ಮಂಗಳೂರು:- ರಾ.ಹೆ.66ರ ಬಳಿಯಿರುವ ಪಂಪ್ವೆಲ್ನ ಮಸೀದಿಗೆ ದುಷ್ಕರ್ಮಿಗಳು ಸೋಡಾ ಬಾಟಲಿ ಎಸೆದ ಘಟನೆ ಶನಿವಾರ ಮುಂಜಾನೆ ಬೆಳಕಿಗೆ ಬಂದಿದೆ. ಪಂಪ್ವೆಲ್ನ ಮಸ್ಜಿದುತ್ತಖ್ವಾದ ಎಡಭಾಗದಲ್ಲಿ ನಿಂತ ದುಷ್ಕರ್ಮಿಗಳು ಮುಂಜಾನೆ ಸುಮಾರು 3.40ರ ವೇಳೆಗೆ ಸೋಡಾ ಬಾಟಲಿ ಎಸೆದು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಮಸೀದಿಯ ಕಾವಲುಗಾರರ ಕಣ್ತಪ್ಪಿಸಿ ಈ ಕೃತ್ಯ ಎಸಗಲಾಗಿದೆ. ಕಾವಲುಗಾರರು ಬೆಳಗ್ಗೆ ಮಸೀದಿಯ ಮಹಡಿ ಹತ್ತಿದಾಗಲೇ ಕೃತ್ಯ ಬೆಳಕಿಗೆ ಬಂದಿದೆ. ತಕ್ಷಣ ಮಸೀದಿಯ ಪದಾಧಿಕಾರಿಗಳ ಗಮನ ಸೆಳೆದು ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಮಂಗಳೂರು ದಕ್ಷಿಣ ಉಪವಿಭಾಗದ ಎಸಿಪಿ ಕೋದಂಡರಾಮ ನೇತೃತ್ವದ ಪೊಲೀಸರು ಮಸೀದಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಇತ್ತೀಚೆಗೆ ಪಾಂಡೇಶ್ವರದಲ್ಲಿರುವ ಮೌಲಾನಾ ಅಬುಲ್ ಕಲಾಂ ಆಝಾದ್ ಭವನಕ್ಕೆ ಕಲ್ಲೆಸೆದು ಹಾನಿಗೊಳಿಸಲಾಗಿತ್ತು. ಇದೀಗ ಮತ್ತೊಂದು ಅಹಿತಕರ ಘಟನೆ ನಡೆದಿದೆ.