ಮಂಗಳೂರು: ಮುಂಬಯಿನ ಖ್ಯಾತ ಸಂಘಟಕ, ಸಮಾಜ ಸೇವಕ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಐಕಳ ಹರೀಶ್ ಶೆಟ್ಟಿ ಅವರಿಗೆ ಅರವತ್ತು ತುಂಬಿದ ಹಿನ್ನೆಲೆಯಲ್ಲಿ ಗೌರವ ಗ್ರಂಥವೊಂದನ್ನು ಅರ್ಪಿಸಲು ನಿರ್ಧರಿಸಲಾಗಿದ್ದು ಅದರ ಪೂರ್ವಭಾವಿ ಸಭೆಯನ್ನು ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗದಲ್ಲಿ   ಆಯೋಜಿಸಲಾಗಿತ್ತು.

ಐಕಳ ಹರೀಶ್ ಶೆಟ್ಟಿ ಅವರು ಅಪೂರ್ವ ಸಂಘಟಕರಾಗಿ, ಜನಕಲ್ಯಾಣಕ್ಕೆ ತಮ್ಮನ್ನು ಅರ್ಪಿಸಿಕೊಂಡವರು. ಅವರ ಜೀವನ ಸಾಧನೆ ನಾಡಿಗೆ ಮಾದರಿ. ಮುಂಬಯಿ ತುಳು ಕನ್ನಡಿಗರ ಕಣ್ಮಣಿಯಾಗಿರುವ ಐಕಳ ಅವರ ಸಾಹಸ ಸಾಧನೆಯನ್ನು ಸಮಗ್ರವಾಗಿ ದಾಖಲಿಸುವ ದೃಷ್ಟಿಯಿಂದ ’ಸಾರ್ವಭೌಮ’ ಎಂಬ ಗೌರವ ಗ್ರಂಥವೊಂದನ್ನು ಅರ್ಪಿಸುವ ನಿಟ್ಟಿನಲ್ಲಿ ಈ ಸಭೆಯಲ್ಲಿ ಚರ್ಚಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಸ್ವತ: ಐಕಳ ಹರೀಶ್ ಶೆಟ್ಟಿ ಅವರು ಪಾಲ್ಗೊಂಡು ಮಾತನಾಡುತ್ತಾ ಸಮಾಜಸೇವೆ ಮಾಡುವುದು ನನ್ನ ಕರ್ತವ್ಯ ಎಂದು ಭಾವಿಸಿದ್ದೇನೆ. ನಾನು ನನಗಾಗಿ ಏನನ್ನೂ ಯಾರಿಂದಲೂ ಬಯಸಿದವನಲ್ಲ. ಸಮಾಜದಲ್ಲಿನ ಬಡವರ, ನೊಂದವರ ಕಷ್ಟ ನಷ್ಟಗಳಿಗೆ ಸ್ಪಂದಿಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕು. ಎಲ್ಲರನ್ನೂ ಪ್ರೀತಿ ವಿಶ್ವಾಸದಿಂದ ನೋಡಿಕೊಳ್ಳುವುದು ನಮ್ಮ ಆದ್ಯತೆಯಾಗಬೇಕು. ಈ ನಿಟ್ಟಿನಲ್ಲಿ ಸಮಾಜಸೇವೆಯಲ್ಲಿ, ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮೂಲಕ  ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಿದ್ದೇವೆ. ಇದು ನನಗೆ ಧನ್ಯತಾ ಭಾವ ಮೂಡಿಸಿದೆ. ಈಗ ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗದ ಮೂಲಕವಾಗಿ ಈ ಗೌರವ ಗ್ರಂಥ ಸಮರ್ಪಣೆ ಆಗುತ್ತಿರುವುದು ಇದು ನನ್ನ ಪಾಲಿಗೆ ಬಹುದೊಡ್ಡ ಗೌರವ ಎಂದು ಭಾವಿಸಿಕೊಂಡಿರುವೆ ಎಂದು ಐಕಳ ಹರೀಶ್ ಶೆಟ್ಟಿ ತಿಳಿಸಿದರು.

 ಈ ಸಂದರ್ಭದಲ್ಲಿ ಕರ್ನಾಟಕ ಮಲ್ಲ ಪತ್ರಿಕೆಯ ಸಂಪಾದಕ ಚಂದ್ರಶೇಖರ ಪಾಲೆತ್ತಾಡಿ ಅವರು ಈ ಗ್ರಂಥದ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯದ ಮುಖ್ಯಸ್ಥರಾದ ಡಾ.ಜಿ.ಎನ್.ಉಪಾಧ್ಯ ಹಾಗೂ ಸಹ ಪ್ರಾಧ್ಯಾಪಕರಾದ ಡಾ.ಪೂರ್ಣಿಮಾ ಸುಧಾಕರ ಶೆಟ್ಟಿ ಅವರು  ಗ್ರಂಥದ ಸಂಪಾದಕರಾಗಿ ಕೆಲಸ ಮಾಡಲಿದ್ದಾರೆ. ಸಂಪಾದಕ ಮಂಡಳಿಯಲ್ಲಿ ಬಂಟರವಾಣಿ ಪತ್ರಿಕೆಯ  ಪ್ರಧಾನ ಸಂಪಾದಕ ಅಶೋಕ ಪಕ್ಕಳ, ಸಂಪಾದಕ ಪ್ರೇಮನಾಥ ಮುಂಡ್ಕೂರು, ಸಂಘಟಕ ಕರ್ನೂರು ಮೋಹನ ರೈ, ಕರ್ನಾಟಕ ಮಾಧ್ಯಮ ಅಕಾಡೆಮಿಯ ಸದಸ್ಯ ಬಾಳ ಜಗನ್ನಾಥ ಶೆಟ್ಟಿ,  ಪತ್ರಕರ್ತ ದಿನೇಶ್ ಕುಲಾಲ್  ಸಂಪಾದಕ ಮಂಡಳಿಯಲ್ಲಿ ಕೆಲಸ ಮಾಡಲಿದ್ದಾರೆ.

 ಸಲಹಾ ಮಂಡಳಿಯಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ  ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ, ಇಂದ್ರಾಳಿ, ಕೋಶಾಧಿಕಾರಿ ಉಳ್ತೂರು ಮೋಹನದಾಸ ಶೆಟ್ಟಿ, ಜೊತೆ ಕಾರ್ಯದರ್ಶಿ ಸತೀಶ್ ಅಡಪ್ಪ ಸಂಕಬೈಲು  ಕಾರ್ಯನಿರ್ವಹಿಸಲಿದ್ದಾರೆ. ಡಾ.ಪೂರ್ಣಿಮಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಉಳ್ತೂರು ಮೋಹನದಾಸ ಶೆಟ್ಟಿ ವಂದಿಸಿದರು.