ಮಂಗಳೂರು: ವಿಶ್ವ ಕೊಂಕಣಿ ಕೇಂದ್ರ , ಶಕ್ತಿನಗರ ಮಂಗಳೂರು ಜೂಲೈ 12 ರಂದು ಕರ್ನಾಟಕ – ಕೇರಳ- ಗೋವಾ ಈ ಮೂರು ರಾಜ್ಯಗಳಲ್ಲಿ ಹಂಚಿಹೋಗಿರುವ ಕೊಂಕಣಿ ಕುಡುಬಿ ಸಮಾಜವನ್ನು ಪ್ರತಿನಿಧಿಸುವ ಅನೇಕ ಮುಖಂಡರು ವಿಶ್ವ ಕೊಂಕಣಿ ಕೇಂದ್ರದಲ್ಲಿ ಒಟ್ಟು ಸೇರಿ ಒಂದು ಚಿಂತನ ಸಭೆಯನ್ನು ನಡೆಸಿ ತಮ್ಮ ಸಮುದಾಯದ ಭಾಷಿಕ- ಸಾಮಾಜಿಕ- ಆರ್ಥಿಕ ಸ್ಥಿತಿಗತಿಗಳನ್ನು ಉನ್ನತೀಕರಿಸುವ ಬಗ್ಗೆ ಚಿಂತನೆ ನಡೆಸಿದರು. ಮೂರು ರಾಜ್ಯಗಳ ಮಧ್ಯೆ ಜನಪದೀಯ ಸಮಾನತೆ ಇದ್ದರೂ ಸರಕಾರಿ ಸೌಲಭ್ಯ , ಮೀಸಲಾತಿ ಸೌಲಭ್ಯದಲ್ಲಿ ಅಗಾಧ ವ್ಯತ್ಯಾಸವಿದೆ. ಗೋವಾ ರಾಜ್ಯದಲ್ಲಿರುವ ಪರಿಶಿಷ್ಟ ಜಾತಿ ಸೌಲಭ್ಯ ಕರ್ನಾಟಕದ ಕುಡುಬಿ ಜಾತಿಗೆ ದೊರೆಯುತ್ತಿಲ್ಲ. ಕೆಲವು ಪ್ರದೇಶದಲ್ಲಿ ಕೊಂಕಣಿ ಭಾಷೆಯ ಉಪಯೋಗ ಕ್ಷೀಣಿಸುತ್ತಿದೆ. ಕುಡುಬಿ ಯುವ ಜನರಿಗೆ ಉದ್ಯೋಗ – ಕೌಶಲ್ಯ ತರಬೇತಿ- ವಿದ್ಯಾರ್ಥಿ ವೇತನ ಸೌಲಭ್ಯ ತುಂಬಾ ಅಗತ್ಯವಿದೆ. ಈ ಬಗ್ಗೆ ಸತತ ಪ್ರಯತ್ನಕ್ಕಾಗಿ ಮುಂದಿನ ಅಖಿಲ ಭಾರತ ಮಟ್ಟದ ಸಮಾವೇಶವನ್ನು ಬರುವ ನವೆಂಬರ ತಿಂಗಳಲ್ಲಿ ನಡೆಸಲು ನಿರ್ಧರಿಸಲಾಯಿತು.
ಈ ಸಂದರ್ಭದಲ್ಲಿ ಕೊಂಪದವಿನ ಪೂಜ್ಯ ಸೆಸು ಗೌಡ ಕುಡುಬಿ ಜಾನಪದ ಕಲಾ ಟ್ರಸ್ಟ್ ಹಾಗೂ ಎಡಪದವಿನ ಕುಡುಬಿ ಜಾನಪದ ಕಲಾವೇದಿಕೆ ಇವರಿಂದ ಗುಮಟಾ ನಾಚ್, ತೊಣಿಯಾ ನಾಚ್, ದೊರಿಯಾ ನಾಚ್ ಜಾನಪದ ನಾಟ್ಯ ಪ್ರದರ್ಶನ ಎಲ್ಲರ ಮೆಚ್ಚುಗೆ ಗಳಿಸಿತು.
ಗೋವಾದಿಂದ ರಾಮನಾಥ ಗಾವಡೆ, ದೇವಿದಾಸ ಗಾಂವಕರ, ಕೇರಳ ದಿಂದ ಕೊಂಕಣಿ ಸಾಹಿತ್ಯ ಅಕಾಡೆಮಿಯ ಸದಸ್ಯ ನವೀನ ಕುಮಾರ ಹಾಗೂ ಶರತ್ ಕುಮಾರ ಕುಡುಬಿ, ಬಜಪೆ ಕುಡುಬಿ ಸಮಾಜದ ಮುಖ್ಯಸ್ಥ ಮೋಹನ ಗೌಡ, ಮೋನಪ್ಪಗೌಡ, ಸುದರ್ಶನ, ಕೃಷ್ಣ ಕೊಂಪದವು, ಉಡುಪಿಯ ಪ್ರಭಾಕರ ನಾಯ್ಕ, ನಾರಾಯಣ ನಾಯ್ಕ, ವಿಚಾರ ಮಂಡನೆ ಮಾಡಿದರು.
ನ್ಯಾಯವಾದಿ ವಿಜಯ ಗೌಡ ಚರ್ಚಾ ಕೂಟದ ಸಮನ್ವಯ ನಡೆಸಿದರು. ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಸಿಎ ನಂದಗೋಪಾಲ ಶೆಣೈ ಯವರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳಾನ್ನಾಡಿದರು. ಶೇಖರ ಗೌಡ ವಂದನಾರ್ಪಣೆ ಮಾಡಿದರು.
ವಿಶ್ವ ಕೊಂಕಣಿ ಕೇಂದ್ರದ ಉಪಾಧ್ಯಕ್ಷ ವಿಲಿಯಂ ಡಿಸೋಜಾ, ರಮೇಶ ನಾಯ್ಕ, ಕಾರ್ಯದರ್ಶಿ ಕಸ್ತೂರಿ ಮೋಹನ ಪೈ, ಕೋಶಾಧಿಕಾರಿ ಬಿ ಆರ್ ಭಟ್, ಹಾಗೂ ಸಿಎಒ ಡಾ ಬಿ ದೇವದಾಸ ಪೈ ಉಪಸ್ಥಿತರಿದ್ದರು.