ಪುುತ್ತೂರು: ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ) ದರ್ಬೆ ಪುತ್ತೂರು ಇದರ ಗ್ರಾಹಕ ವೇದಿಕೆ ವತಿಯಿಂದ ವಿಸ್ತರಣಾ ಚಟುವಟಿಕೆಯ ಭಾಗವಾಗಿ ಮಾರ್ಚ್ 5ರಂದು ದ.ಕ.ಜ.ಪ. ಸರ್ಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ, ಸವಣೂರು ಹಾಗೂ ಮಾರ್ಚ್ 6ರಂದು ಸ.ಹಿ.ಪ್ರಾ ಶಾಲೆ, ಸಜಂಕಾಡಿ ಇಲ್ಲಿ ಗ್ರಾಹಕ ಜಾಗೃತಿ ಕಾರ್ಯಾಗಾರ ಮತ್ತು ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಈ ಕಾರ್ಯಕ್ರಮದ ಮುಖ್ಯ ಉದ್ದೇಶವು ಶಾಲಾ ಮಕ್ಕಳಿಗೆ ಗ್ರಾಹಕರ ಮೂಲಭೂತ ಹಕ್ಕುಗಳು, ಜವಾಬ್ದಾರಿಯುತ ಖರೀದಿ ಪದ್ಧತಿ ಹಾಗೂ ವಸ್ತುಗಳನ್ನು ಖರೀದಿಸುವಾಗ ಜಾಗರೂಕರಾಗಿರಬೇಕಾದ ಅಗತ್ಯದ ಬಗ್ಗೆ ಅರಿವು ಮೂಡಿಸುವುದಾಗಿತ್ತು.


ಕಾರ್ಯಕ್ರಮದ ಸಂದರ್ಭದಲ್ಲಿ ಗ್ರಾಹಕ ವೇದಿಕೆಯ ಸದಸ್ಯರಾದ ಕಾಲೇಜು ವಿದ್ಯಾರ್ಥಿಗಳು ಶಾಲಾ ಮಕ್ಕಳೊಂದಿಗೆ ಸಂವಾದ ನಡೆಸಿ ವಿವಿಧ ಜಾಗೃತಿ ಚಟುವಟಿಕೆಗಳನ್ನು ನಡೆಸಿ, ಗ್ರಾಹಕ ಜಾಗೃತಿಗೆ ಸಂಬಂಧಿಸಿದ ಸರಳ ವಿಷಯಗಳನ್ನು ಮಕ್ಕಳಿಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ವಿವರಿಸಿ, ಜೊತೆಗೆ ವಿವಿಧ ಉತ್ಪನ್ನಗಳನ್ನು ಪ್ರದರ್ಶಿಸಿ, ವಸ್ತುಗಳನ್ನು ಖರೀದಿಸುವಾಗ ಅದರ ಬೆಲೆ, ಉತ್ಪಾದನಾ ದಿನಾಂಕ, ಅವಧಿ ಮುಗಿಯುವ ದಿನಾಂಕ, ಗುಣಮಟ್ಟದ ಗುರುತುಗಳು ಹಾಗೂ ಸರಿಯಾದ ಲೇಬಲ್ ಮಾಹಿತಿಗಳನ್ನು ಹೇಗೆ ಪರಿಶೀಲಿಸಬೇಕು ಎಂಬುದನ್ನು ತಿಳಿಸಿದರು.
ಕಾರ್ಯಕ್ರಮವನ್ನು ಹೆಚ್ಚು ಆಸಕ್ತಿದಾಯಕವಾಗಿಸಲು ವಿದ್ಯಾರ್ಥಿಗಳು ಸ್ಕಿಟ್ಗಳು, ಉತ್ಪನ್ನ ಪ್ರದರ್ಶನಗಳು ಹಾಗೂ ಸಂವಾದಾತ್ಮಕ ಚಟುವಟಿಕೆಗಳನ್ನು ನಡೆಸಿ ಸಾಮಾನ್ಯ ಗ್ರಾಹಕ ಸಮಸ್ಯೆಗಳು ಮತ್ತು ತಿಳಿದ ಗ್ರಾಹಕರಾಗಿರುವ ಮಹತ್ವವನ್ನು ವಿವರಿಸಿದರು. ಇದರಿಂದ ಶಾಲಾ ಮಕ್ಕಳು ತಮ್ಮ ದೈನಂದಿನ ಜೀವನದಲ್ಲಿ ಗ್ರಾಹಕ ಜಾಗೃತಿಯ ಅಗತ್ಯವನ್ನು ತಿಳಿದುಕೊಳ್ಳಲು ಸಹಾಯವಾಯಿತು.
ಈ ಕಾರ್ಯಕ್ರಮವನ್ನು ಪ್ರವೀಣ್ ಡಿ ಮತ್ತು ಶ್ರೀಮತಿ ಸ್ವಾತಿ ಶೆಟ್ಟಿ, ಸಂಯೋಜಕರು, ಗ್ರಾಹಕ ವೇದಿಕೆ, ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ) ದರ್ಬೆ ಪುತ್ತೂರು, ಇವರ ಸಂಯೋಜನೆಯಲ್ಲಿ ಯಶಸ್ವಿಯಾಗಿ ನಡೆಸಲಾಯಿತು.
