ಮುಂಬಯಿ: ಬಿಲ್ಲವ ಸಮಾಜದ ಮಹಾ ನಾಯಕ ಜಯ ಸಿ. ಸುವರ್ಣ ಅವರು ಸ್ಥಾಪಿಸಿರುವ ಜಯಲೀಲಾ ಟ್ರಸ್ಟ್ ನ ವತಿಯಿಂದ ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಅರ್ಹ ಸಂಶೋಧನ ವಿದ್ಯಾರ್ಥಿಗಳಿಗೆ ಕಳೆದ ವರ್ಷದಿಂದ ಗೌರವಧನವನ್ನು ನೀಡಲಾಗುತ್ತಿದೆ.
ಈ ಸಾಲಿನ ಗೌರವಧನ ವಿತರಣೆ ಕಾರ್ಯಕ್ರಮ ಇದೇ ಬರುವ ಮಾರ್ಚ್ ಒಂದರಂದು ಮುಂಬಯಿ ವಿಶ್ವವಿದ್ಯಾಲಯದ ಜೆ.ಪಿ.ನಾಯಕ್ ಭವನದಲ್ಲಿ ನಡೆಯಲಿರುವ ವಿಶೇಷ ಕಾರ್ಯಕ್ರಮದಲ್ಲಿ ಸಂಶೋಧನ ವಿದ್ಯಾರ್ಥಿಗಳಿಗೆ ಹಸ್ತಾಂತರಿಸಲಾಗುವುದು ಎಂದು ಜಯಲೀಲಾ ಟ್ರಸ್ಟ್ ನ ವ್ಯವಸ್ಥಾಪಕರಾದ ಸೂರ್ಯಕಾಂತ್ ಜಯ ಸುವರ್ಣ ಅವರು ತಿಳಿಸಿದ್ದಾರೆ.
ಜಯ ಸುವರ್ಣರು ಇಪ್ಪತ್ತೊಂದು ವರ್ಷಗಳ ಕಾಲ ಬಿಲ್ಲವರ ಎಸೋಸಿಯೇಶನ್ನ ಅಧ್ಯಕ್ಷರಾಗಿ, ಹದಿನೆಂಟು ವರ್ಷಗಳ ಕಾಲ ಭಾರತ್ ಕೋ-ಆಪರೇಟಿವ್ ಬ್ಯಾಂಕ್ನ ಕಾರ್ಯಾಧ್ಯಕ್ಷರಾಗಿ, ಇಪ್ಪತ್ತನಾಲ್ಕು ವರ್ಷಗಳ ಕಾಲ ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುವ ಮೂಲಕ ಬಿಲ್ಲವ ಸಮಾಜಕ್ಕೆ ಉನ್ನತ ಸ್ಥಾನಮಾನವನ್ನು ಕಲ್ಪಿಸಿಕೊಟ್ಟಿದ್ದಾರೆ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಜಯ ಸುವರ್ಣರ ಕೊಡುಗೆ ಗಣನೀಯವಾದುದು. ಅಸಾಹಯಕರ ನೋವಿಗೆ ಸ್ಪಂದಿಸುತ್ತ, ತನ್ನಿಂದ ಸಾಧ್ಯವಾದಷ್ಟು ಸಹಕರಿಸುತ್ತ ತಮ್ಮ ಜೀವಮಾನವಿಡೀ ಮಾನವೀಯತೆಯನ್ನು ಮೆರೆದವರು. ಅವರು ಎರಡು ದಶಕಗಳ ಹಿಂದೆ ಸ್ಥಾಪಿಸಿರುವ ಜಯಲೀಲಾ ಟ್ರಸ್ಟ್ನ ಮುಖಾಂತರ ಪ್ರತೀವರ್ಷ ಎಂಟರಿಂದ ಹತ್ತು ಲಕ್ಷ ರೂಪಾಯಿಗಳವರೆಗೆ ಜಾತಿ, ಮತ, ಭೇದವಿಲ್ಲದೆ ಶಿಕ್ಷಣ ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ಸಹಾಯಧನವನ್ನು ಬಡ ಮತ್ತು ಅರ್ಹ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ಅಲ್ಲದೆ ಹಲವಾರು ಮಕ್ಕಳ ಶಿಕ್ಷಣದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡು ಅವರ ಭವಿಷ್ಯವನ್ನು ರೂಪಿಸಿದ ಫಲವಾಗಿ, ಅವರೀಗ ದೇಶ ವಿದೇಶಗಳಲ್ಲಿ ಉನ್ನತ ಹುದ್ದೆ ಮತ್ತು ಸ್ಥಾನಮಾನಗಳನ್ನು ಪಡೆದುಕೊಂಡಿದ್ದಾರೆ. ಸುವರ್ಣರು ಇಂಥ ಕೆಲಸಕಾರ್ಯಗಳನ್ನು ಯಾರಿಗೂ ತಿಳಿಯದಂತೆ ತೆರೆಮರೆಯಲ್ಲಿಯೇ ಮಾಡುತ್ತ ಬಂದವರು.
‘ಮಹಾರಾಷ್ಟ್ರದಲ್ಲಿ ಇದ್ದುಕೊಂಡು ಕನ್ನಡವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಕಾರ್ಯ ಪ್ರಶಂಸನೀಯವಾದುದು. ಜಯಲೀಲಾ ಟ್ರಸ್ಟ್ ನ ಮುಖಾಂತರ ಅಳಿಲು ಸೇವೆಯನ್ನು ಮಾಡುವ ಅವಕಾಶ ದೊರಕಿದ್ದು ನಮ್ಮ ಸೌಭಾಗ್ಯ’ ಎನ್ನುವ ಭಾರತ್ ಕೋ-ಆಪರೇಟಿವ್ ಬ್ಯಾಂಕ್ ನ ಸೂರ್ಯಕಾಂತ್ ಜಯ. ಸುವರ್ಣ ಅವರು ತಮ್ಮ ತಂದೆಯಂತೆಯೇ ಸಮಾಜ ಸೇವಾ ಕಾರ್ಯವನ್ನು ಶ್ರದ್ಧೆಯಿಂದ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
ಕನ್ನಡ ಉನ್ನತ ಶಿಕ್ಷಣ, ಸಂಶೋಧನೆಗೆ ಈಗ ಸರಕಾರದ ವಿವಿಯ ಯಾವುದೇ ನೆರವು ಸಿಕುತ್ತಿಲ್ಲ. ಈ ಹೊತ್ತಿನಲ್ಲಿ ಸೂರ್ಯಕಾಂತ ಜಯ ಸುವರ್ಣ ಪರಿವಾರದವರು ವಿಭಾಗದ ಬೆಂಬಲಕ್ಕೆ ನಿಂತಿರುವುದು ಆಶಾದಾಯಕ ಬೆಳವಣಿಗೆ. ಅವರಿಗೆ ವಿಭಾಗ ಋಣಿಯಾಗಿದೆ ಎಂಬುದಾಗಿ ವಿಭಾಗದ ಮುಖ್ಯಸ್ಥ ಪ್ರೊ. ಜಿ. ಎನ್. ಉಪಾಧ್ಯ ಅವರು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.