ಎಲ್ಲ ಧರ್ಮಗಳವರು ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದು ಅಲ್ಲಿ ಯಾವುದೇ ಜಾತಿ ಧರ್ಮ ನೋಡದೆ ಸೇವೆ ನೀಡುತ್ತವೆ. ಆದರೆ ಮೇಲಿನ ಕಾಯ್ದೆಯಡಿ ಯಾರಾದರೂ ದ್ವೇಷದಿಂದ ದೂರು‌ ನೀಡಿದಲ್ಲಿ ಆತನಿಗೆ ಜಾಮೀನಿಗೆ ಅವಕಾಶ ಇಲ್ಲ ಎನ್ನುವುದು ನಾಗರಿಕ ಸಮಾಜ ಒಪ್ಪುವ ಕಾಯ್ದೆಯಲ್ಲ. ಸೇವೆಯನ್ನು ಮತಾಂತರ ಪ್ರೇರೇಪಣೆ ಎಂದು ದೂರಲು ಅವಕಾಶ ಇರುವುದರಿಂದ ಇದು ಸಾಮಾಜಿಕ ಕುತಂತ್ರಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಲೋಬೋ ಹೇಳಿದರು.

ಈ ಕಾಯ್ದೆಯನ್ನು ಮೇಲ್ಮನೆಯಲ್ಲೂ ಮಂಡಿಸದೆ ರಾಜ್ಯಪಾಲರ ಮೂಲಕ ಜನರ ಮೇಲೆ ಹೇರಲು ಕಾರಣವೇನು? ಸಂತ ಅಲೋಶಿಯಸ್ ಮೊದಲಾದ ಅಲ್ಪಸಂಖ್ಯಾತರ ಕಾಲೇಜುಗಳಲ್ಲಿ ಸಾಕಷ್ಟು ಜನ ಪದವೀಧರರು ಆಗಿದ್ದಾರೆ. ಅವರೆಲ್ಲ ಮತಾಂತರ ಹೊಂದಿದರೇನು ಎಂದು ಅವರು ಕೇಳಿದರು.

ಸುನಿಲ್ ಕುಮಾರ್ ಬಜಾಲ್ ಅವರು ಮಾತನಾಡಿ ಇದು ಧಾರ್ಮಿಕ ರಕ್ಷಣಾ ಕಾಯ್ದೆಯಲ್ಲ. ಸಂವಿಧಾನದಲ್ಲಿ ಮತಾಂತರಕ್ಕೆ ಅವಕಾಶವಿದೆ. ಬಲವಂತದ ಮತಾಂತರಕ್ಕೆ ಅವಕಾಶ ಇಲ್ಲ. ಆದ್ದರಿಂದ ಇದು ಬಿಜೆಪಿಯವರು ಕ್ರಿಶ್ಚಿಯನರ ಮೇಲೆ ಗುರಿಯಿಟ್ಟು ತಂದ ಕಾಯ್ದೆಯಾಗಿದೆ. ದಕ್ಷಿಣ ಕನ್ನಡದಲ್ಲಿ ಕ್ರಿಶ್ಚಿಯನ್ ಶಾಲಾ ಕಾಲೇಜುಗಳಿಂದ ಮಾತ್ರ ಹಿಂದುಳಿದವರು, ದಲಿತರು ಶಿಕ್ಷಣ ಪಡೆಯುವುದು ಸಾಧ್ಯವಾಯಿತು ಎಂದು ಬಜಾಲ್ ಹೇಳಿದರು.

ಜೆಡಿಎಸ್ ನಾಯಕ ಸದಾಶಿವ ಅವರು ಮಾತನಾಡಿ ಜನ ಸೇವೆಯ ಬದಲು ಜನರ ದಿಕ್ಕು ತಪ್ಪಿಸುವ ಕೆಲಸವನ್ನು ಮಾತ್ರ ಬಿಜೆಪಿ ಮಾಡುತ್ತಿದೆ. ಈ ಕಾಯ್ದೆಯು ಅತ್ಯಂತ ಹೀನ ಮನಸ್ಸಿನದು, ಅವೈಜ್ಞಾನಿಕ ಆದ್ದರಿಂದ ಈ ಬಿಜೆಪಿಯ ಕುತ್ಸಿತ ಕಾಯ್ದೆಯನ್ನು ಹಿಂದೆ ಪಡೆಯಬೇಕು. ಅದರ ದುರುದ್ದೇಶದ ಕಾಯ್ದೆಯಿದು ಎಂದು ಅವರು ಹೇಳಿದರು.

