ಕರ್ನಾಟಕ ಸರಕಾರದ ಅಧೀನದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಕಾರ‍್ಯ ನಿರ್ವಹಿಸುತ್ತಿರುವ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು ಇದರ ಮೂಲಕ ತುಳು ಭಾಷೆ-ಸಂಸ್ಕೃತಿ-ಸಾಹಿತ್ಯ ಚಟುವಟಿಕೆಯನ್ನು ನಡೆಸುತ್ತಿದ್ದು ಇದಕ್ಕೆ ಪೂರಕವಾಗಿ ಪ್ರಾಚೀನ ಭಾಷೆಯ ನೆಲೆಯಲ್ಲಿ "ತುಳು ಲಿಪಿ"ಯನ್ನು ಅಧಿಕೃತವಾಗಿ ಅಕಾಡೆಮಿಯ ಮೂಲಕ ಹಲವು ತಜ್ಞರ ಅಭಿಪ್ರಾಯದಂತೆ ಕ್ರೋಢೀಕರಿಸಿಕೊಂಡು ಯೂನಿಕೋಡ್‌ನಲ್ಲಿ ಅಳವಡಿಸುವ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರಕಾರದ ಅನುಮತಿಯನ್ನು ಕೇಳಿಕೊಳ್ಳುವ ಪ್ರಯತ್ನವು ಈ ಬಾರಿ ಯಶಸ್ವಿಯಾಗಿದೆ ಕೇಂದ್ರ ಸರಕಾರದ ಭಾರತೀಯ ಭಾಷಾ ಸಂಸ್ಥಾನ ಸಿಐಐಎಲ್ ಮೈಸೂರು ಇವರಿಂದ ಮಾನ್ಯತಾ ಪತ್ರ ಲಭ್ಯವಾಗಿದೆ ಎಂದು ಹೇಳಲು ಸಂತಸವಾಗಿದೆ. ಇದು ತುಳುನಾಡಿಗೆ ಕೇಂದ್ರ ಮತ್ತು ರಾಜ್ಯ ಸರಕಾರದ ದೊಡ್ಡ ಐತಿಹಾಸಿಕ ಕೊಡುಗೆಯಾಗಿದೆ.

2014ರಲ್ಲಿ ತುಳು ಲಿಪಿಯ ಬಗ್ಗೆ ಅಕಾಡೆಮಿಯಲ್ಲಿ ಸಭೆಯನ್ನು ಅಯೋಜಿಸಿಕೊಂಡು, 2016ರಲ್ಲಿ ಮತ್ತೆ ಸಭೆಯನ್ನು ನಡೆಸಿ ನಡಾವಳಿಯ ಮೂಲಕ ಚರ್ಚೆ ನಡೆಸಿ, 2017ರಲ್ಲಿ ತಜ್ಞರ ಮೂಲಕ ಚರ್ಚೆ ನಡೆಸಿ, ಇದಕ್ಕೆ ಪೂರಕವಾಗಿ ದ್ರಾವಿಡಿಯನ್ ಯೂನಿವರ್ಸಿಟಿ ಕುಪ್ಪಂ, ಯೂನಿವರ್ಸಿಟಿ ಆಫ್ ಮುಂಬೈ, ಮಂಗಳೂರು ಯೂನಿವರ್ಸಿಟಿ, ಕೇರಳ ತುಳು ಅಕಾಡೆಮಿಯ ಸಹಿತ ಹಲವು ಪ್ರಾಚೀನವಾದ ಶಿಲಾ ಶಾಸನಗಳು, ತುಳು ನಾಡಿನ ಇತಿಹಾಸಗಳು, ಐತಿಹ್ಯದ ಮಾಹಿತಿ ಹಾಗೂ ಈ ಬಗ್ಗೆ ಅನೇಕ ಹಿರಿಯ ಸಾಹಿತಿ, ಸಂಶೋಧಕರ ನಡುವೆ ಸಂವಹನ ನಡೆಸಿಕೊಂಡು ತುಳು ಲಿಪಿಯನ್ನು ಯೂನಿಕೋಡ್ ಕನ್ಸೋಟಿಯಮ್ ಗಾಗಿ ರಾಜ್ಯ ಸರಕಾರದ ಅಧಿಕೃತ ಒಪ್ಪಿಗೆಗಾಗಿ ಮನವಿ ಮಾಡಿಕೊಂಡಿದ್ದೆವು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ರಾಜ್ಯ ಸರಕಾರವು ಇದಕ್ಕೆ ಪೂರಕವಾಗಿ ಮಾಹಿತಿಯನ್ನು ಪಡೆದುಕೊಂಡು ಪ್ರಸ್ತುತ ರಾಜ್ಯ ಸರಕಾರದ ಮುಖ್ಯಮಂತ್ರಿಗಳ ಮಾಹಿತಿ ತಂತ್ರಾಂಶದ ಆಪ್ತ ಸಲಹೆಗಾರರಾದ ಶ್ರೀ ಬೇಳೂರು ಸುದರ್ಶನ ಅವರ ವಿಶೇಷ ಸಹಕಾರದ ಮಾರ್ಗದರ್ಶನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶ್ರೀ ಅರವಿಂದ ಲಿಂಬಾವಳಿ ಅವರ ವಿಶೇಷ ಆಸಕ್ತಿಂದ ಹಾಗೂ ತುಳು ಭಾಷಾಭಿಮಾನದಿಂದ ಮಾನ್ಯ ಮುಖ್ಯಮಂತ್ರಿ ಶ್ರೀ ಬಿ.ಎಸ್.ಯಡಿಯೂರಪ್ಪ ಅವರ ಮೂಲಕ ಸಿಐಐಎಲ್ ಮೈಸೂರು ಅಧಿಕೃತವಾಗಿ ಮಾನ್ಯತೆ ನೀಡಿರುವುದು ತುಳುನಾಡಿನ ಪ್ರಗತಿಗೆ ಕಾರಣವಾಗಿದೆ.

