ಮಂಗಳೂರು (ಜೂನ್ 29 ):- ಕೋವಿಡ್ ಹಿನ್ನೆಲೆಯಲ್ಲಿ ವೆನ್‍ಲಾಕ್ ಆಸ್ಪತ್ರೆಯಲ್ಲಿ ವೆಂಟಿಲೇಟರ್‍ಗಳ ಕೊರತೆ ಇದ್ದು, ಜಿಲ್ಲೆಯ ವಿವಿಧ ಉದ್ಯಮಗಳು ವೆನ್‍ಲಾಕ್ ಆಸ್ಪತ್ರೆಗೆ ನೀಡಿದ ವೆಂಟಿಲೇಟರ್‍ಗಳ ಹಸ್ತಾಂತರ ಕಾರ್ಯಕ್ರಮ ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಿತು.

 ಎಂ.ಆರ್.ಪಿ.ಎಲ್  ವತಿಯಿಂದ 5, ಎಂ.ಸಿ.ಎಫ್ – 2, ಎನ್.ಎಂ.ಪಿ.ಟಿ – 3 ಹಾಗೂ ಕುದುರೆಮುಖ ಅದಿರು ಸಂಸ್ಥೆಯ ವತಿಯಿಂದ 2 ವೆಂಟಿಲೇಟರ್‍ಗಳನ್ನು ಇಂದು ಸಂಸ್ಥೆಯ ಪ್ರತಿನಿಧಿಗಳು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಹಸ್ತಾಂತರಿಸಿದರು.

 ಈ ಸಂದರ್ಭದಲ್ಲಿ ಮಾತನಾಡಿದ  ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲು, ವೆನ್‍ಲಾಕ್ ಆಸ್ಪತ್ರೆಗೆ ಸುಮಾರು 60 ವೆಂಟಿಲೇಟರ್‍ಗಳ ಅಗತ್ಯವಿದೆ. ಲೋಕಸಭಾ ಸದಸ್ಯರ ಪ್ರಧೇಶಾಭಿವೃದ್ಧಿ ನಿಧಿಯಿಂದ ಇದಕ್ಕಾಗಿ 1 ಕೋಟಿ ರೂ. ನೀಡಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಶಾಸಕರ ನಿಧಿಯಿಂದ 2 ವೆಂಟಿಲೇಟರ್ ಹಾಗೂ ಮಂಗಳೂರು ದಕ್ಷಿಣ ಮತ್ತು ಉತ್ತರ ಶಾಸಕರು ತಮ್ಮ ಅನುದಾನದಿಂದ ತಲಾ 2 ವೆಂಟಿಲೇಟರ್‍ಗಳನ್ನು ನೀಡುವುದಾಗಿ ತಿಳಿಸಿದ್ದಾರೆ. ಇದರಿಂದ ಒಟ್ಟಾರೆ 30 ವೆಂಟಿಲೇಟರ್‍ಗಳು ವೆನ್‍ಲಾಕ್ ಆಸ್ಪತ್ರೆಗೆ ದೊರಕಿದಂತಾಗಿದೆ ಎಂದು ಹೇಳಿದರು.

     ಇಂದು ವಿವಿಧ ಕೈಗಾರಿಕಾ ಸಂಸ್ಥೆಗಳು ಕೊಡುಗೆ ನೀಡಿರುವುದು ಶ್ಲಾಘನೀಯ. ಕೋವಿಡ್ ಸಂದರ್ಭದಲ್ಲಿ ಹಲವಾರು ಸಂಘಸಂಸ್ಥೆಗಳು ಜಿಲ್ಲಾಡಳಿತದೊಂದಿಗೆ ಕೈಜೋಡಿಸಿವೆ ಎಂದು ಅವರು ಹೇಳಿದರು.

 ಶಾಸಕ ವೇದವ್ಯಾಸ ಕಾಮತ್, ಜಿಲ್ಲಾಧಿಕಾರಿ ಸಿಂಧೂ ರೂಪೇಶ್, ಅಪರ ಜಿಲ್ಲಾಧಿಕಾರಿ ರೂಪಾ ಮತ್ತಿತರರು ಇದ್ದರು.