ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಹಂಪನಕಟ್ಟೆಯ ವಿಶ್ವವಿದ್ಯಾನಿಲಯ ಕಾಲೇಜಿನ ಎನ್‌ಎಸ್‌ಎಸ್‌ ಘಟಕಗಳ ಸಹಯೋಗದೊಂದಿಗೆ ಪಕ್ಷಿಕೆರೆಯ ಕೆಮ್ರಾಲ್‌ನ ಪಂಜದಗುತ್ತು ಶಾಂತಾರಾಮ ಶೆಟ್ಟಿ ಸರಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿರುವ ಎನ್‌ಎಸ್‌ಎಸ್‌ ವಾರ್ಷಿಕ ಶಿಬಿರವನ್ನು ಸೋಮವಾರ ಮೂಲ್ಕಿ- ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್‌ ಉದ್ಘಾಟಿಸಿದರು.

ತಮ್ಮ ಉದ್ಘಾಟನಾ ಭಾಷಣದಲ್ಲಿ ಶಾಸಕರು, ಶಿಬಿರದ ಉದ್ದೇಶ ಸೇವಾಮನೋಭಾವವನ್ನು ಬೆಳೆಸುವುದು. ಅವಿಭಜಿತ ಜಿಲ್ಲೆಯ ಪ್ರತಿಷ್ಠಿತ ಗವರ್ನಮೆಂಟ್ ಕಾಲೇಜು ಅಂದರೆ ಈಗಿನ ವಿವಿ ಕಾಲೇಜು, ನಾವೆಲ್ಲ ಒಂದೇ ಎನ್ನುವ ಭಾವನೆಯೊಂದಿಗೆ ಸಮಾನತೆಯಿಂದ ಜೀವಿಸುವುದನ್ನು ತಿಳಿಸಿಕೊಡುತ್ತಿದೆ, ಎಂದು ಶ್ಲಾಘಿಸಿದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ವಿವಿ ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ, ಎನ್‌ಎಸ್‌ಎಸ್‌ ಸ್ವಯಂಸೇವಕರು ಸಹಬಾಳ್ವೆಯ ಸಂದೇಶ ಸಾರುವಂತಾಗಲಿ. ಶಾಲೆಗೆ ತಮ್ಮಿಂದಾದಷ್ಟು ಕೊಡುಗೆ ನೀಡಲಿ, ಎಂದು ಹಾರೈಸಿದರು.

ಕೆಮ್ರಾಲ್‌ ಗ್ರಾಮ ಪಂಚಾಯತ್‌ ಅಧ್ಯಕ್ಷೆ ಲೀಲಾ ಕೃಷ್ಣಪ್ಪ ಪೂಜಾರಿ, ಜಿಲ್ಲಾ ಪಂಚಾಯತ್‌ ಮಾಜಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಪಂಜದಗುತ್ತು ಶಾಂತಾರಾಮ ಶೆಟ್ಟಿ ಸರಕಾರಿ ಪ್ರೌಢಶಾಲೆಯ ಹಿರಿಯ ಅಧ್ಯಾಪಿಕೆ ಮಥುರಾ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದೇವರಾಜ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ʼವಿಜ್ಞಾನ ಮತ್ತು ವೈಜ್ಞಾನಿಕ ಮನೋಧರ್ಮಕ್ಕಾಗಿ ಯುವಜನತೆʼ ಎಂಬ ಧ್ಯೇಯದೊಂದಿಗೆ ಈ ಶಿಬಿರ ಆರಂಭಗೊಂಡಿದ್ದು, ಮೇ 15 ರವರೆಗೆ ನಡೆಯಲಿದೆ.

ವಿದ್ಯಾರ್ಥಿನಿ ಪ್ರಗತಿ ಕಾರ್ಯಕ್ರಮ ನಿರೂಪಿಸಿದರು. ಕೌಶಿಕ್ ಮತ್ತು ಬಳಗ ಪ್ರಾರ್ಥನೆ ನೆರವೇರಿಸಿತು. ವಿವಿ ಕಾಲೇಜಿನ ಎನ್‌ಎಸ್‌ಎಸ್‌ ಅಧಿಕಾರಿ ಡಾ. ಸುರೇಶ್ ಸ್ವಾಗತ ಕೋರಿದರು. ಸಮಾಜಶಾಸ್ತ್ರ ಉಪನ್ಯಾಸಕಿ ಡಾ. ರಾಜೇಶ್ವರಿ ಧನ್ಯವಾದ ಸಮರ್ಪಿಸಿದರು. ಎನ್‌ಎಸ್‌ಎಸ್‌ ಅಧಿಕಾರಿ ಡಾ. ಗಾಯತ್ರಿ ಎನ್‌, ಭೂಗೋಳಶಾಸ್ತ್ರ ವಿಭಾಗದ ಅಕ್ಷಯ್‌ ಮೊದಲಾದವರು ಉಪಸ್ಥಿತರಿದ್ದರು.