ಮೂಡುಬಿದಿರೆ: ಆಳ್ವಾಸ್ ಪದವಿ ಪೂರ್ವ ಕಾಲೇಜಿನ 2025ರ ಶೈಕ್ಷಣಿಕ ಸಾಲಿನ ಸ್ಥಳೀಯ ವಿದ್ಯಾರ್ಥಿಗಳ ಶಿಕ್ಷಕ-ಪಾಲಕ-ವಿದ್ಯಾರ್ಥಿಗಳ ಪ್ರಥಮ ಸಭೆಯನ್ನು ವಿ.ಎಸ್. ಆಚಾರ್ಯ ವೇದಿಕೆಯಲ್ಲಿ ಆಯೋಜಿಸಲಾಗಿತ್ತು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ ಮಾತನಾಡಿ, ಪದವಿ ಪೂರ್ವ ಶಿಕ್ಷಣ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ. ಇದು ಅವರ ಮುಂದಿನ ಉನ್ನತ ಶಿಕ್ಷಣ ಹಾಗೂ ವೃತ್ತಿಜೀವನದ ದಿಕ್ಕನ್ನು ತೀರ್ಮಾನಿಸುತ್ತದೆ. ಈ ಹಂತದಲ್ಲಿ ವಿದ್ಯಾರ್ಥಿಗಳು ತಮ್ಮ ಆಸಕ್ತಿ ಕ್ಷೇತ್ರವನ್ನು ಗುರುತಿಸಿ, ಗುರಿ ಮುಟ್ಟುವೆಡೆಗೆ ಶ್ರಮಿಸಬೇಕು. ಈ ಪ್ರಯಾಣದಲ್ಲಿ ವಿದ್ಯಾರ್ಥಿಗಳೊಂದಿಗೆ ಪೋಷಕರು, ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಗಳ ಪಾತ್ರವು ಬಹಳ ಮಹತ್ವದ್ದಾಗಿದೆ ಎಂದರು. ಅಲ್ಲದೆ, ಪ್ರತಿಯೊಬ್ಬ ವಿದ್ಯಾರ್ಥಿಯು ತನ್ನದೇ ಆದ ಆಸಕ್ತಿಯ ಕ್ಷೇತ್ರದಲ್ಲಿ ಬೆಳೆಯುತ್ತಾನೆ. ಹಾಗಾಗಿ ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ಅಳೆಯುವುದು ಸೂಕ್ತವಲ್ಲ ಎಂದರು.
ಮನಸ್ಸಿನ ಸಮತೋಲನ ಅಗತ್ಯ
"ಬಾಲ್ಯಾವಸ್ಥೆಗಿಂತ ಪ್ರೌಢಾವಸ್ಥೆ ವಿಭಿನ್ನ ಮನೋಧರ್ಮದಿಂದ ಕೂಡಿರುತ್ತದೆ. ದೈಹಿಕವಾಗಿ ಶಕ್ತಿಶಾಲಿಯಾದರೂ, ಮನಸ್ಸು ಚಂಚಲವಾಗಿರುತ್ತದೆ. ಆದ್ದರಿಂದ ಸಮತೋಲನ ಕಾಯ್ದುಕೊಳ್ಳುವುದು ಮುಖ್ಯ. ಅಧ್ಯಯನ ಸಮಯವನ್ನು ಕಟ್ಟುನಿಟ್ಟಾಗಿ ನಿರ್ವಹಿಸಿ, ಪ್ರತಿಯೊಂದು ವಿಷಯಕ್ಕೂ ಸಮಾನ ಮಹತ್ವ ನೀಡಿ ಎಂದರು.
ಶಿಸ್ತು ಮತ್ತು ಸಮಯದ ಮೌಲ್ಯ ಅರಿಯಿರಿ
ಆರೋಗ್ಯದ ವಿಷಯದಲ್ಲೂ ಜಾಗೃತಿ ಅಗತ್ಯ. ಕಳೆದುಹೋದ ಸಮಯ ಮರಳದು. ಆದ್ದರಿಂದ ಸಮಯದ ಮೌಲ್ಯವನ್ನು ಅರ್ಥಮಾಡಿಕೊಳ್ಳಿ ಮತ್ತು ಶಿಸ್ತುಬದ್ಧ ಜೀವನ ನಡೆಸಿರಿ,” ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಮೊಹಮ್ಮದ್ ಸದಾಕತ್, ಉಪಪ್ರಾಂಶುಪಾಲೆ ಝಾನ್ಸಿ ಪಿ.ಎನ್., ಸಂಯೋಜಕಿ ವಿದ್ಯಾ ಇದ್ದರು. ಕಾರ್ಯಕ್ರಮವನ್ನು ಇಂಗ್ಲಿಷ್ ಉಪನ್ಯಾಸಕ ರಾಜೇಶ್ ಡಿಸೋಜ ನಿರೂಪಿಸಿದರು.