ಮಂಗಳೂರು: ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಪತ್ರಕರ್ತರು ಮತ್ತು ಜನಸಾಮಾನ್ಯರ ಮೇಲೆ ಹಲ್ಲೆ, ದೌರ್ಜನ್ಯ ನಡೆಯುತ್ತಿರುವುದನ್ನು ಖಂಡಿಸಿ, ಪತ್ರಕರ್ತರಿಗೆ ನಿರ್ಭೀತಿಯಿಂದ ಕರ್ತವ್ಯ ನಿರ್ವಹಿಸಲು ಸೂಕ್ತ ರಕ್ಷಣೆ ನೀಡುವಂತೆ ಆಗ್ರಹಿಸಿ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಅವರಿಗೆ ಶುಕ್ರವಾರ ಪತ್ರಕರ್ತರ ನಿಯೋಗ ಮನವಿ ಸಲ್ಲಿಸಿತು.
ಟೋಲ್ಗೇಟ್ಗಳಲ್ಲಿ ಸಿಬ್ಬಂದಿಗಳು ಪತ್ರಕರ್ತರು ಸಹಿತ ಸಾರ್ವಜನಿಕರ ಮೇಲೆ ಹಲ್ಲೆ ನಡೆಸುತ್ತಿರುವ ಕೃತ್ಯಗಳು ಹೆಚ್ಚಿವೆ. ಪೊಲೀಸ್ ಇಲಾಖೆ ಈ ಕುರಿತು ಸೂಕ್ತ ಕ್ರಮ ಜರುಗಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಮನವಿ ಮಾಡಿದರು.
ಈ ಸಂದರ್ಭ ರಾಷ್ಟ್ರೀಯ ಪತ್ರಕರ್ತರ ಸಂಘದ ಸದಸ್ಯ ಪಿ.ಬಿ.ಹರೀಶ್ ರೈ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್., ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್., ಉಪಾಧ್ಯಕ್ಷರುಗಳಾದ ಭಾಸ್ಕರ ರೈ ಕಟ್ಟ, ರಾಜೇಶ್ ಕೆ.ಪೂಜಾರಿ, ಕಾರ್ಯದರ್ಶಿ ವಿಜಯ್ ಕೋಟ್ಯಾನ್, ಸದಸ್ಯರುಗಳಾದ ಕೆ.ವಿಲ್ಫ್ರೆಡ್ ಡಿಸೋಜ, ಸುಖ್ಪಾಲ್ ಪೊಳಲಿ, ಭರತ್ರಾಜ್, ರಾಜೇಶ್ ಕುಮಾರ್ ದಡ್ಡಂಗಡಿ, ಅಶೋಕ್ ಶೆಟ್ಟಿ ಬಿ.ಎನ್., ಸಂದೇಶ್ ಜಾರ, ರಾಜೇಶ್ ಶೆಟ್ಟಿ ಇದ್ದರು.