ಮುಂಬಯಿ, ನ. 17: ಗೋಕುಲ ಶ್ರೀ ಗೋಪಾಲಕೃಷ್ಣ ದೇವರ ಸನ್ನಿಧಾನದಲ್ಲಿ ಕಳೆದ ಎರಡು ವರ್ಷಗಳಿಂದ ನಡೆಯುತ್ತಾ ಬಂದಂತೆ ಈ ಬಾರಿಯೂ ಕಾರ್ತಿಕ ಮಾಸ ಪರ್ವಕಾಲದಲ್ಲಿ ವರ್ಣರಂಜಿತ ಕಾರ್ತಿಕ ದೀಪೋತ್ಸವವು ರವಿವಾರ (ನ.16) ರಂದು ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಮತ್ತು ಬಿಎಸ್ಕೆಬಿ ಎಸೋಸಿಯೇಶನ್ ನ ಸಂಯುಕ್ತ ಆಯೋಜನೆಯಲ್ಲಿ ಅತ್ಯಂತ ವೈಭವೋಪೇತವಾಗಿ ಜರಗಿತು.

ಗೋಕುಲ ಶ್ರೀ ಗೋಪಾಲಕೃಷ್ಣನ ದಿವ್ಯ ಮೂರ್ತಿಯನ್ನು ಅರ್ಚಕರಾದ ವೇದಮೂರ್ತಿ ಗಣೇಶ್ ಭಟ್ ಅವರು ವಿಶೇಷ ತುಳಸಿ ಪುಷ್ಪಾಹಾರಗಳಿಂದ ಮನಮೋಹಕವಾಗಿ ಅಲಂಕರಿಸಿದ್ದರು. ಸಂಜೆ ಮಂಗಳವಾದ್ಯದೊಂದಿಗೆ ದೇವಾಲಯದ ದ್ವಾರ ತೆಗೆದು ದೀಪೋತ್ಸವ ಸಂಭ್ರಮವು ದೇಗುಲದಲ್ಲಿ ರಾತ್ರಿ ಪೂಜೆಯಾದ ನಂತರ ಪ್ರಧಾನ ಅರ್ಚಕರಾದ ವೇ. ಮೂ. ದರೆಗುಡ್ಡೆ ಶ್ರೀನಿವಾಸ್ ಭಟ್ ಸಾಂಪ್ರದಾಯಿಕವಾಗಿ ದೀಪ ಪ್ರಜ್ವಲನೆ ಮಾಡುವುದರೊಂದಿಗೆ ದೀಪೋತ್ಸವಕ್ಕೆ ಶುಭಾರಂಭಗೈದರು. ಬಿಎಸ್ಕೆಬಿಎ ಅಧ್ಯಕ್ಷ ಡಾ| ಸುರೇಶ್ ರಾವ್ ಮತ್ತು ಪದಾಧಿಕಾರಿಗಳು, ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ವಿಶ್ವಸ್ಥ ಮಂಡಳಿ, ದೀಪ ಬೆಳಗಿಸಿದ ನಂತರ ನೆರೆದ ನೂರಾರು ಸೇವಾರ್ಥಿಗಳು ದೇವಾಲಯದ ಒಳ ಹಾಗೂ ಹೊರಾಂಗಣದಲ್ಲಿ ವ್ಯವಸ್ಥಿತವಾಗಿ ಸಿದ್ಧಪಡಿಸಿಟ್ಟ ಹಣತೆಗಳಲ್ಲಿ ಸಹಸ್ರಾರು ದೀಪ ಬೆಳಗಿಸಿ ಸೇವೆಗೈದರು. ಶ್ರೀ ದೇವರಿಗೆ ರಂಗ ಪೂಜಾ ಸೇವೆಯಾದ ನಂತರ ಅರ್ಚಕರು ವೇ.ಮೂ. ಗಣೇಶ್ ಭಟ್ ರವರು ಅಲಂಕೃತ ಉತ್ಸವ ಮೂರ್ತಿಯನ್ನು ಮಂತ್ರ ಘೋಷ, ಚೆಂಡೆ, ವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ತಂದು ವಿವಿಧ ತರಕಾರಿ, ಫಲ, ಪುಷ್ಪಗಳಿಂದ ವಿಶೇಷವಾಗಿ ನಿರ್ಮಿಸಿದ ಅಲಂಕೃತ ಮಂಟಪದಲ್ಲಿ ಪ್ರತಿಷ್ಠಾಪಿಸಿದರು. ವೇ.ಮೂ. ದರೆಗುಡ್ಡೆ ಶ್ರೀನಿವಾಸ್ ಭಟ್ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಮಹಾ ಮಂಗಳಾರತಿ ಗೈದರು. ನಂತರ ವೇ.ಮೂ. ಗಣೇಶ್ ಭಟ್ ನೇತೃತ್ವದಲ್ಲಿ, ಪುರೋಹಿತ ವರ್ಗದವರಿಂದ ವೇದೋಪನಿಷತ್ತು, ನೃತ್ಯ, ಸಂಗೀತ, ಯಕ್ಷ ನೃತ್ಯ, ಭಜನೆ ಇತ್ಯಾದಿ, ಅಷ್ಠಾವಧಾನ ಸೇವೆ ಜರಗಿತು. ತದನಂತರ ಉತ್ಸವ ಮೂರ್ತಿಯನ್ನು ಗರ್ಭಗೃಹದಲ್ಲಿರಿಸಿ ಮಂಗಳಾರತಿ ಬೆಳಗಿ, ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿತರಿಸಲಾಯಿತು.




ಗೋಕುಲ ಮಹಾದ್ವಾರ, ತೀರ್ಥ ಮಂಟಪ, ಗರ್ಭ ಗೃಹ, ಗೋಕುಲ ಸಭಾಗೃಹ ವಿಶೇಷ ಪುಷ್ಪಾಲಂಕಾರಗಳಿಂದ ಹಾಗೂ ವಿಶೇಷ ಮಂಟಪವು ವೈವಿಧ್ಯಮಯ ತರಕಾರಿ, ಫಲ ಪುಷ್ಪಗಳಿಂದ ಅಲಂಕೃತಗೊಂಡು ಕಂಗೊಳಿಸುತ್ತಿತ್ತು. ಗೋಕುಲ ಸಭಾಗೃಹ ಹಲವಾರು ಗಣ್ಯಾತಿಗಣ್ಯರ ಸಹಿತ ಕಿಕ್ಕಿರಿದು ನೆರೆದ ಅಪಾರ ಭಕ್ತಾದಿಗಳಿಂದ ತುಂಬಿ ತುಳುಕುತ್ತಿತ್ತು. ಸುಮಾರು ೫೦೦ ಕ್ಕೂ ಮಿಕ್ಕಿ ನೆರೆದ ಭಕ್ತಾದಿಗಳಿಗೆ, ಪೂಜಾ ಸಮಿತಿ, ಸ್ವಯಂ ಸೇವಕರ ಮತ್ತು ಆಹಾರ ಸಮಿತಿಯ ಉಸ್ತುವಾರಿಯಲ್ಲಿ ಪ್ರಸಾದ ವಿತರಣೆ, ಪ್ರಸಾದ ಭೋಜನ ವ್ಯವಸ್ಥಿತವಾಗಿ ಜರಗಿ ಚಿರಸ್ಮರಣೀಯ ಕಾರ್ತಿಕ ದೀಪೋತ್ಸವ ಸಂಪನ್ನಗೊಂಡಿತು.