ನೂರಕ್ಕೂ ಹೆಚ್ಚು ಹೆಸರುಗಳು ಇರುವ ತೇವು ಇಲ್ಲವೇ ಕೆಸುವನ್ನು ಕೊಂಗಣ (ಆಗ್ನೇಯ) ಏಶಿಯಾ,  ಆಫ್ರಿಕಾಗಳಲ್ಲಿ ಪ್ರಮುಖ ಆಹಾರವಾಗಿ ಬಳಸುತ್ತ ಸಾವಿರಾರು ವರುಷಗಳಿಂದ ಬೆಳೆಯುತ್ತಿದ್ದಾರೆ.

ಇದರ ಗಡ್ಡೆಯನ್ನು ಮುಖ್ಯ ಆಹಾರವಾಗಿಯೇ ನಾನಾ ರೀತಿಯಲ್ಲಿ ಅಲ್ಲೆಲ್ಲ ಬಳಸುತ್ತಾರೆ. ತುಳುವರು ತಾನಾಗಿ ಬೆಳೆಯುವ ಕೆಸುವನ್ನು ಬಳಸುತ್ತಾರೆ. ಅದೂ ಎಲೆಯನ್ನು. ಈಗೀಗ ಬೆಳೆಸುವ ಜಾತಿಯವು ಬಳಕೆಗೆ ಬರುತ್ತಿವೆ.

ಮಂಗಳೂರಿನ ತೇರು ಬೀದಿಯಲ್ಲಿ ಮಳೆಗಾಲದ ಸೊಪ್ಪುಗಳು ಮಾರಾಟಕ್ಕೆ ಬರುತ್ತವೆ. ಅವುಗಳಲ್ಲಿ ತೇವು ಎಲೆಯೂ ಸೇರಿದೆ.

ಏರೇಸೀ ಕುಟುಂಬದ ಇದು ಹಿಂದೆ ತುಳುನಾಡಿನ ಎಲ್ಲೆಲ್ಲೂ ಸಿಗುತ್ತಿತ್ತು. ಮಳೆಗಾಲದಲ್ಲಿ ತಾನಾಗಿ‌ ಬೆಳೆಯುತ್ತಿತ್ತು. ಮಂಗಳೂರಿನ ಕೊಡಿಯಾಲಬೈಲ್ ಗದ್ದೆಗಳಲ್ಲಿ ಭತ್ತ ಬೆಳೆಯುವುದು ಬಿಟ್ಟ ಮೇಲೆ ಅದು ಕೆಸು ವನ ಆಗಿತ್ತು. ಈಗ ಕಟ್ಟಡ ವನ ಆಗಿದೆ.

ಪತ್ರೊಡೆ= ಪತ್ತವುನ ಹಚ್ಚುವ ಅಡ್ಯೆ ಪತ್ರಡ್ಯೆ ತುಳುವರು ಆಷಾಡ ಮಾಸದಲ್ಲಿ ಮಾಡಿಯೇ ಮಾಡುತ್ತಾರೆ.

ಅಕ್ಕಿ ಗಟ್ಟಿ ರುಬ್ಬಿದ್ದನ್ನು ಕೆಸು ಎಲೆಗೆ ಹಚ್ಚಿ ಅದನ್ನು ಚಾಪೆಯಂತೆ ಮಡಚಿ ಬೇಯಿಸಿ, ಕತ್ತರಿಸಿ ಮಸಾಲೆಯುಕ್ತ ಮಾಡುವುದೇ ಪತ್ರೊಡೆ. ಒಂದು ಕಡೆದ ಮಸಾಲೆಯಲ್ಲಿ ಕುದಿಸುವುದು, ಇನ್ನೊಂದು ಎಣ್ಣೆಯ ಮಸಾಲೆಯಲ್ಲಿ ಹುರಿಯುವುದು.

Article By

- Perooru Jaru