ಮುಖ್ಯ ಮಂತ್ರಿಗಳು ನಿಸ್ಸಹಾಯಕರು, ಗೃಹ ಮಂತ್ರಿಗಳು ಅಸಮರ್ಥರು, ಅಧಿಕಾರಿಗಳು ಯಾವುದೇ ಮುತುವರ್ಜಿ ವಹಿಸಲಾಗದವರಾದವರು, ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ನಾನಾ ಕೋಮು ಗಲಭೆಯ ಕೊಲೆಗಳು ಆಗಿವೆ. ಶಿವಮೊಗ್ಗದಲ್ಲಿ ಹರ್ಷ ಕೊಲೆಯಾದಾಗ 25 ಲಕ್ಷ ಪರಿಹಾರ ಕೊಟ್ಟರು, ಪ್ರವೀಣ್ ಮನೆಗೆ ಬಂದ ಮುಖ್ಯಮಂತ್ರಿಗಳು 25 ಲಕ್ಷ ಪರಿಹಾರ ನೀಡಿದ್ದಾರೆ. ಆದರೆ ಅಲ್ಲೇ ಹತ್ತಿರದಲ್ಲಿ ಆದ ಮಸೂದ್ ಕೊಲೆಯನ್ನು ಮುಖ್ಯಮಂತ್ರಿಗಳು ಗಮನಿಸದಿರುವುದು ಏಕೆ? ಧರ್ಮಸ್ಥಳದ ಬಳಿ ದಲಿತ ದಿನೇಶ್ ಕೊಲೆ ಆಯಿತು. ಅಲ್ಲೂ ಈ ಸರಕಾರ ಹೋಗಲಿಲ್ಲ, ಪರಿಹಾರ ನೀಡಲಿಲ್ಲ ಯಾಕೆ ಎಂದು ಹರೀಶ್ ಕುಮಾರ್ ಪ್ರಶ್ನಿಸಿದರು.

ಸುರತ್ಕಲ್‌ನಲ್ಲಿ ಫಾಜಿಲ್ ಕೊಲೆ ಈ ಸಮಯದಲ್ಲೇ ನಡೆದಿದೆ,ಕೆಲವರು ಕೋಮು ಸಂಘರ್ಷವನ್ನು ಜೀವಂತವಾಗಿಡಲು ಈ ಕೊಲೆ ಮಾಡುತ್ತಿದ್ದಾರ, ಬಡವರ ಮತ್ತು ಅಮಾಯಕರ ಕೊಲೆ ಆಗುತ್ತದೆ, ಜನಾರ್ದನ ಪೂಜಾರಿಯವರು ಹಿಂದೆ ಹೇಳಿದ್ದರು. ಹಿಂದುತ್ವದ ಅಮಲು ಇರಿಸಿಕೊಳ್ಳಬೇಡಿ ದೊಡ್ಡ ಸಂಘ ನಾಯಕರ ಮಕ್ಕಳು ದೊಡ್ಡ ಹುದ್ದೆಗೆ ಏರುತ್ತಾರೆ ಬಡವರ ಮಕ್ಕಳು ಜೈಲಿಗೆ ಹೋಗುತ್ತಾರೆ. ಅದು ಕಾಲು ಶತಮಾನದ ಬಳಿಕವಾದರೂ ಯುವಕರಿಗೆ ಮನನ ಮಾಡಬೇಕು ಎಂದು ಹರೀಶ್ ಕುಮಾರ್ ಹೇಳಿದರು.

ಇಲ್ಲಿನ ಸಂಸದರು ಕೇರಳದವರಿಂದ ಪ್ರವೀಣ್ ಕೊಲೆ  ಆಗಿದೆ ಎಂದಿದ್ದಾರೆ, ಹಾಗಾದರೆ ಬೆಳ್ಳಾರೆಯ ಇಬ್ಬರು ಮುಸ್ಲಿಂ ಯುವಕರನ್ನು ಬಂಧಿಸಿದ್ದು ಏಕೆ? ನಮ್ಮ ಆಡಳಿತದಲ್ಲಿ ಹಿಂದೂಗಳನ್ನು ಮುಟ್ಟಲಾಗದು ಎಂದರು. ಆದರೆ ಆಗುತ್ತಿದೆಯಲ್ಲ, ಬಿಜೆಪಿ ಮತ್ತು ಅದು ಪೋಷಿಸುವ ಎಐಎಂಐಎಂ ಮೊದಲಾದ ಪಕ್ಷಗಳ ಕೋಮು ಪ್ರಚಾರದಿಂದ ಈ ಕೊಲೆಗಳು ಆಗುತ್ತಿವೆ, ನೇರ ಕಾರಣ ಬಿಜೆಪಿ ಎಂದು ಹರೀಶ್ ಕುಮಾರ್ ಹೇಳಿದರು.

