ಮೂಡುಬಿದಿರೆ: 2047 ರ ವಿಕಸಿತ ಭಾರತಕ್ಕೆ ಯುವಜನತೆಯೇ ನಿರ್ಮಾಣ ಶಿಲ್ಪಿಗಳು – ಬಾನ್ಸುರಿ ಸ್ವರಾಜ್

ಮೂಡುಬಿದಿರೆ: ವಿಕಸಿತ ಭಾರತ ನಿರ್ಮಾಣದ ಮಹಾಸಂಕಲ್ಪ ಸಾಕಾರಗೊಳಿಸಲು ಯುವಜನತೆ ಕೇವಲ ಫಲಾನುಭವಿಗಳಾದರೆ ಸಾಲದು, ರಾಷ್ಟ್ರದ ಭವಿಷ್ಯ ರೂಪಿಸುವ ಶಿಲ್ಪಿಗಳಾಗಬೇಕು ಎಂದು ನವದೆಹಲಿಯ ಸಂಸದೆ ಬಾನ್ಸುರಿ ಸ್ವರಾಜ್ ನುಡಿದರು.
ಅವರು ಡಾ ವಿ ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ರೋಸ್ಟ್ರಮ್ ಸ್ಪೀಕರ್ಸ್ ಕ್ಲಬ್‍ನ 2026-27 ಸಾಲಿನ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

“ವಂದೇ ಮಾತರಂ’’ ಘೋಷಣೆಯೊಂದಿಗೆ ಭಾಷಣ ಪ್ರಾರಂಭಿಸಿದ ಅವರು, ವಂದೇ ಮಾತರಂ ಕೇವಲ ದೇಶಭಕ್ತಿಯ ಘೋಷಣೆಯಲ್ಲ, ಅದು ಭಾರತದ ಆತ್ಮಸ್ವರವಾಗಿ ಪ್ರತಿಧ್ವನಿಸಬೇಕು. ಸ್ವಾತಂತ್ರ್ಯ ಸಮರದಲ್ಲಿ ಯುವಶಕ್ತಿಗೆ ಸ್ಪೂರ್ತಿ ತುಂಬಿದ ಈ ಘೋಷಣೆ, ಇಂದಿನ ವಿಕಸಿತ ಭಾರತದ ಪಥದಲ್ಲಿ ಪ್ರೇರಣೆಯ ಮಾರ್ಗಸೂಚಿಯಾಗಬೇಕು ಎಂದು ಅಭಿಪ್ರಾಯಪಟ್ಟರು. 2047ರೊಳಗೆ ವಿಕಸಿತ ಭಾರತ ನಿರ್ಮಾಣವು ಕೇವಲ ಕನಸಲ್ಲ, ಅದು ಸಂಕಲ್ಪ. ಇಂದಿನ ಪೀಳಿಗೆ ಅನುಭವಿಸುತ್ತಿರುವ ಸ್ವಾತಂತ್ರ್ಯ ಹಾಗೂ ಅವಕಾಶಗಳು ಹಿಂದಿನ ತಲೆಮಾರಿನ ತ್ಯಾಗಗಳ ಫಲ. ಅದಕ್ಕೆ ಪ್ರತಿಯಾಗಿ ಯುವಕರು ರಾಷ್ಟ್ರ ನಿರ್ಮಾಣದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಕರೆ ಕೊಟ್ಟರು.

