ಮುಂಬಯಿ, ಅ.23: ಮದರ್ ಇಂಡಿಯಾದ ಶೈಕ್ಷಣಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಸೇವೆಯು ನಿರಂತರ ಉಳಿಯುವಂತೆ ಸದಸ್ಯರು ಸಹಕರಿಸಬೇಕೆಂದು ಸುರೇಂದ್ರ ಪೂಜಾರಿ ಅವರು ನಗರದ ಕೋಟೆ ಪ್ರದೇಶದಲ್ಲಿ ಸಾಮಾಜಿಕ, ಶೈಕ್ಷಣಿಕ, ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಹೆಸರು ಪಡೆದಿರುವ ಮದರ್ ಇಂಡಿಯಾ ರಾತ್ರಿ ಶಾಲಾ ಹಳೆ ವಿದ್ಯಾರ್ಥಿ ಸಂಘದ ಸದಸ್ಯರು ಹೊಸದಾಗಿ 2022ರಲ್ಲಿ ಸ್ಥಾಪನೆ ಮಾಡಿರುವ ಹಾಗೂ ಮಹಾರಾಷ್ಟ್ರ ರಾಜ್ಯ ಸಾಮಾಜಿಕ ಸಂಘಟನೆ ಕಾಯಿದೆಯನ್ವಯ ನೋಂದಣಿಯಾಗಿರುವ ಮದರ್ ಇಂಡಿಯಾ ಎಕ್ಸ್ ಸ್ಟೂಡೆಂಟ್ಸ್ ಫೌಂಡೇಶನ್ ಇದರ ದ್ವಿತೀಯ ವಾರ್ಷಿಕ ಮಹಾಸಭೆಯು ಕಳೆದ ರವಿವಾರ (ಅ.20 ಮಾಲಾಡ್ ಪಶ್ಚಿಮದ ಮಡ್ ಐಲ್ಯಾಂಡ್ ನಲ್ಲಿರುವ ರಾವುತ್ ಕೊಟೆಜ್ ಇಲ್ಲಿ ಸಭೆಯ ಅಧ್ಯಕ್ಷತೆ ವಹಿಸಿ ಸುರೇಂದ್ರ ಪೂಜಾರಿ ಮಾತನಾಡಿದರು.

ಪ್ರಧಾನ ಕಾರ್ಯದರ್ಶಿ ಹರೀಶ್ ಮೈಂದನ್ ಅವರು ಸದಸ್ಯರನ್ನು ಸ್ವಾಗತಿಸಿ, ಸುತ್ತೋಲೆಯನ್ನು ಓದಿದರು. ಬಳಿಕ ಕಾರ್ಯಸೂಚಿಯಂತೆ ಜತೆ ಕಾರ್ಯದರ್ಶಿ ಅಶೋಕ್ ಸುವರ್ಣ ಅವರು ಪ್ರಥಮ ಮಹಾಸಭೆಯ ಟಿಪ್ಪಣಿಯನ್ನು ವಾಚಿಸಿದರು. ಕೇಶವ್ ಶೆಟ್ಟಿಗಾರ್ ಅವರ ಸೂಚನೆ ಮತ್ತು ಶಿವಾನಂದ ಬಂಗೇರ ಅವರು ಅನುಮೋದನೆ ಮತ್ತು ಮಂಜೂರಿ ಮಾಡಿದರು. ಸಹ ಕೋಶಾಧಿಕಾರಿ ಪಿ. ಬಿ. ಚಂದ್ರಹಾಸ್ ಅವರು ವಾರ್ಷಿಕ ಲೆಕ್ಕ ಪಟ್ಟಿಗಳನ್ನು ಮಂಡಿಸಿದರು. ಮಂದಾರ ಹೆಗ್ಡೆ ಅವರ ಸೂಚನೆ ಹಾಗೂ ನವೀನ್ ಅಮೀನ್ ಅವರ ಅನುಮೋದನೆಯೊಂದಿಗೆ ಸ್ವೀಕಾರವಾಯಿತು. ಸಂವಿಧಾನ ಬದ್ಧ ಲೆಕ್ಕ ಪರಿಶೋಧಕರನ್ನು ನೇಮಿಸುವ ಬಗ್ಗೆ ಕೋಶಾಧಿಕಾರಿ ಟಿ. ವಿ. ಪೂಜಾರಿ ಮಂಡಿಸಿದ ಠರಾವು ಅನ್ವಯ ಸಿ.ಎ. ಕೃಷ್ಣ ನಾಯಕ್ ಅವರನ್ನು ಸುಂದರ ಮೊಯ್ಲಿ ಅವರ ಸೂಚನೆ ಮತ್ತು ಮೋಹನ್ ಸುವರ್ಣ ಅವರ ಅನುಮೋದನೆಯೊಂದಿಗೆ ಮುಂದಿನ ವರ್ಷಕ್ಕೆ ನೇಮಕ ಮಾಡಲಾಯಿತು. ಆಂತರಿಕ ಲೆಕ್ಕ ಪರಿಶೋಧಕರಾಗಿ ಪ್ರೊ. ಮಂದಾರ ಹೆಗ್ಡೆ ಅವರನ್ನು ನೇಮಕ ಮಾಡಲಾಯಿತು.

