ಮಂಗಳೂರು, ಸೆ.29: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾರ್ಮಿಕ ಇಲಾಖೆ ಮತ್ತು ಕರ್ನಾಟಕ ಸರಕಾರ ನೀಡಿದ ಕಟ್ಟಡ ಕಾರ್ಮಿಕರ ಕಿಟ್ ಮತ್ತು ಅದರ ದರ ಸಂಶಯಾಸ್ಪದ ಆಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಹೇಳಿದರು.

ಹತ್ತು ವಸ್ತುಗಳ ಒಂದು ಕಿಟ್‌ನ ಒಟ್ಟು ಬೆಲೆ 835 ರೂಪಾಯಿ ಎಂದು ಇಲಾಖೆ ಲೆಕ್ಕ ನೀಡಿದೆ. ನಾನು ಇದರ ಬೆಲೆಯನ್ನು ಅಂಗಡಿಯಲ್ಲಿ ವಿಚಾರಿಸಿದಾಗ ರೂ. 680 ಆಗುತ್ತದೆ ಎಂದಿದ್ದಾರೆ. ಅಂದರೆ100 ಕೋಟಿ ರೂಪಾಯಿ ಈ ಕಿಟ್ ನೀಡಿಕೆಯಾಗಿದೆ ಎಂದು ಹರೀಶ್ ಕುಮಾರ್ ಹೇಳಿದರು.

ಸರಕಾರವು ಈ ಕಿಟ್ ನೀಡಿದ್ದು ಕಾರ್ಮಿಕರಿಗೇ ವ್ಯಯಿಸಬೇಕಾದ ಕಾರ್ಮಿಕ ಕಲ್ಯಾಣ ನಿಧಿಯಿಂದ ನೀಡಲಾಗಿದೆ. ಆದರೆ ಸರಕಾರ ತನ್ನ ಸ್ವಂತ ವೆಚ್ಚದಂತೆ ಸುಳ್ಳು ಹೇಳಿದೆ. ನಾ ಕಾವೂಂಗ, ನಾ ಕಾನೇ ದೂಂಗಾ ಎಂಬ ಬಿಜೆಪಿಯ ನಾಯಕರು ಎಲ್ಲದರಲ್ಲೂ ಭ್ರಷ್ಟಾಚಾರ ಮಾಡಿ ಹಣ ಹೊಡೆಯುತ್ತಿದ್ದಾರೆ ಎಂದು ಅವರು ಹೇಳಿದರು.

ಇನ್ನು ಸಂಘ ಪರಿವಾರದವರ ಅನೈತಿಕ ಪೋಲೀಸ್ ಗಿರಿಯಲ್ಲಿ ಬಂಧಿಸಿದ ಕೂಡಲೆ ಪೋಲೀಸು ಠಾಣೆಯಲ್ಲಿಯೇ ಜಾಮೀನು ನೀಡಿದ್ದು ಹೇಗೆ? ಸಂಘ ಪರಿವಾರದವರಿಗೆ ಬೇರೆಯೇ ಕಾನೂನು ಇದೆಯೇ? ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬಿದ್ದು ಹೋಗಿದೆ. ನಮ್ಮ ಕಾಲದಲ್ಲಿ ಇಂಥ ಕೇಸಿನಲ್ಲಿ ಬಳ್ಳಾರಿ ಜೈಲಿಗೆ ಕಳುಹಿಸಿದ್ದೆವೆ. ರಾಜ್ಯ ಬಿಜೆಪಿ ಸರಕಾರಕ್ಕೆ ಅಧಿಕಾರಿಗಳ ಮೇಲೆ ಹಿಡಿತ ಇಲ್ಲ. ಸುರತ್ಕಲ್ ಗಲಭೆಯಲ್ಲಿ ಬಂಧಿಸಿ ಬಿಟ್ಟವರನ್ನು ಪೋಲೀಸರು ಕೂಡಲೆ ಮತ್ತೆ ಬಂಧಿಸಬೇಕು. ಇಲ್ಲದಿದ್ದರೆ ಸೆಪ್ಟೆಂಬರ್ 30ರಂದು ಸುರತ್ಕಲ್ ಪೋಲೀಸು ಠಾಣೆ ಎದುರು ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ ಎಂದೂ ಹರೀಶ್ ಕುಮಾರ್ ಹೇಳಿದರು.

ಪೋಲೀಸರೆದುರೇ ಬಜರಂಗ ದಳದವರು ಅನ್ಯ ಕೋಮಿನವರನ್ನು ಹೊಡೆದಿದ್ದಾರೆ. ಬಜರಂಗ ದಳದವರು ಮಾಡಿದ್ದಾರೆ ಇದನ್ನು ಎಂದರೆ ಇದು ಕೋಮು ಪ್ರಚೋದಕ ವಿಷಯವೇ ಆಗಿದೆ. ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಮುಂದೆ ಇಂಥದನ್ನು ಆಗಲು ಬಿಡುವುದಿಲ್ಲ ಎಂದಿದ್ದಾರೆ. ಈಗ ದಾಳಿ ಮಾಡಿರುವವರ ಮೇಲೆ ಕ್ರಮ ಏಕಿಲ್ಲ. ಇನ್ನು ನಳಿನ್ ಕುಮಾರ್ ಕಟೀಲ್ ಹಿಂದೆ ಎತ್ತಿನ ಹೊಳೆ ಸಂಬಂಧವಾಗಿ ಗಲಾಟೆ ಮಾಡಿದ್ದರು. ಈಗ ಬೆಂಬಲ ನೀಡುತ್ತಿದ್ದಾರೆ. ಅವರ ನಿಜ ನಿಲುವು ಏನು ಬೇಕಾಗಿದೆ. ಇನ್ನು ಮೋದಿಯವರ ಹೊಸ ಶಿಕ್ಷಣ ನೀತಿಯು ಜನವಿರೋಧಿ, ಸಂವಿಧಾನ ವಿರೋಧಿ ಆಗಿದೆ. ಬರೇ 2% ಮಾತ್ರ ಇದ್ದ ಶಿಕ್ಷಣ ಪ್ರಮಾಣವನ್ನು ಕಾಂಗ್ರೆಸ್ ಹಳೆಯ ವಿಧಾನದಲ್ಲಿಯೇ 70%  ದಾಟಿಸಿದ್ದೇವೆ. ಅಷ್ಟು ತುರ್ತಾಗಿ ಹೊಸ ಶಿಕ್ಷಣ ನೀತಿಯ ಅಗತ್ಯವೇನು ಎಂದು ಹರೀಶ್ ಕುಮಾರ್ ಪ್ರಶ್ನಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶಶಿಧರ ಹೆಗ್ಡೆ, ಪ್ರಕಾಶ್ ಸಾಲಿಯಾನ್, ಸಾಹುಲ್ ಹಮೀದ್, ಡಿ. ಕೆ. ಸುಧೀರ್, ನವೀನ್ ಡಿಸೋಜಾ, ಪೂಜಾರಿ, ನೀರಜ್ ಪಾಲ್ ಮೊದಲಾದವರು ಉಪಸ್ಥಿತರಿದ್ದರು.