ಮಹಿಳೆಗೆ ಸಾಮಾಜಿಕ, ನೈತಿಕ ಆರ್ಥಿಕ ಸ್ವಾತಂತ್ರ್ಯ ದೊರೆತರೆ ಮಾತ್ರ ಅವಳ ಸ್ಥಿತಿ ಸುಧಾರಿಸಿ ಅವಳ ಆತ್ಮಗೌರವಕ್ಕೆ ಕುಂದಣವಿಟ್ಟಂತಾಗುತ್ತದೆ – ಜ್ಯೋತಿ ಗುರುಪ್ರಸಾದ್

ಕಾರ್ಕಳ: ಮಹಿಳೆಗೆ ಈಗ ಸಾಮಾಜಿಕ ಸ್ವಾತಂತ್ರ್ಯ, ನೈತಿಕ ಸ್ವಾತಂತ್ರ್ಯದ ಜೊತೆಗೆ ಆರ್ಥಿಕ ಸ್ವಾತಂತ್ರ್ಯವೂ ದೊರೆತರೆ ಮಾತ್ರ ಅವಳ ಸ್ಥಿತಿ ಸುಧಾರಿಸಿ ಅವಳ ಆತ್ಮಗೌರವಕ್ಕೆ ಕುಂದಣವಿಟ್ಟಂತಾಗುತ್ತದೆ. ಮಹಿಳೆ ಎಂದರೆ ಮಹಾ ಇಳೆ. ಇಳೆ ಎಂದರೆ ಭೂಮಿ. ಭೂಮಿ ತೂಕದ ಹೆಣ್ಣು ಮಗಳನ್ನು ಪುರುಷ ಪ್ರಧಾನ ಸಮಾಜ ಶೋಷಿಸಿಕೊಂಡು ಬಂದ ಪರಂಪರೆಯಿಂದಾಗಿ ಮಹಿಳೆ ವ್ಯಕ್ತಿಯಾಗಿ ಸಮಾನತೆ ಕಂಡುಕೊಳ್ಳುವುದು ತುಂಬಾ ಕಷ್ಟವಾಯಿತು ಹಿರಿಯ ಸಾಹಿತಿ, ಅಂಕಣಕಾರ್ತಿ ಜ್ಯೋತಿ ಗುರುಪ್ರಸಾದ್ ಅಭಿಪ್ರಾಯಪಟ್ಟರು.

ಅವರು ಕಾರ್ಕಳದ ಸುಮೇಧಾ ಫ್ಯಾಷನ್ ಇನ್ಸ್ಟಿಟ್ಯೂಟ್ ವತಿಯಿಂದ ಪಿ ಯು ಸಿ ನಂತರದ ವಿದ್ಯಾರ್ಥಿನಿಯರಿಗಾಗಿ ಉಚಿತ ಫ್ಯಾಷನ್ ಡಿಸೈನಿಂಗ್ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣದ ಸವಲತ್ತೂ ಕೂಡ ಮಹಿಳೆಯರಿಗೆ ಇಲ್ಲದ ಸಂಕಷ್ಟದ ಕಾಲದಲ್ಲಿ ಮಹಿಳೆಗೆ ಸಿಗಬೇಕಾದ ಶಿಕ್ಷಣದ ಹಕ್ಕಿಗೆ ಹೋರಾಡಿದ ಸಾವಿತ್ರಿ ಭಾಪುಲೆ, ಅರಮನೆಯಲ್ಲಿ ಊಳಿಗದವಳಾಗಿದ್ದ ಸಂಚಿ ಹೊನ್ನಮ್ಮ, “ನಮ್ಮನೆಲ್ಲ ಪೊರೆದ ತಾಯಿ ಹೆಣ್ಣಲ್ಲವೆ ಎಂದು ಪ್ರಶ್ನಿಸುವುದರ ಮೂಲಕ ಹೆಣ್ಣಿನ ತಾಯ್ತನದ ಪ್ರಕೃತಿದತ್ತ ಶಕ್ತಿಯ ಮೂಲಕ ಅವಳ ವ್ಯಕ್ತಿತ್ವದ ಪ್ರಭೆಯನ್ನು ಎತ್ತಿ ಹಿಡಿದವರು . ಇಂಥ ಆತ್ಮಗೌರವವನ್ನು ಒದಗಿಸಲು ಹೊರಟಿರುವ ಸುಮೇಧ ಫ್ಯಾಶನ್ ಡಿಸೈನಿಂಗ್ ಸಂಸ್ಥೆಯ ಸಂಸ್ಥಾಪಕಿ ಸಾಧನಾ ಅಶ್ರೀತ್ ಅವರ ದುಡಿಮೆ ಸ್ತುತ್ಯಾರ್ಹ ಎಂದರು.


