ಮಾ. 1 ರಂದು ಬೆಳ್ಮಣ್ ಸರ್ಕಾರಿ ಪದವಿ ಪೂರ್ವ ಕಾಲೇಜು ವತಿಯಿಂದ ‘ಸ್ನೇಹ ಸೇತು’ ಸಮಾರಂಭ

ಕಾರ್ಕಳ: ಬೆಳ್ಮಣ್ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಕಾಲೇಜು ಹಾಗೂ ಪ್ರೌಢಶಾಲಾ ವಿಭಾಗದ ಹಳೆ ವಿದ್ಯಾರ್ಥಿಗಳ ಸಮಾವೇಶ ‘ಸ್ನೇಹ ಸೇತು’ ಕಾರ್ಯಕ್ರಮ ಮಾರ್ಚ್ 1 ರ ಭಾನುವಾರ ಕಾಲೇಜು ಮೈದಾನದಲ್ಲಿ ಜರುಗಲಿದೆ ಎಂದು ಹಳೆ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಸರ್ವಜ್ಞ ತಂತ್ರಿ ತಿಳಿಸಿದ್ದಾರೆ.

ಕಾರ್ಕಳ ಪತ್ರಿಕಾ ಭವನದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಿಗ್ಗೆ 9 ಗಂಟೆಗೆ ಬೆಳ್ಮಣ್ ವ್ಯವಸಾಯ ಸೇವಾ ಸಹಕಾರಿ ಸಂಘದ ಸಭಾಂಗಣದಿಂದ ಕಾಲೇಜು ಮೈದಾನದವರೆಗೆ ವೈಭವದ ಮೆರವಣಿಗೆ ನಡೆಯಲಿದೆ. ನಂತರ ಸಮಾರಂಭದ ಉದ್ಘಾಟನೆ ನೆರವೇರಲಿದ್ದು, ಅಧ್ಯಕ್ಷತೆಯನ್ನು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಹಾಸ್ ಹೆಗ್ಡೆ ವಹಿಸಲಿದ್ದಾರೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಹಿರಿಯ ಹಳೆ ವಿದ್ಯಾರ್ಥಿಗಳಾದ ನಿವೃತ್ತ ಉಪನ್ಯಾಸಕ ಪ್ರೊ. ಡಾ. ಜಯರಾಮ ಹೆಗ್ಡೆ, ಮುಂಬೈನ ಉದ್ಯಮಿ ರತ್ನಕರ ಶೆಟ್ಟಿ ಕಾಪಿಕೆರೆ, ಬೆಳ್ಮಣ್ ಸಂತ ಜೋಸೆಫರ ಚರ್ಚಿನ ಧರ್ಮಗುರು ರೆ. ಫಾ. ಫ್ರೆಡ್ರಿಕ್ ಮಸ್ಕರೇನಸ್, ಹಿರಿಯ ವೈದ್ಯ ಡಾ. ದೇವದಾಸ್ ಕಾಮತ್, ರಾಮಚಂದ್ರ ಆಚಾರ್ಯ ಮೂಡಬಿದಿರೆ, ಶಂಭು ಶೆಟ್ಟಿ ಕಾರವಾರ, ವಾಲ್ಟರ್ ನಂದಳಿಕೆ, ರಘುಪತಿ ರಾವ್ ಹಾಗೂ ಸದಾನಂದ ಎಲ್. ಶೆಟ್ಟಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.

ಈ ಸಂದರ್ಭದಲ್ಲಿ ಹಿರಿಯ ನಿವೃತ್ತ ಉಪನ್ಯಾಸಕರಾದ ಜಯಂತ್ ರಾವ್ ಪಿಲಾರ್ ಹಾಗೂ ನಿಲಯ ಆಚಾರ್ ಅವರಿಗೆ ಗುರುವಂದನೆ ಸಲ್ಲಿಸಲಾಗುತ್ತದೆ. ಬಳಿಕ ಹಳೆ ವಿದ್ಯಾರ್ಥಿಗಳಿಂದ ‘ಚಾವಡಿ ಚರ್ಚೆ’, ಮಹಿಳಾ ಹಳೆ ವಿದ್ಯಾರ್ಥಿಗಳಿಂದ ‘ನೆನಪಿನ ಅಂಗಳ’ ಕಾರ್ಯಕ್ರಮ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಉಡುಪಿಯ ಭಾರ್ಗವಿ ನೃತ್ಯ ಕಲಾ ತಂಡದಿಂದ ನೃತ್ಯ ವೈವಿಧ್ಯ, ‘ಸುಂದರ ಬಂಗಾಡಿ’ ಮತ್ತು ತಂಡದವರಿಂದ ‘ಕುಸೇಲ್ದ ಕೂಟ’ ಪ್ರದರ್ಶನ ಜರುಗಲಿದೆ. ಸಂಜೆ 5 ಗಂಟೆಯಿಂದ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಹಳೆ ವಿದ್ಯಾರ್ಥಿ ಸಂಘದ ಸದಸ್ಯ ಅಲ್ವಿನ್ ನೇರಿ ಪಿಂಟೋ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *