ವರದಿ ರಾಯಿ ರಾಜ ಕುಮಾರ
ಮಂಗಳೂರು ಕಾರ್ಕಳ ರಾಷ್ಟ್ರೀಯ ಹೆದ್ದಾರಿಯ ಬದಿಗಳಲ್ಲಿ ನಿರ್ಮಿಸಲು ಬಾಕಿ ಇರುವ ಸರ್ವಿಸು ರಸ್ತೆಗಳನ್ನು ಆದಷ್ಟು ಶೀಘ್ರ ಪೂರ್ಣಗೊಳಿಸಲು ಹೆದ್ದಾರಿ ಪ್ರಾಧಿಕಾರಕ್ಕೆ ಈಗಾಗಲೇ ತಿಳಿಸಿದ್ದು ಕಾಮಗಾರಿ ಪ್ರಗತಿಯಲ್ಲಿದೆ. ಈ ಹಿಂದೆ ನಡೆದ ಹೆಚ್ಚಿನ ಅಪಘಾತದ ಸಂದರ್ಭದಲ್ಲಿ ಸಾರ್ವಜನಿಕರ ಹಾಗೂ ದ್ವಿಚಕ್ರ ವಾಹನಗಳವರ ಆಜಾಗರೂಕತೆ ಮುಖ್ಯ ಕಾರಣವಾಗಿದೆ. ಅದರಿಂದ ಸಾರ್ವಜನಿಕರು, ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳ ಚಾಲಕರು ಬಹಳ ಜಾಗರೂಕತೆಯಿಂದ ಹೆದ್ದಾರಿಗೆ ಪ್ರವೇಶಿಸುವ ಹಾಗೂ ಹೆದ್ದಾರಿಯಿಂದ ನಿರ್ಗಮಿಸುವಾಗ ಕ್ರಮವನ್ನು ಕೈಗೊಳ್ಳಬೇಕು. ಸುರಕ್ಷಿತ ಪ್ರಯಾಣಕ್ಕಾಗಿ ಹಿಂದೆ ಮುಂದೆ ಎಲ್ಲಾ ಕಡೆಯೂ ನೋಡಿ ಮುಂದಿನ ಪ್ರಯಾಣಕ್ಕೆ ಮುಂದುವರಿಯಬೇಕಾದ ಅಗತ್ಯವಿದೆ. ಇದನ್ನು ಎಲ್ಲರೂ ಪಾಲಿಸಬೇಕು ಎಂದು ಸಂಸದ ಬ್ರಿಜೇಶ್ ಚೌಟ ಮನವಿ ಮಾಡಿದರು.

ಅವರು ಜೂನ್ 7ರಂದು ಮೂಡುಬಿದಿರೆ ತಾಲೂಕಿನ ಅಲಂಗಾರು, ಬನ್ನಡ್ಕ, ಕೆಸರುಗದ್ದೆ, ಬೆಳುವಾಯಿ ಪರಿಸರದ ಪರಿಸ್ಥಿತಿಯನ್ನು ಅವಲೋಕಿಸಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಸ್ಥಳೀಯ ಶಾಸಕ ಉಮಾನಾಥ ಕೋಟ್ಯಾನ್ ಹಾಗೂ ಹಲವಾರು ಸ್ಥಳೀಯ ಮುಖಂಡರಗಳು ಹಾಜರಿದ್ದರು.
ಪ್ರಯಾಣಿಕರ ಅವಶ್ಯಕತೆಗೆ ಅನುಗುಣವಾಗಿ ಸ್ಕೈ ವಾಕ್ ಇತ್ಯಾದಿಗಳನ್ನೂ ನಿರ್ಮಿಸಿ ಅನುಕೂಲ ಮಾಡಿಕೊಡಲಾಗುವುದು ಎಂದು ಸ್ಥಳೀಯರಿಗೆ ಭರವಸೆ ಇತ್ತರು.