ಫ್ಯಾಶನ್ ಎಂದರೆ ಆಯಾ ಕಾಲದಲ್ಲಿ ಅನುಸರಿಸುವ ಮಾದರಿ ಶೈಲಿ. ಉಡುಗೆ ತೊಡುಗೆಯ ಫ್ಯಾಶನ್ ಉಡುವರ ತೊಡುವರ ಆತ್ಮವಿಶ್ವಾಸವನ್ನು ಹೆಚ್ಚಿಸುವಂತಿರಬೇಕು. ಅಂಥ ಕೌಶಲವನ್ನು ಶ್ರದ್ಧೆ ಮತ್ತು ಪ್ರೀತಿಯಿಂದ ಕಲಿತು ಹೊಸತನದ ಫ್ಯಾಶನ್ ಮಾದರಿಗಳನ್ನು ಮಾರುಕಟ್ಟೆಗೆ ಒದಗಿಸುವುದರ ಮೂಲಕ ಪ್ರಸಿದ್ಧಿ ಮತ್ತು ಆರ್ಥಿಕ ಸ್ವಾತಂತ್ರ್ಯ ಎರಡನ್ನೂ ಇಲ್ಲಿ ತರಬೇತಿ ಪಡೆವ ಹೆಣ್ಣು ಮಕ್ಕಳು ಪಡೆಯಬೇಕು.‌ ಅಂತರಂಗದ ಸೌಂದರ್ಯದ ಮೂಲಕ ಬಹಿರಂಗದ ಸೌಂದರ್ಯ ಹೊಳೆಯುವಂಥ ಫ್ಯಾಶನ್ ವಿನ್ಯಾಸವನ್ನು ಕಲಿಯಬೇಕು ಎಂಬ ಇಂಗಿತವನ್ನು ವ್ಯಕ್ತಪಡಿಸುವುದರ ಮೂಲಕ ತಮ್ಮ ‘ ನೆರಿಗೆಗಳು’ ಕವಿತೆಯನ್ನು ಪ್ರಸ್ತುತಪಡಿಸಿದರು. ಅದರಲ್ಲಿ ” ನನ್ನಿಂದಲೇ ಸೀರೆಗೊಂದು ಆಕಾರ” ಎಂಬ ಸಾಲು ಬರುತ್ತದೆ.‌ ಇದು ಫ್ಯಾಶನ್ ನ ಅಸ್ಮಿತೆ ಮತ್ತು ಆತ್ಮವಿಶ್ವಾಸ ಎಂದು ಅರ್ಥ ಮಾಡಿಸುತ್ತ ಇಲ್ಲಿಯ ವಿದ್ಯಾರ್ಥಿಗಳು ಅತ್ಯುನ್ನತ ಮಾದರಿ ಫ್ಯಾಶನ್ ಡಿಸೈನ್ ಕಲಿಕೆಯನ್ನು ಯಶಸ್ವಿಯಾಗಿ ಕಲಿತು ಕಲಿತ ತಾಯಿ ಬೇರಿಗೆ ನ್ಯಾಯ ಒದಗಿಸಿ ಹೆಮ್ಮರದ ರೆಂಬೆ ಕೊಂಬೆ ಎಲೆ ಹೂವು ಹಣ್ಣುಗಳಾಗಿ ಕಂಗೊಳಿಸಿ ಆಕಾಶ ಮುಟ್ಟುವ ಸಾರ್ಥಕ ಜೀವನವನ್ನು ನಡೆಸಬೇಕು ಎಂದು ಹರಸಿದರು.’