ಎಂ. ಜಿ. ಹೆಗ್ಡೆ ಅವರು ಮಾತನಾಡಿ ಇದು ಅಲ್ಪಸಂಖ್ಯಾತರ ಸಂಸ್ಥೆಗಳನ್ನು ಮುಚ್ಚಲು ನಡೆಸಿರುವ ಷಡ್ಯಂತ್ರ. ಚುನಾವಣೆ ಬರುತ್ತಿರುವುದರಿಂದ ಚುನಾವಣೆಗೆ ಮೊದಲು ಒಂದೆರಡು ದೂರು ದಾಖಲಾಗುವುದು ಖಚಿತ. ಒಟ್ಟಾರೆ ಸಾಮಾಜಿಕವಾಗಿ ತುಳಿಯಲ್ಪಟ್ಟವರನ್ನು ಮತ್ತಷ್ಟು ತುಳಿಯಲು ಮಾಡಿದ, ಅಪ್ರಬುದ್ಧ ಕಾಯ್ದೆಯಿದು. ಇದನ್ನು ಯಾರೂ ಒಪ್ಪುವಂತಿಲ್ಲ ಎಂದರು.

ಹಿರಿಯ ಕಾಂಗ್ರೆಸ್ ನಾಯಕ ಕಳ್ಳಿಗೆ ತಾರಾನಾಥ ಶೆಟ್ಟಿ ಅವರು ಮಾತನಾಡಿ ದೂರು ಕೊಟ್ಟವನು  ಪ್ರಕರಣವನ್ನು ಪ್ರೂವ್ ಮಾಡಬೇಕು. ಆದರೆ ಈ ಕೇಸಿನಲ್ಲಿ ದೂರುದಾರನಿಗೆ ದೂರು ಕೊಟ್ಟ ಬಳಿಕ ಜವಾಬುದಾರಿಯೇ ಇಲ್ಲ. ಇದು ಜಾಮೀನುರಹಿತ ಎನ್ನುವುದಂತೂ ವಿಚಿತ್ರವಾಗಿದೆ. ಪೋಲೀಸರು ಯಾರದೋ ದೂರಿನ ಮೇಲೆ ಯಾರದೋ ಪ್ರತಿಷ್ಠೆ ಪತನಕ್ಕೆ ಈ ಕಾಯ್ದೆ ಬಳಸುವುದು ಸ್ಪಷ್ಟವಾಗಿದೆ ಎಂದು ಹೇಳಿದರು.


ಮಾಜೀ ಉಪ ಮೇಯರ್ ಮೊಹಮದ್ ಅವರು ಮಾತನಾಡಿ ಮತಾಂತರ ಎಂಬುದು ಮೇಲೆ ತಿಳಿದಷ್ಟು ಸಲೀಸಲ್ಲ. ಕ್ರಿಶ್ಚಿಯನರು ಅಧಿಕವಿರುವ ಗೋವಾದಲ್ಲಿ ಮತ್ತು ಸಿಖ್ ಜನ ಹೆಚ್ಚಿದ್ದ ಪಂಜಾಬಿನಲ್ಲಿ ಈಗ ಹಿಂದೂಗಳ ಸಂಖ್ಯೆ ಅಧಿಕವಾಗಿದೆ. ಅಲ್ಲಿ ಮತಾಂತರ ಆಯಿತೆ? ಈ ಸುಗ್ರೀವಾಜ್ಞೆಯ ಕಾಯ್ದೆಯು ಕ್ರಿಶ್ಚಿಯನ್, ಮುಸ್ಲಿಂ ಸಂಸ್ಥೆಗಳ ಮೇಲೆ ಬಿಜೆಪಿ ಗದಾಪ್ರಹಾರ ಮಾಡಲು ನಡೆಸಿರುವ ಕುಯುಕ್ತಿ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಹೊ‌ನ್ನಯ್ಯ, ಪ್ರಕಾಶ ಸಾಲ್ಯಾನ್,  ಎಂ. ಜಿ. ಹೆಗಡೆ, ಮಾಜೀ ಉಪ ಮೇಯರ್ ಮೊಹಮ್ಮದ್, ಟಿ. ಕೆ. ಸುಧೀರ್, ವಿಶ್ವಾಸ್ ದಾಸ್ ಮೊದಲಾದವರು ಉಪಸ್ಥಿತರಿದ್ದರು.