ಭಾರತದ ಯುವಜನಸಂಖ್ಯೆ ದೇಶಕ್ಕೆ ಸಿಕ್ಕಿರುವ ಅಪರೂಪದ ಮತ್ತು ಕಾಲಮಿತಿಯ ಅಮೂಲ್ಯ ಸಂಪತ್ತು; ಅದನ್ನು ಸಮರ್ಥವಾಗಿ ಬಳಸಿಕೊಂಡರೆ ದೇಶದ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಬಲಿಷ್ಠ ಅಡಿಪಾಯವಾಗುತ್ತದೆ. 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರೇ ದೇಶದ ಬಹುಪಾಲು ಜನಸಂಖ್ಯೆಯಾಗಿರುವುದು ದೊಡ್ಡ ಅವಕಾಶವಾದರೂ, ಅದನ್ನು ಮುಂದಿನ 20–25 ವರ್ಷಗಳಲ್ಲಿ ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದು ಸೂಚಿಸಿದರು. ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆಯ ಮೂಲಕ ಯುವಶಕ್ತಿಯನ್ನು ಆರ್ಥಿಕ ಪ್ರಗತಿಯ ಚಾಲಕಶಕ್ತಿಯನ್ನಾಗಿ ಮಾಡಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಪದವಿ ಮಾತ್ರ ಸಾಲದು ಎಂದು ತಿಳಿಸಿದ ಹೇಳಿದ ಅವರು, ಯುವಜನತೆ ನಿರಂತರ ಕೌಶಲ್ಯಾಭಿವೃದ್ಧಿಗೆ ಒತ್ತು ನೀಡಬೇಕು ಎಂದರು. ಈ ಪೀಳಿಗೆ ಉದ್ಯೋಗ ಹುಡುಕುವವರಾಗದೆ, ಉದ್ಯೋಗ ಸೃಷ್ಟಿಸುವವರಾಗಬೇಕು. ಉದ್ಯಮಶೀಲತೆ ಮತ್ತು ನವೀನತೆ ಆರ್ಥಿಕ ಬೆಳವಣಿಗೆಯ ಮುಖ್ಯ ಚಾಲಕ ಶಕ್ತಿಗಳು ಎಂದು ವಿವರಿಸಿದರು. ಡಿಜಿಟಲ್ ಸಾಕ್ಷರತೆಯಿಂದ ಆರ್ಥಿಕ ಸಾಕ್ಷರತೆಯತ್ತ ಹೆಜ್ಜೆ ಇಡಬೇಕು ಎಂದ ಅವರು, ಯುವಜನತೆ ಹಣಕಾಸು ಯೋಜನೆ ಹಾಗೂ ಉಳಿತಾಯದ ಮಹತ್ವ ಅರಿತುಕೊಳ್ಳಬೇಕು ಎಂದು ಸಲಹೆ ನೀಡಿದರು.

ಸ್ಟಾರ್ಟ್‍ಅಪ್ ಮತ್ತು ಮಹಿಳಾ ಉದ್ಯಮಶೀಲತೆ ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸುತ್ತಾ, ಭಾರತವು ಜಾಗತಿಕವಾಗಿ ಮೂರನೇ ಅತಿದೊಡ್ಡ ಸ್ಟಾರ್ಟ್‍ಅಪ್‍ಗೆ ಪೂರಕ ಪರಿಸರ ಒದಗಿಸುವ ದೇಶವಾಗಿ ಹೊರಹೊಮ್ಮಿದೆ ಎಂದು ಹೇಳಿದರು. ಪ್ರಧಾನಮಂತ್ರಿ ಮುದ್ರಾ ಯೋಜನೆಯ ಮೂಲಕ ತಳಮಟ್ಟದ ಉದ್ಯಮಶೀಲತೆಗೆ ಉತ್ತೇಜನ ಸಿಕ್ಕಿದ್ದು, ತಂತ್ರಜ್ಞಾನ ಸ್ಟಾರ್ಟ್‍ಅಪ್‍ಗಳಷ್ಟೇ ಅಲ್ಲದೆ ಸಣ್ಣ ಉದ್ಯಮಗಳಿಗೂ ನೆರವಾಗಿದೆ ಎಂದರು. ಮುದ್ರಾ ಸಾಲಗಳ ಮೂಲಕ ಮಹಿಳೆಯರೂ ಆರ್ಥಿಕ ಸಬಲೀಕರಣದ ಹಾದಿಹಿಡಿದಿದ್ದಾರೆ ಎಂದರು.

