೆ ಮಾದಕ ವಸ್ತುಗಳ ವ್ಯಸನದಲ್ಲಿ ತೂರಾಡುತ್ತಿದ್ದಾರೆ. ಒತ್ತಡ ಸಹಿಸಿಕೊಳ್ಳಲಾಗದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಧರ್ಮದ ಹೆಸರಿನಲ್ಲಿ ರಕ್ತಪಾತದಲ್ಲಿ ಮುಳುಗಿದ್ದಾರೆ, ಹಣದ ಮತ್ತಿನಲ್ಲಿ ತೇಲುತ್ತಿದ್ದಾರೆ. ನಮ್ಮ ಯುವ ಜನತೆ ದಾರಿ ತಪ್ಪುತ್ತಿದ್ದಾರೆ. ಇದರ ಒಟ್ಟಿಗೆ ಇಂತಹ ಮನಕಲುಕುವ ಸನ್ನಿವೇಶಗಳು. ಜನತೆ ಎಚ್ಚೆತ್ತುಕೊಳ್ಳಬೇಕು, ಇಂತಹ ಹುಚ್ಚುತನ ಎಂದಿಗೂ ಸಲ್ಲದು.