ವಿಶೇಷ ಸಾಮರ್ಥ್ಯದ ವಿದ್ಯಾರ್ಥಿನಿ ಸೌಜನ್ಯ ವಸ್ತ್ರ ವಿನ್ಯಾಸಗೊಳಿಸಿದ ಫ್ಯಾಷನ್ ಬಟ್ಟೆಗಳು ಹಾಗೂ ಜ್ಯುವೆಲರಿಗಳ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಕಾರ್ಕಳದ ಕೊಡುಗೈ ದಾನಿ ಲೆಕ್ಕ ಪರಿಶೋದಕ ಕಾರ್ಕಳ ಕಮಲಾಕ್ಷ ಕಾಮತ್ ವಿದ್ಯಾರ್ಥಿನಿಯರು ಕಲಿಕೆಯಲ್ಲಿ ಪ್ರೀತಿ, ಆತ್ಮವಿಶ್ವಾಸ, ಸಕರಾತ್ಮಕ ಗುಣಗಳನ್ನು ಬೆಳೆಸಿ ಕೊಳ್ಳುವ ಮೂಲಕ ಜೀವನದಲ್ಲಿ ಪರಿವರ್ತನೆಯನ್ನು ಕಂಡುಕೊಳ್ಳಬೇಕಾಗಿದೆ.
ಈ ಕಾರ್ಯಾಗಾರದ ಪ್ರಯೋಜನ ಪಡೆದುಕೊಂಡು ಯುವತಿಯರು ಸ್ವಂತ ಉದ್ಯೋಗ ನಡೆಸಿ ಸ್ವಾವಲಂಬಿ ಬದುಕು ನಡೆಸಲು ಸಹಾಯವಾಗಲಿದೆ, ನಾವು ಕಲಿತ ವಿದ್ಯೆಯನ್ನು ಬೇರೆಯವರಿಗೆ ದಾರೆ ಏರೆಯುವ ಮೂಲಕ ಜೀವನ ಸಾರ್ಥಕವಾಗುತ್ತದೆ ಜೀವನದಲ್ಲಿ ದಾನ ಧರ್ಮಗಳ ಮೂಲಕ ಸಮಾಜ ಸೇವೆಗಳನ್ನು ಮಾಡಿ ಪಾವನರಾಗಬೇಕು ಎಂದರು.

ಸುಮೇಧಾ ಫ್ಯಾಷನ್ ಇನ್ಸ್ಟಿಟ್ಯೂಟ್ ಸಂಸ್ಥಾಪಕಿ ಸಾಧನ ಅಶ್ರೀತ್ ಪ್ರಾಸ್ತವಿಕವಾಗಿ ಮಾತನಾಡಿ ಯುವತಿಯರಿಗಾಗಿ ಉಚಿತವಾಗಿ ಹೂಪ್ ಆರ್ಟ್, ಜ್ಯುವೆಲರಿ ತಯಾರಿಕೆ, ಮೆಹಂದಿ, ಕ್ಲೇ ಆರ್ಟ್, ಸೇರಿದಂತೆ ವಿವಿಧ ಫ್ಯಾಶನ್ ಸಂಬಂದಿಸಿದ ವಿಷಯಗಳನ್ನು ಕಲಿಸಿಕೊಡಲಾಗುವುದು ಎಂದರು.
ವೇದಿಕೆಯಲ್ಲಿ ವಿಶೇಷ ಶಿಕ್ಷಕಿ ಸೌಜನ್ಯ ಉಪಸ್ಥಿತರಿದ್ದರು.
ಸಂಜನಾ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಶಿಕ್ಷಕಿ ಕಾವ್ಯ ವಂದಿಸಿದರು.

Leave a Reply

Your email address will not be published. Required fields are marked *