ಮಂಗಳೂರು: ಕವಿ ಕಯ್ಯಾರರ 107ನೇ ಹುಟ್ಟುಹಬ್ಬದ ಆಚರಣೆಯ ಪ್ರಯುಕ್ತ ಕಲ್ಕೂರ ಪ್ರತಿಷ್ಠಾನ (ರಿ) ಮಂಗಳೂರು ಇದರ ವತಿಯಿಂದ ಹಾಗೂ ಜೆ.ಕೆ.ವಿ. ಸಂಸ್ಥೆಯು ಸಹಯೋಗದೊಂದಿಗೆ ಖ್ಯಾತ ವೈದ್ಯ, ಹಿರಿಯ ಸಾಹಿತಿ, ಅರ್ಥದಾರಿ, ಗಡಿನಾಡಿನ ಕನ್ನಡ ಹೋರಾಟಗಾರ ಡಾ|ರಮಾನಂದ ಬನಾರಿಯವರಿಗೆ "ಕಯ್ಯಾರ ಕಿಞ್ಞಣ್ಣ ರೈ ಪ್ರಶಸ್ತಿ" ಪ್ರದಾನ ಸಮಾರಂಭ ಜೋಡುಕಲ್ಲು ಜೆ.ಕೆ. ವಿ.ಸಭಾಂಗಣದಲ್ಲಿ ಜರುಗಿತು. ಕಾರ್ಯಕ್ರಮವನ್ನು ಮಂಜೇಶ್ವರದ ಶಾಸಕ ಎ.ಕೆ.ಎಂ ಅಶ್ರಫ್ ಉದ್ಘಾಟಿಸಿದರು.
ಎಸ್.ಪ್ರದೀಪ ಕುಮಾರ ಕಲ್ಕೂರ ಅಧ್ಯಕ್ಷತೆ ವಹಿಸಿದರು , ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ|ಸಿ.ಸೋಮಶೇಖರ್ ಪ್ರಶಸ್ತಿ ಪ್ರದಾನ ಮಾಡಿದರು. ಕೈಯ್ಯಾರ ಕಿಞ್ಞಣ್ಣ ರೈ ಯವರ ಪುತ್ರ ಪ್ರಸನ್ನ ರೈ, ಜೆ. ಕೆ. ವಿ ಸಂಸ್ಥೆಯ ಅಧ್ಯಕ್ಷರು ಝೆಡ್ ಎ ಕೈಯ್ಯಾರ್, ಸುಬ್ಬಯ್ಯಕಟ್ಟೆ, ಪಿ. ಎನ್ ಮೂಡಿತ್ತಾಯ ಹಾಗೂ ಹಲವಾರು ಗಣ್ಯಾತಿ ಗಣ್ಯರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಡಾ. ವಾಣಿಶ್ರೀ ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘದ ವತಿಯಿಂದ ಸಾಂಸ್ಕೃತಿಕ ಸಂಭ್ರಮ ಜರುಗಿತು. ಸಂಘದ ವತಿಯಿಂದ ಸುಭಾಷಿನಿ ಚಂದ್ರ, ಸತೀಶ, ಸುನಂದ, ಚಂದನ್, ತಸ್ಮೈ , ಪ್ರದೀಪ್, ಗುರುರಾಜ್ ಕಾಸರಗೋಡು ಹಾಗು ಡಾ. ವಾಣಿಶ್ರೀ ಕಾಸರಗೋಡು ಸುಮಧುರವಾದ ಹಾಡುಗಳನ್ನು ಹಾಡಿ ರಂಜಿಸಿದರು.
ಡಾ. ವಾಣಿಶ್ರೀ ಕಾಸರಗೋಡು ಮಾತನಾಡುತ್ತಾ ನನ್ನ ಮಾವನರಾದ ಡಾ. ರಮಾನಂದ ಬನಾರಿಯವರು ಹಾಕಿಕೊಟ್ಟ ಬುನಾದಿಯ ಮೇಲೆ ನಾವು ನಮ್ಮ ಕಾರ್ಯ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತೇವೆ. ನಮ್ಮ ಸಂಘದ ವತಿಯಿಂದ ಉಚಿತ ವೈದ್ಯಕೀಯ ಶಿಬಿರವನ್ನು ನಡೆಸಿಕೊಂಡು ಬರುತ್ತಿದ್ದೇವೆ ಹಾಗೂ ಮುಂದೆಯು ಕೂಡ ಮುಂದುವರಿಸುತ್ತೇವೆ. ಗಡಿನಾಡ ಕನ್ನಡತಿ ಎಂದು ಹೇಳಲು ತುಂಬಾ ಹೆಮ್ಮೆ ಪಡುತ್ತೇನೆ. ಗಡಿನಾಡ ಕನ್ನಡತಿ ಎಂಬ ಹೆಸರಿನಲ್ಲಿ ಏನೋ ಒಂದು ವಿಶಿಷ್ಟ ಶಕ್ತಿ ಇದೆ. ಮುಂದೆ ಗಡಿನಾಡ ಕನ್ನಡತಿಯಾಗಿ ಎಲ್ಲಾ ಕನ್ನಡ ಪರ ಕಾರ್ಯಕ್ರಮಗಳನ್ನು ಈಗ ನಡೆಸಿಕೊಂಡು ಬರುವ ಹಾಗೆ ಮುಂದೆಯೂ ಇನ್ನೂ ಹೆಚ್ಚಿನ ರೀತಿಯಲ್ಲಿ ಕನ್ನಡಪರ ಕೆಲಸಗಳನ್ನು ಮಾಡಿ ಸಾಹಿತ್ಯವನ್ನು ಶ್ರೀಮಂತಗೊಳಿಸುತ್ತೇನೆ ಎಂದು ಹೇಳಿದರು