ಮೂಡುಬಿದಿರೆ: ವನಜಾಕ್ಷಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಜ್ಯೋತಿನಗರ ಶಾಲೆ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ಸಾಮಗ್ರಿ ವಿತರಣೆ

ವರದಿ ರಾಯಿ ರಾಜಕುಮಾರ
ಮೂಡುಬಿದಿರೆ: ಧನಲಕ್ಷ್ಮಿ ಗೇರುಬೀಜ ಉದ್ಯಮ ಪ್ರವರ್ತಿಸಿರುವ ವನಜಾಕ್ಷಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕಳೆದ 14 ವರ್ಷಗಳಂತೆ ಈ ವರ್ಷವೂ ಜ್ಯೋತಿನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ಸಾಮಗ್ರಿ ವಿತರಣಾ ಕಾರ್ಯಕ್ರಮ ಜೂನ್ 9 ರಂದು ನಡೆಯಿತು. ಉಚಿತ ಪುಸ್ತಕಗಳನ್ನು ವಿತರಿಸಿ ಮಾತನಾಡಿದ ಟ್ರಸ್ಟ್ ನ ಸಂಸ್ಥಾಪಕ ಉದ್ಯಮಿ, ಹಳೆ ವಿದ್ಯಾರ್ಥಿ ಶ್ರೀಪತಿ ಭಟ್ ಮಾತನಾಡಿ, ವಿದ್ಯಾರ್ಥಿಗಳು ಬಹಳ ಶ್ರದ್ಧೆ ಹಾಗೂ ಭಕ್ತಿಯಿಂದ ವಿದ್ಯೆಯನ್ನು ಪಡೆಯಬೇಕು. ಗುರು ಹಿರಿಯರಲ್ಲಿ ಶೃದ್ಧೆ ,ಭಕ್ತಿ ಇದ್ದರೆ ಮಾತ್ರ ವಿದ್ಯೆ ಸಫಲಗೊಳ್ಳಲು ಸಾಧ್ಯ ಇದೆ. ವಿದ್ಯೆ ಕಲಿತ ನಂತರ ಬದುಕಿನಲ್ಲಿ ಸಾರ್ಥಕತೆಯನ್ನು ಕಾಣಲು, ಗೌರವವನ್ನು ಪಡೆಯಲು ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಕರೆಕೊಟ್ಟರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಎಂ ಸಿ ಎಸ್ ಅಧ್ಯಕ್ಷ ಬಾಹುಬಲಿ ಪ್ರಸಾದ್ ಉತ್ತಮ ಕಲಿಕೆ ಬಹಳ ಉನ್ನತ ಮಟ್ಟಕ್ಕೆ ಮನುಷ್ಯನನ್ನು ಕೊಂಡೊಯ್ಯುವುದಕ್ಕೆ ಸಾಧ್ಯ ಇದೆ ಎಂದು ಹಲವಾರು ಉದಾಹರಣೆಗಳನ್ನು ತಿಳಿಸಿದರು. ಶಿಸ್ತು, ಸಂಯಮ, ಪ್ರಾಮಾಣಿಕತೆ, ಉತ್ತಮ ವ್ಯವಹಾರಗಳಿಂದ ಮನುಷ್ಯ ಕೀರ್ತಿ ಗಳಿಸಲು ಸಾಧ್ಯವಿದೆ. ಪಡೆದುದನ್ನು ಉತ್ತಮ ರೀತಿಯಲ್ಲಿ ಉಳಿಸಿಕೊಂಡು ಬೆಳೆಸಿಕೊಳ್ಳುವ ಪ್ರಯತ್ನವನ್ನು ವಿದ್ಯಾರ್ಥಿಗಳು ಮಾಡಬೇಕು ಎಂದು ಟ್ರಸ್ಟ್ ನ ದೀಪ್ತಿ ಭಟ್ ತಿಳಿಸಿದರು.

ವೇದಿಕೆಯಲ್ಲಿ ಟ್ರಸ್ಟ್ ನ ಬಲರಾಮ್ ಕೆಎಸ್, ಲಯನ್ಸ್ ಸಂಸ್ಥೆಯ ರಿಚರ್ಡ್ ಕರ್ಡೋಸಾ, ವಿಲಿಯಂ ಮಿನೆಜೆಸ್, ಎಸ್ ಡಿ ಎಂ ಸಿ ಉಪಾಧ್ಯಕ್ಷ ಗಣೇಶ್, ಭಾಸ್ಕರ್ ಹಾಜರಿದ್ದರು. ಮುಖ್ಯ ಶಿಕ್ಷಕಿ ಅಪೋಲಿಸ್ ಮೊನಿಸ್ ಸ್ವಾಗತಿಸಿದರು. ಗ್ರೇಸಿ ಡಿಸೋಜಾ ಕಾರ್ಯಕ್ರಮ ನಿರ್ವಹಿಸಿದರು. ಸುನೀತಾ ಪತ್ರಾವೋ ವಂದಿಸಿದರು.

Leave a Reply

Your email address will not be published. Required fields are marked *