ಈ ಸಂದರ್ಭದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರ ನೆಲೆಯಲ್ಲಿ ಸರ್ವ ಸದಸ್ಯರ ಪರವಾಗಿ ಕರ್ನಾಟಕ ಸರಕಾರದ ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಿ.ಎಸ್.ಯಡಿಯೂರಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಸನ್ಮಾನ್ಯ ಶ್ರೀ ಅರವಿಂದ ಲಿಂಬಾವಳಿ ಅವರಿಗೆ ವಿಶೇಷವಾಗಿ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ಆರಂಭದಿಂದಲೂ ನಮಗೆ ಮಾರ್ಗದರ್ಶನ ನೀಡಿ ತಾಂತ್ರಿಕತೆಯ ಮೂಲಕ ಸಹಕಾರ ನೀಡಿರುವ ಶ್ರೀ ಬೇಳೂರು ಸುದರ್ಶನ ಹಾಗೂ ಇಲಾಖೆಯ ಎಲ್ಲಾ ಅಧಿಕಾರಿ ವರ್ಗದವರಿಗೂ ವಿಶೇಷವಾಗಿ ಅಭಾರಿಯಾಗಿದ್ದೇವೆ ಈ ಬಗ್ಗೆ ಸ್ಪಂದಿಸಿದ ಪ್ರತ್ಯಕ್ಷ ಹಾಗೂ ಪರೋಕ್ಷ ತುಳುನಾಡಿನ ಗೌರವಾನ್ವಿತರನ್ನು ಕೃತಜ್ಞತಾ ಭಾವನೆಯಲ್ಲಿ ಕಾಣುತ್ತಾ ಮುಂದಿನ ದಿನದಲ್ಲಿ ತುಳುವಿಗೆ ಅಧಿಕೃತ ರಾಜ್ಯ ಭಾಷೆ ಮಾನ್ಯತೆ ಹಾಗೂ ಕೇಂದ್ರದಿಂದ ತುಳು ಪ್ರಾದೇಶಿಕ ಭಾಷೆಯನ್ನು 8ನೇ ಪರಿಚ್ಚೇದಕ್ಕೆ ಸೇರ್ಪಡೆಗೊಳ್ಳಲು ಪೂರಕವಾಗಿ ಹಾಗೂ "ತುಳುಲಿಪಿ"ಯ ಬೆಳವಣಿಗೆಗೆ ಸಹಕಾರಿ ಆಗಲಿದೆ ಎಂದು ತಿಳಿಸಲು ಹರ್ಷ ವ್ಯಕ್ತಪಡಿಸುತ್ತೇನೆ. ಎಂದು ನಿನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ದಯಾನಂದ ಜಿ. ಕತ್ತಲ್‌ಸಾರ್  ತಿಳಿಸಿದರು.

    ಅಕಾಡೆಮಿಯ ಗೌರವಾನ್ವಿತ ಸದಸ್ಯರಾದ ಡಾ.ಆಕಾಶ್‌ರಾಜ್ ಜೈನ್, ನಿಟ್ಟೆ ಶಶಿಧರ ಶೆಟ್ಟಿ, ನಾಗೇಶ್ ಕುಲಾಲ್ ಕುಳಾಯಿ, ನರೇಂದ್ರ ಕೆರೆಕಾಡು, ಚೇತಕ್ ಪೂಜಾರಿ, ಅಕಾಡೆಮಿಯ  ರಿಜಿಸ್ಟ್ರಾರ್ ಶ್ರೀಮತಿ ಕವಿತಾ ಪ್ರಶಾಂತ್ ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.