ಶೋಭಾ ಕರಂದ್ಲಾಜೆಯರು ಎಸ್‌ಡಿಪಿಐ ನಿಷೇಧಿಸಿ ಎಂದು ಕೂಗುತ್ತಿದ್ದರು, ಅವರ ಸರಕಾರ ಇರುವಾಗ ಯಾಕೆ ನಿಷೇಧಿಸಿಲ್ಲ. ಬಿಜೆಪಿಯ ತೇಜಸ್ವಿ ಹೇಳುತ್ತಾರೆ ಕಾಂಗ್ರೆಸ್ ಸರಕಾರ ಇದ್ದಿದ್ದರೆ ಕಲ್ಲು ಹೊಡೆಯಬಹುದಿತ್ತು ಎನ್ನುತ್ತಾರೆ. ಬಿಜೆಪಿ ಸರಕಾರವು ಬೇಜವಾಬ್ದಾರ, ನಿಷ್ಫಲ, ದುರ್ಬಲ ಸರಕಾರವಾಗಿದೆ, ಗೃಹ ಮಂತ್ರಿ ರಾಜೀನಾಮೆ ನೀಡಬೇಕು , ಜೈಲಿನಲ್ಲಿ ರಾಜ ಮರ್ಯಾದೆ ಪಡೆಯುವವರ ಬಗೆಗೆ ತನಿಖೆ ನಡೆಯಲಿ, ಸರಕಾರ ನಡೆಸಲಾಗದಿದ್ದರೆ ರಾಜೀನಾಮೆ ಕೊಟ್ಟು ತೊಲಗಿ ಎಂದು ಅವರು ಕೇಳಿದರು.

ನಾವು ಎಂದೂ ವೋಟ್ ಬ್ಯಾಂಕ್ ರಾಜಕೀಯ ಮಾಡಿಲ್ಲ, ಬಿಜೆಪಿ ಮಾಡುತ್ತಿದೆ ಎಂಬುದು ಈಗಷ್ಟೇ ಜನರಿಗೆ ಅರ್ಥವಾಗುತ್ತಿದೆ. ಕಾರ್ಯಕರ್ತರ ಧಿಕ್ಕಾರಕ್ಕೆ ಬೆದರಿ ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಓಡಿದ್ದಾರೆ. ಮರುದಿನದ ಸಭೆ ರದ್ದು ಮಾಡಿದ್ದಾರೆ, ಇದು ಅವರ ವೋಟ್ ಪಾಲಿಟಿಕ್ಸ್ ಎಂಬುದು ಸ್ಪಷ್ಟ ಎಂದು ಹರೀಶ್ ಕುಮಾರ್ ಅವರು ಪ್ರಶ್ನೆಗೆ ಉತ್ತರಿಸುತ್ತ ಹೇಳಿದರು.

ಬಿಜೆಪಿಯು ಖರೀದಿ ಸರಕಾರ ಮಾಡಿದೆ, ನಾವು ವಾಮ ಮಾರ್ಗದ ಸರಕಾರ ಮಾಡುವವರಲ್ಲ, ಮತ್ತೆ ಪಬ್ ದಾಳಿಯಂಥವು ನಡೆಯುತ್ತಿವೆ. ತ್ವರಿತ ನ್ಯಾಯಾಲಯ ಮಾಡಿ ಹತ್ತು ವರುಷದೀಚೆಗಿನ ಎಲ್ಲ ಕೊಲೆಗಳ ತನಿಖೆ ನಡೆಸಿ ತೀವ್ರ ವಿಲೇವಾರಿ ಮಾಡಿ ಎಂದು ಮತ್ತೊಂದು ಪ್ರಶ್ನೆಗೆ ಅವರು ಉತ್ತರಿಸಿದರು.