ಉಡುಪಿ: ಭಾರತ ಸರ್ಕಾರದ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಎಸ್ ಕುಂದರ್, ಬುಧವಾರ ಬ್ರಹ್ಮಾವರ ಸ್ತ್ರೀಶಕ್ತಿಭವನದಲ್ಲಿ ಮಹಿಳಾ ಸಂಬಂಧಿ ವಿಷಯಗಳ ಕುರಿತು ವಿಶೇಷ ಪರಿಶೀಲನಾ ಸಭೆಯನ್ನು ನಡೆಸಿದರು.
ಜಿಲ್ಲೆಯಲ್ಲಿ ಮಹಿಳೆಯರ ಮತ್ತು ಮಕ್ಕಳ ವಿರುದ್ಧ ನಡೆದಿರುವ ಪ್ರಕರಣಗಳ ಕುರಿತು ಸಭೆಯಲ್ಲಿ ಹಾಜರಿದ್ದ ಆರಕ್ಷಕ ಅಧಿಕಾರಿಗಳಿಂದ ಮಾಹಿತಿ ಪಡೆದ ಸದಸ್ಯರು, ಈವರೆಗೆ ದಾಖಲಾದ ಪ್ರಕರಣಗಳು, ವಿಲೇವಾರಿಯಾದ ಪ್ರಕರಣಗಳು ಹಾಗೂ ಅನುಸರಣೆಯಲ್ಲಿರುವ ಪ್ರಕರಣಗಳ ಬಗ್ಗೆ ಕೂಲಂಕುಶವಾಗಿ ಚರ್ಚಿಸಿದರು.
ಮುಂದುವರಿದ ಜಿಲ್ಲೆಗಳಾಗಿರುವ ಕರಾವಳಿ ಭಾಗದಲ್ಲಿ, ಮಹಿಳೆಯರಿಗೆ ವಿಶೇಷ ಸ್ಥಾನಮಾನವಿದ್ದು, ದೇಶದ ಹಾಗೂ ರಾಜ್ಯದ ಇತರೆಡೆಗಳಿಗೆ ಹೋಲಿಸಿದಾಗ ಇಂತಹ ಪ್ರಕರಣಗಳ ಸಂಖ್ಯೆ ವಿರಳವಿದ್ದು, ಆದರೂ ಕೆಲವೊಂದು ಪ್ರದೇಶಗಳಲ್ಲಿ ಪ್ರಕರಣಗಳು ಕಂಡುಬರುತ್ತಿದ್ದು, ಈ ಬಗ್ಗೆ ಸಂಬಂಧಿತ ಇಲಾಖೆಗಳು, ಸಾರ್ವಜನಿಕರು, ಸಂಘ ಸಂಸ್ಥೆಗಳು ಕೈಜೋಡಿಸಿ ಮಹಿಳೆಯರ/ಮಕ್ಕಳ ರಕ್ಷಣೆಗೆ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಲು ಕರೆ ನೀಡಿದರು. ವಿಶೇಷವಾಗಿ ಇತರೆ ರಾಜ್ಯ ಹಾಗೂ ಜಿಲ್ಲೆಗಳಿಂದ ಕಾರ್ಮಿಕರು ಉಡುಪಿ ಜಿಲ್ಲೆಗೆ ಆಗಮಿಸುತ್ತಿದ್ದು, ಅಂತಹವರಿಗೆ ಮೂಲಭೂತ ಸೌಕರ್ಯ ಹಾಗೂ ರಕ್ಷಣೆ ಒದಗಿಸುವ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲು ಸಂಬಂಧಪಟ್ಟ ಎಲ್ಲಾ ಇಲಾಖೆಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ದಾಖಲಾಗಿರುವ ಪ್ರಕರಣಗಳ ವಿಚಾರಣಾ ಹಂತವನ್ನು ಹಾಗೂ ತನಿಖೆಯ ಬಗ್ಗೆ ವರದಿಯನ್ನು ಸಮಯೋಚಿತವಾಗಿ ಸಲ್ಲಿಸಲು ಹಾಗೂ ಸಮಸ್ಯೆಗಳಿಗೆ ಸಂವೇದನಾತ್ಮಕವಾಗಿ ಸ್ಪಂದಿಸಲು ಆರಕ್ಷಕ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಸ್ಥಳೀಯ ತಾಲೂಕು ಪಂಚಾಯತ್ ಸದಸ್ಯ ಸುಧೀರ್ ಕುಮಾರ್ ಶೆಟ್ಟಿ, ಸ್ಥಳೀಯ ಗ್ರಾಮ ಪಂಚಾಯತ್ ಕಾರ್ಯದರ್ಶಿಗಳು, ಬ್ರಹ್ಮಾವರ ಆರಕ್ಷಕ ಠಾಣೆಯ ಆರಕ್ಷಕ ನಿರೀಕ್ಷಕರು, ಮಹಿಳಾ ಆರಕ್ಷಕ ಠಾಣೆಯ ಅಧಿಕಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಿಬ್ಬಂದಿಗಳು, ಸ್ಥಳೀಯ ಸಾರ್ವಜನಿಕರು, ಗ್ರಾಮ ಪಂಚಾಯತ್ನ ಸದಸ್ಯರು ಉಪಸ್ಥಿತರಿದ್ದರು.