ಹೊಸ ಅಪರಾಧ ಕಾನೂನುಗಳು ಮತ್ತು ನ್ಯಾಯಾಂಗ ಹಳೆಯ ಭಾರತೀಯ ದಂಡ ಸಂಹಿತೆಯನ್ನು ಬದಲಿಸಿ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಹಾಗೂ ಭಾರತೀಯ ಸಾಕ್ಷಿ ಅಧಿನಿಯಮ ಜಾರಿಗೆ ತಂದಿರುವುದು ಕಾಲದ ಅಗತ್ಯ ಎಂದ ಅವರು, ಅನೇಕ ಹಳೆಯ ಕಾನೂನುಗಳನ್ನು ರದ್ದುಪಡಿಸಲಾಗಿದೆ. ನ್ಯಾಯಾಂಗದ ಪಾತ್ರ ಕುರಿತು ಮಾತನಾಡಿದ ಅವರು, ವಿಶಾಖಾ ಮಾರ್ಗಸೂಚಿಗಳನ್ನು ಉದಾಹರಣೆಯಾಗಿ ನೀಡಿ, ನಾಗರಿಕರ ಹಕ್ಕುಗಳ ರಕ್ಷಣೆಯಲ್ಲಿ ನ್ಯಾಯಾಂಗದ ಮಹತ್ವವನ್ನು ಒತ್ತಿಹೇಳಿದರು.
ಕೃತಕ ಬುದ್ಧಿಮತ್ತೆ ಉದ್ಯೋಗಗಳನ್ನು ಕಸಿದುಕೊಳ್ಳುವುದಿಲ್ಲ; ಬದಲಾಗಿ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ. 1980ರ ದಶಕದ ಕಂಪ್ಯೂಟರ್ ಕ್ರಾಂತಿಯಂತೆ, ಕೃತಕ ಬುದ್ದಿಮತ್ತೆಯ ಯುಗದಲ್ಲಿಯೂ ಕೌಶಲ್ಯವರ್ಧನೆ ಅಗತ್ಯವಿದೆ ಎಂದರು. ಸೆಮಿಕಂಡಕ್ಟರ್ ಉತ್ಪಾದನೆ ಮತ್ತು ಸ್ವಾವಲಂಬನೆಗೆ ಸಂಬಂಧಿಸಿದ ಕೇಂದ್ರ ಬಜೆಟ್ ಕ್ರಮಗಳನ್ನೂ ಅವರು ಉಲ್ಲೇಖಿಸಿದರು.

ರಾಜಕೀಯದಲ್ಲಿ ಯುವಜನತೆ ಪಾತ್ರ ಯುವಜನತೆ ಮತದಾನದ ಹಕ್ಕನ್ನು ಜವಾಬ್ದಾರಿಯಿಂದ ಬಳಸಬೇಕು ಮತ್ತು ಸಾರ್ವಜನಿಕ ಜೀವನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು. ಭವಿಷ್ಯದ ಸಂಸತ್ತು ಮತ್ತು ವಿಧಾನಸಭೆಗಳು ಯುವಜನರ ಪ್ರತಿಬಿಂಬವಾಗಬೇಕಾಗಿದೆ. ದೇಶದ ಜನಸಂಖ್ಯೆಯಲ್ಲಿ ಯುವಕರ ಪ್ರಮಾಣ ಹೆಚ್ಚಿರುವ ಹಿನ್ನೆಲೆಯಲ್ಲಿ ಶಾಸನ ಸಭೆಗಳಲ್ಲಿ ಅವರ ಪ್ರತಿನಿಧಿತ್ವವೂ ಹೆಚ್ಚಾಗಬೇಕು.
ಮಹಿಳಾ ಪ್ರತಿನಿಧಿತ್ವ ಭಾರತದಲ್ಲಿ ಮಹಿಳೆಯರ ರಾಜಕೀಯ ಪ್ರತಿನಿಧಿತ್ವವನ್ನು ವಿಸ್ತರಿಸುವ ಉದ್ದೇಶದಿಂದ ಜಾರಿಗೆ ತಂದಿರುವ ಸಂವಿಧಾನದ 106ನೇ ತಿದ್ದುಪಡಿ ಅಧಿನಿಯಮ, 2023 (ನಾರಿ ಶಕ್ತಿ ವಂದನ ಅಧಿನಿಯಮ) ಮಹತ್ವದ ಮೈಲಿಗಲ್ಲಾಗಿದ್ದು, 2029ರಿಂದ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಜಾರಿಗೆ ಬರಲಿದೆ. ಈ ಅಧಿನಿಯಮದ ಪ್ರಕಾರ, ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳ ಒಟ್ಟು ಸ್ಥಾನಗಳಲ್ಲಿ 33 ಶೇಕಡಾ (ಒಂದು ಮೂರನೇ ಭಾಗ) ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗುತ್ತದೆ. ಇದರ ಮೂಲಕ ಮಹಿಳೆಯರ ರಾಜಕೀಯ ಪಾಲ್ಗೊಳ್ಳುವಿಕೆ ಹೆಚ್ಚಿಸಿ, ಶಾಸಸ ಸಭೆಗಳಲ್ಲಿ ಸಮಾನ ಪ್ರತಿನಿಧಿತ್ವವನ್ನು ಖಚಿತಪಡಿಸುವುದಾಗಿದೆ. ಸ್ವಾತಂತ್ರ್ಯಾನಂತರ ದಶಕಗಳ ಕಾಲ ಮಹಿಳಾ ಮೀಸಲಾತಿ ಕುರಿತು ಚರ್ಚೆಗಳು ನಡೆದಿದ್ದರೂ, 2023ರಲ್ಲಿ ಸಂಸತ್ತಿನಲ್ಲಿ ಅಂಗೀಕೃತವಾದ ಈ ತಿದ್ದುಪಡಿ ಮಹಿಳಾ ಸಬಲೀಕರಣದ ದಿಕ್ಕಿನಲ್ಲಿ ಐತಿಹಾಸಿಕ ಹೆಜ್ಜೆಯಾಗಿ ಪರಿಗಣಿಸಲಾಗುತ್ತಿದೆ ಎಂದರು.

