ಉಡುಪಿ: ಉಡುಪಿ ಜಿಲ್ಲಾಡಳಿತ, ಜಿ.ಪಂ. ಹಾಗೂ ತೋಟಗಾರಿಕಾ ಇಲಾಖೆ ವತಿಯಿಂದ ಮೂರು ದಿನಗಳ ಕಾಲ ದೊಡ್ಡನಗುಡ್ಡೆಯ ಪುಷ್ಪ ಹರಾಜು ಕೇಂದ್ರದ ಆವರಣದಲ್ಲಿ ನಡೆಯುವ ಫಲ ಪುಷ್ಪ ಪ್ರದರ್ಶನವನ್ನು ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ ಕೆ. ಉದ್ಘಾಟಿಸಿದರು.

ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ ಕೆ. ಮಾತನಾಡಿ, ರಾಜ್ಯ ಸರಕಾರದ ಪಂಚ ಗ್ಯಾರಂಟಿ ಪರಿಕಲ್ಪನೆಯನ್ನು ಉಡುಪಿಯ ಫಲ ಪುಷ್ಪ ಪ್ರದರ್ಶನದಲ್ಲಿ ಹೂವುಗಳ ಕಲಾಕೃತಿಯನ್ನು ಕಲಾವಿದರು ಸಾಕಾರಗೊಳಿಸಿದ್ದು ಅನಾವರಣ ಮಾಡಲಾಗಿದೆ. ಅವು ಆಕರ್ಷಣೆ ಕೇಂದ್ರಬಿಂದು ಆಗಿದೆ ಸಾರ್ವಜನಿಕರಿಗೆ ಮುಕ್ತ ವೀಕ್ಷಣೆಗೆ ಅವಕಾಶ ಇದೆ ಎಂದರು.

ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳು ಹೂವುಗಳ ಕಲಾಕೃತಿಯಿಂದ ಅರಳಿ ಜನರ ಗಮನ ಸೆಳೆಯುತ್ತಿವೆ, ಸೆಲ್ಫಿ ಆಕರ್ಷಣೆ ಕೇಂದ್ರ ಬಿಂದುಗಳಾಗಿವೆ.ಹಳದಿ, ಕೆಂಪು ಗುಲಾಬಿಯಲ್ಲಿ ಮೂಡಿದ ಕರ್ನಾಟಕ ನಕಾಶೆ, ಹೂವಿನಿಂದ ಮಾಡಿದ ಮಾವಿನ ಹಣ್ಣಿನ ಕಲಾಕೃತಿಯ ಸೆಲ್ಫಿ ವಲಯ, ಸ್ಥಳೀಯವಾಗಿ ಬೆಳೆದ ತರಕಾರಿ, ಹಣ್ಣುಹಂಪಲು, 1.27ಲಕ್ಷದಷ್ಟು ಬಣ್ಣಬಣ್ಣದ ಹೂವಿನ ಗಿಡಗಳು ಗಮನಸೆಳೆದವು. 

ಅನ್ನ ಭಾಗ್ಯದ ಅಕ್ಷಯ ಪಾತ್ರೆಗೆ ಹೂವಿನ್ ಅಲಂಕಾರ, ಯುವ ನಿಧಿ ಯೋಜನೆ ಮುಂದೆ ಪದವೀಧರ ಮೂರ್ತಿ, ವಿದ್ಯುತ್ ಬಲ್ಬ್ ಮಾದರಿಯಲ್ಲಿ ಹೂವಿನ ಅಲಂಕಾರ ಸಹಿತ ಗೃಹ ಜ್ಯೋತಿ, ಶಕ್ತಿ ಯೋಜನೆ ಸಂಕೇತವಾದ ಕೆಂಪು ಬಸ್, ಗೃಹ ಲಕ್ಷ್ಮೀ ಮಹಿಳೆ ಬಳಿ ರಾಶಿ ಬಿದ್ದ ದುಡ್ಡು ...ಪಂಚ ಗ್ಯಾರಂಟಿಗಳನ್ನು ಬಿಂಬಿಸಿತು. 

ಎಸ್ಪಿ ಡಾ. ಅರುಣ್ ಕೆ., ಜಿ.ಪಂ.ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಪ್ರತೀಕ್ ಬಾಯಲ್, ತೋಟಗಾರಿಕಾ ಇಲಾಖೆ ಉಪನಿರ್ದೇಶಕಿ ಭುವನೇಶ್ವರಿ, ಸಹಾಯಕ ತೋಟಗಾರಿಕಾ ನಿರ್ದೇಶಕ ಗುರುಪ್ರಸಾದ್, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು ಉಪಸ್ಥಿತರಿದ್ದರು.