ಉಡುಪಿ, ಸೆಪ್ಟಂಬರ್ 30: ಎಂ.ಟಿ.ಆರ್ ಸಂಸ್ಥೆಯು ಸಿಎಸ್ಆರ್ ಚಟುವಟಿಕೆಯಡಿ 50 ಲಕ್ಷ ರೂಗಳಲ್ಲಿ ಒಂದು ಹವಾನಿಯಂತ್ರಿತ ವೆಂಟಿಲೇಟರ್ ಸೌಲಭ್ಯವನ್ನು ಒಳಗೊಂಡ ಅತ್ಯಾಧುನಿಕ ಆ್ಯಂಬುಲೆನ್ಸ್ ಹಾಗೂ 10 ಐಸಿಯು ಬೆಡ್ಗಳನ್ನು ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ ಅವರ ಸಮ್ಮುಖದಲ್ಲಿ ಜಿಲ್ಲಾಸ್ಪತ್ರೆಗೆ, ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ಇಂದು ಹಸ್ತಾಂತರಿಸಲಾಯಿತು.

ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಮಾತನಾಡಿ, ಜಿಲ್ಲೆಯಲ್ಲಿ ಸಾರ್ವಜನಿಕ ಆರೋಗ್ಯ ಸೇವೆಗೆ ಅನುಕೂಲವಾಗುವಂತೆ ಜಿಲ್ಲೆಯ ವಿವಿಧ ಖಾಸಗಿ ಸಂಸ್ಥೆಗಳು, ದಾನಿಗಳು ಸಹಕಾರ ನೀಡುತ್ತಿದ್ದು ಆ ನಿಟ್ಟಿನಲ್ಲಿ ಎಂಟಿಆರ್ ಫುಡ್ ಸಂಸ್ಥೆಯು ಪ್ರಸ್ತುತ ಅವಶ್ಯವಿರುವ ಮತ್ತು ಕೋವಿಡ್ 3ನೇ ಅಲೆಯ ಮುಂಜಾಗ್ರತೆಯ ದೃಷ್ಟಿಯಿಂದ 50 ಲಕ್ಷ ರೂಗಳಲ್ಲಿ ನೆರವು ನೀಡಿರುವುದು ಜಿಲ್ಲಾಭಿವೃದ್ಧಿಗೆ ಮತ್ತಷ್ಟು ಪುಷ್ಟಿ ನೀಡಿದಂತಾಗಿದೆ ಎಂದರು.

ಎಂಟಿಆರ್ ಸಂಸ್ಥೆಯ ಜನರಲ್ ಬ್ಯುಸಿನೆಸ್ ಮ್ಯಾನೇಜರ್ ಮೂರ್ತಿ ಆರ್ ಮಾತನಾಡಿ, ಎಂ.ಟಿ.ಆರ್ ಸಂಸ್ಥೆಯು ಸಾರ್ವಜನಿಕರ ಸೇವೆಯನ್ನು ಮಾಡುವುದು ಸಂಸ್ಥೆಯ ಮುಖ್ಯ ಗುರಿ ಹೊಂದಿದ್ದು, ಒಂದು ವರ್ಷದ ಗ್ಯಾರೆಂಟಿ ಮತ್ತು ವಾರೆಂಟಿ, ಉಚಿತ ಸರ್ವಿಸ್ ಇರುವ ಸುಸಜ್ಜಿತ ಆ್ಯಂಬುಲೆನ್ಸ್ ಹಾಗೂ 10 ವೆಂಟಿಲೇಟರ್ ಬೆಡ್ಗಳನ್ನು ಜಿಲ್ಲಾಡಳಿತಕ್ಕೆ ನೀಡಲಾಗಿದೆ, ಸಾರ್ವಜನಿಕರು ಸೂಕ್ತ ರೀತಿಯಲ್ಲಿ ಇದರ ಉಪಯೋಗ ಪಡೆದುಕೊಂಡಲ್ಲಿ ಸಂಸ್ಥೆಯ ಕೊಡುಗೆಗೆ ಮಹತ್ವ ಸಿಕ್ಕಂತಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಜಿ.ಪಂ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್ ವೈ, ಡಿ.ಹೆಚ್.ಓ ಡಾ. ನಾಗಭೂಷಣ್ ಉಡುಪ, ಜಿಲ್ಲಾ ಸರ್ಜನ್ ಡಾ. ಮಧುಸೂಧನ್ ನಾಯಕ್, ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ ಪ್ರಶಾಂತ್ ಭಟ್, ಎಂ.ಟಿ.ಆರ್ ಸಂಸ್ಥೆಯ ಮುಖ್ಯಾಧಿಕಾರಿ ಪ್ರಕಾಶ್ ದೇಬಶೆಟ್ಟಿ, ಸಂಸ್ಥೆಯ ಏರಿಯಾ ಸೇಲ್ಸ್ ಮ್ಯಾನೇಜರ್ ಆಶಿಶ್ ಭಂಡಾರಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.