ಫೌಂಡೇಶನ್ಗೆ ಸ್ವಂತ ಕಚೇರಿ ಖರೀದಿಸುವ ಅಗತ್ಯತೆ ಬಗ್ಗೆ ಧನ ಸಂಗ್ರಹಣೆ ಸಮಿತಿಯ ಕಾರ್ಯಾಧ್ಯಕ್ಷ ಮಂಜುನಾಥ್ ಪೂಜಾರಿ ಅವರು ಒತ್ತು ನೀಡಿ ಮಾತಾಡುತ್ತಾ ಸದಸ್ಯರು ತಮ್ಮ ಶಕ್ತಾನುಸಾರ ಧನ ಸಂಗ್ರಹಕ್ಕೆ ಮನಸ್ಸು ಮಾಡಬೇಕೆಂದು ಹೇಳಿದರು.ಕಚೇರಿ ಖರೀದಿ ಬಗ್ಗೆ ಸದಸ್ಯರಿಂದ ಉತ್ತಮ ಪ್ರತಿಕ್ರಿಯೆ ದೊರೆಯಿತು.
ಪ್ರಧಾನ ಕಾರ್ಯದರ್ಶಿ ಹರೀಶ್ ಮೈಂದನ್ ಅವರು ಮದರ್ ಇಂಡಿಯಾ ರಾತ್ರಿ ಶಾಲೆಯ ಹೆಸರು ಉಪಯೋಗ ಮಾಡಿ ಯಾವುದೇ ಚಟುವಟಿಕೆ ನಡೆಸುವ ಸಮಿತಿಗಳು ಮದರ್ ಇಂಡಿಯಾ ಎಕ್ಸ್ ಸ್ಟೂಡೆಂಟ್ಸ್ ಫೌಂಡೇಶನ್ ನ ಅಧ್ಯಕ್ಷರು ಅಥವಾ ಪ್ರಧಾನ ಕಾರ್ಯದರ್ಶಿಗಳೊಡನೆ ಸಲಹೆ ಪಡೆದರೆ ಉತ್ತಮ ಎಂದು ಹೇಳುತ್ತಾ ಸಂಸ್ಥೆಯ ಏಳಿಗೆಗೆ ಅನ್ಯೋನ್ಯತೆಯಿಂದ ಕಾರ್ಯ ನಿರ್ವಹಿಸುತ್ತಿರಬೇಕು ಎಂದು ಹೇಳಿದರು. ಅಧ್ಯಕ್ಷರಾದ ಸುರೇಂದ್ರ ಪೂಜಾರಿ ಅವರು ಈ ಸಂಸ್ಥೆಯು ಶೀಘ್ರ ಪ್ರಗತಿಯಲ್ಲಿದ್ದು ಸದಸ್ಯರು ತನು ಮನ ಧನದಿಂದ ಸಹಕಾರ ನೀಡಬೇಕಾಗಿದೆ.ಸಮಾಜಕ್ಕೆ ಒಳಿತು ಆಗುವ ಹೊಸ ಯೋಜನೆಗಳನ್ನು ಜಾರಿಗೊಳಿಸಲು ದುಡಿಯಬೇಕಾಗಿದೆ ಎಂದು ಕರೆ ನೀಡಿದರು.
ಸಭೆಯಲ್ಲಿ ತುಳು ಸಂಘ ಬೋರಿವಲಿ ಇದರ ಅಧ್ಯಕ್ಷರಾಗಿ ನೇಮಕಗೊಂಡಿದ್ದ ಹರೀಶ್ ಮೈಂದನ್, ಕರ್ನಾಟಕ ಜಾನಪದ ಪ್ರಶಸ್ತಿ ಪುರಸ್ಕೃತ ಕರುಣಾಕರ ಕಾಪು ಮತ್ತು ಸ್ಟಾರ್ ಹೇಲ್ತ್ತ್ ಸಂಸ್ಥೆಯಿಂದ ಶ್ರೇಷ್ಠ ಪುರಸ್ಕಾರ ಪಡೆದ ಸೀತಾರಾಮ್ ದೇವಾಡಿಗ ಅವರನ್ನು ಸನ್ಮಾನ ಮಾಡಲಾಯಿತು.
ಸಭೆಯಲ್ಲಿ ಉಪಸ್ಥಿತರಿದ್ದ ಕಾರ್ಯಕ್ರಮ ಸಮಿತಿ ಅಧ್ಯಕ್ಷ ಸದಾನಂದ ಶೆಟ್ಟಿ ಕಿನ್ನಿಗೊಳಿ, ಮಂದಾರ ಹೆಗ್ಡೆ, ಸುಂದರ ಮೊಯ್ಲಿ, ಅಡ್ವೋಕೇಟ್ ಸುಂದರ ಜೆ. ಶೆಟ್ಟಿ, ಜಯ ಪೂಜಾರಿ ಅವರು ಅಭಿಪ್ರಾಯ ಮಂಡಿಸಿದರು.
ಮನೋರಂಜನಾ ಕಾರ್ಯಕ್ರಮದಲ್ಲಿ ಜಯರಾಮ್ ಪೂಜಾರಿ, ಕರುಣಾಕರ ಪೂಜಾರಿ, ಹೇಮಂತ್ ಪೂಜಾರಿ, ರಮೇಶ್ ಪೂಜಾರಿ, ಆಕರ್ಷ ಯಶವಂತ ಪೂಜಾರಿ, ಶ್ರೀಕಾಂತ್ ಪೂಜಾರಿ ಮೊದಲಾದವರು ಭಾಗವಹಿಸಿದ್ದರು.
ವೇದಿಕೆಯಲ್ಲಿ ಉಪಾಧ್ಯಕ್ಷರಾದ ಉಮೇಶ್ ಶೆಟ್ಟಿ ಮತ್ತು ಯಶವಂತ್ ಪೂಜಾರಿ, ಜತೆ ಕಾರ್ಯದರ್ಶಿ ಜಯರಾಮ್ ಪೂಜಾರಿ,ರಸಾಯಾನಿ ಉಪಸ್ಥಿತರಿದ್ದರು. ಅಶೋಕ್ ಸುವರ್ಣ ವಂದಿಸಿದರು.