ಆಳ್ವಾಸ್: ರಾಷ್ಟ್ರ ನಿರ್ಮಾಣದ ಮಹಾನ್‍ಶಿಲ್ಪಿಗಳನ್ನು ರೂಪಿಸುವ ಕಾರ್ಖಾನೆ
ಆಳ್ವಾಸ್ ಶಿಕ್ಷಣ ಸಂಸ್ಥೆ ಕೇವಲ ಶಿಕ್ಷಣ ನೀಡುವ ಕೇಂದ್ರವಲ್ಲ; ಅದು ರಾಷ್ಟ್ರ ನಿರ್ಮಾಣದ ಮಹಾನ್‍ಶಿಲ್ಪಿಗಳನ್ನು ರೂಪಿಸುವ ಕಾರ್ಖಾನೆ ಎಂದು ಬಣ್ಣಿಸಿದರು. ವಿದ್ಯಾಗಿರಿ, ಮಿಜಾರಿನ ವಿಶಾಲ ಹಸಿರುಗಾವಲು, ಸಮಗ್ರ ಮೂಲಸೌಕರ್ಯ ಹಾಗೂ ಶಿಸ್ತುಬದ್ಧ ಶೈಕ್ಷಣಿಕ ವಾತಾವರಣಕ್ಕೆ ಮನಸೋತರು. ಆಳ್ವಾಸ್‍ನ ಶೋಭಾವನ ಕಾಟೇಜ್‍ನಲ್ಲಿ ಶುಕ್ರವಾರವೇ ಬಂದು ವಾಸ್ತವ್ಯವಿದ್ದ ಅವರು, ಅಲ್ಲಿ ಸಂಜೆ ಹಾಗೂ ಮುಂಜಾನೆ ಶೋಭಾವನದ ಗೆಸ್ಟ್‍ಹೌಸ್‍ನಲ್ಲಿ ನೀಡಲಾದ ಆತಿಥ್ಯವನ್ನು ಮೆಚ್ಚಿಕೊಂಡರು. ಅನ್ನ–ಸಾಂಬಾರ್, ಜೈನ್ ಉಪ್ಪಿನಕಾಯಿ, ಇಡ್ಲಿ, ಹೊಳಿಗೆ, ತೆಂಗಿನ ಚಟ್ನಿ, ನೀರ್ ದೋಸೆ, ಶೀರಾ, ಅವಲಕ್ಕಿ–ಕಡಲೆ, ಶಾವಿಗೆ ಪಾಯಸ, ವಡೆ ಮೊದಲಾದ ಸ್ಥಳೀಯ ಕರಾವಳಿಯ ಖಾದ್ಯಗಳನ್ನು ಆಸ್ವಾದಿಸಿದರು.

ಕಾರ್ಯಕ್ರಮದಲ್ಲಿ ಬನ್ಸುರಿ ಸ್ವರಾಜ್ ಅವರನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ರೋಸ್ಟ್ರಮ್ ಸ್ಪೀಕರ್ಸ್ ಕ್ಲಬ್‍ನ ಅಧ್ಯಕ್ಷೆ ಡಾ. ದೀಪಾ ಕೊಠಾರಿ, ಆಳ್ವಾ ಫಾರ್ಮಸಿ ಆಡಳಿತಾಧಿಕಾರಿ ಡಾ. ಗ್ರಿಶ್ಮಾ ವಿವೇಕ್ ಆಳ್ವ, ಬಾನ್ಸುರಿ ಸ್ವರಾಜ್ ಸಂಬಂದಿ ನೀತು ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ರೋಸ್ಟ್ರಮ್ ಸ್ಪೀಕರ್ಸ್ ಕ್ಲಬ್‍ನ ಸದಸ್ಯೆ ನಿಯತಿ ಅಮೀನ್ ನಿರೂಪಿಸಿ, ಶ್ರೀಶ್ ಕೊಟೇಗಾರ್ ವಂದಿಸಿದರು.

Leave a Reply

Your email address will not be published. Required fields are marked *