ಮಂಗಳೂರು: ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಪರಿಷತ್ (ನ್ಯಾಕ್) ನ ಮೌಲ್ಯಾಂಕನ ಪ್ರಕ್ರಿಯೆಗೆ ಸಿದ್ಧವಾಗುತ್ತಿರುವ ನಗರದ ವಿಶ್ವವಿದ್ಯಾನಿಲಯ ಕಾಲೇಜಿಗೆ ಶುಕ್ರವಾರ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಸುಬ್ರಹ್ಮಣ್ಯ ಯಡಪಡಿತ್ತಾಯ ಭೇಟಿ ನೀಡಿ ಸಿದ್ಧತೆ ಪರಿಶೀಲಿಸಿ, ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು. 

ಕಾಲೇಜಿನ ಮೀಟಿಂಗ್ ಹಾಲ್ನಲ್ಲಿ ಪ್ರಾಂಶುಪಾಲೆ ಡಾ. ಅನಸೂಯ ರೈ, ನ್ಯಾಕ್ ಸಂಯೋಜಕಿ ಡಾ. ಸುಧಾ ಎನ್. ವೈದ್ಯ ಅವರೊಂದಿಗೆ ವಿವಿಧ ಮಾನದಂಡಗಳ (ಕ್ರೈಟೀರಿಯಾ) ಸಂಯೋಜಕರು ಮತ್ತು ಸದಸ್ಯರ ಸಭೆ ನಡೆಸಿದ ಕುಲಪತಿಗಳು ಪ್ರತಿ ಮಾನದಂಡಕ್ಕೆ ಅನುಗುಣವಾಗಿ ನಡೆದಿರುವ ಸಿದ್ಧತೆಯನ್ನು ಪರಿಶೀಲಿಸಿದರು. “ಎಲ್ಲರ ಪಾಲ್ಗೊಳ್ಳುವಿಕೆ, ಪ್ರತಿ ಮಾಹಿತಿಗೂ ಪೂರಕ ದಾಖಲೆ ಅಗತ್ಯ. ವಿವಿಧ ಯೋಜನೆಗಳ ಉದ್ದೇಶ, ಪಾತ್ರ ಮತ್ತು ಫಲಿತಾಂಶಗಳು ತಾಳೆಯಾಗಬೇಕು. ನಮ್ಮಲ್ಲಿರುವ ಕೊರತೆಗಳನ್ನು ಒಪ್ಪಿಕೊಂಡು ಅದನ್ನು ನಿವಾರಿಸಲು ತೆಗೆದುಕೊಂಡಿರುವ ಕ್ರಮಗಳನ್ನು ವಿವರಿಸಬೇಕು. ನಾವು ಒದಗಿಸುವ ಮಾಹಿತಿ ಸಂಕ್ಷಿಪ್ತ ಮತ್ತು ಸ್ಪಷ್ಟವಾಗಿರಬೇಕು. ಮೌಲ್ಯಮಾಪನಕ್ಕೆ ಲಭ್ಯವಿರುವ ಆಧುನಿಕ ಸಾಫ್ಟ್ವೇರ್ಗಳನ್ನು ಬಳಸಿಕೊಳ್ಳಬಹುದು,” ಎಂದ ಅವರು ವಿಶ್ವವಿದ್ಯಾನಿಲಯ ಎಲ್ಲಾ ರೀತಿಯ ನೆರವು ನೀಡಲು ಸಿದ್ಧವಿದೆ, ಎಂದು ಭರವಸೆ ನೀಡಿದರು. 

ವಿವಿಧ ಮಾನದಂಡಗಳ ಮುಖ್ಯಸ್ಥರಾದ ಡಾ. ಕುಮಾರ ಸುಬ್ರಹ್ಮಣ್ಯ ಭಟ್, ಡಾ. ಕುಮಾರಸ್ವಾಮಿ ಎಂ, ಡಾ. ಭಾರತಿ ಪ್ರಕಾಶ್, ಸುಬ್ರಹ್ಮಣ್ಯ ಭಟ್, ಡಾ.ಶೋಭಾ, ಡಾ. ಉಷಾ ಕೆ. ಎಂ, ಡಾ. ಅಬೋಬಕ್ಕರ್ ಸಿದ್ಧಿಕ್ ಮತ್ತು ಸದಸ್ಯರು ಈ ವೇಳೆ ಹಾಜರಿದ್ದರು.